UN NETWORKS
ಉಳ್ಳಾಲ: ಕಾಂಗ್ರೆಸ್ ಪಕ್ಷದಲ್ಲಿಯೇ ಹಲವು ವರ್ಷಗಳ ಕಾಲ ಇದ್ದು, ಉಳ್ಳಾಲ ಕ್ಷೇತ್ರದಲ್ಲಿ ಪಕ್ಷದ ಜವಾಬ್ದಾರಿಗಳನ್ನು ಹೊತ್ತು ಕಳೆದ ಐದು ವರ್ಷಗಳಿಂದ ಪಕ್ಷದಿಂದ ದೂರವಾಗಿದ್ದ ಉಳ್ಳಾಲನಗರಸಭೆಯ ಪಕ್ಷೇತರ ಅಭ್ಯರ್ಥಿ ಫಾರುಕ್ ಯು.ಹೆಚ್ ಸೇರಿದಂತೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ದಿನಕರ್ ಉಳ್ಳಾಲ ಸಹಿತ ಹಲವರ ತಂಡ ಶುಕ್ರವಾರ ಉಳ್ಳಾಲದ ಮಾಸ್ತಿಕಟ್ಟೆಯಲ್ಲಿನ ಜೆಡಿಎಸ್ ಚುನಾವಣಾ ಕಾರ್ಯಾಲಯದಲ್ಲಿ ಸೇರ್ಪಡೆಗೊಂಡರು.
ಪಕ್ಷಕ್ಕೆ ಸೇರ್ಪಡೆಗೊಂಡು ಬಳಿಕ ಮಾತನಾಡಿದ ನಗರಸಭೆ ಸದಸ್ಯ ಫಾರುಕ್ ಯು.ಹೆ ಮಂಗಳೂರು (ಉಳ್ಳಾಲ) ಕ್ಷೇತ್ರದ ಕಾಂಗ್ರೆಸ್ ನಲ್ಲಿ ಶಿಕ್ಷಿತರನ್ನು ಕಡೆಗಣಿಸುವ ಪರಿಪಾಠ ಶಾಸಕ ಖಾದರ್ ಅವರಿಂದ ಆಗಿದೆ. ತಮಗೆ ಬೇಕಾದವರನ್ನು ಗುಂಪು ಕೂಡಿಸಿಕೊಂಡು ಅವರ ಕೈಯಲ್ಲೇ ಜವಾಬ್ದಾರಿಯನ್ನು ನೀಡುವ ಕಾರ್ಯ ಆಗಿದೆ. ಅಹಂಕಾರದ ಮಾತುಗಳಿಂದ ನೊಂದು ಉಳ್ಳಾಲದಲ್ಲಿ ಜೆಡಿಎಸ್ ನ ಅಶ್ರಫ್ ಸ್ಪರ್ಧಿಸುತ್ತಿದ್ದಾರೆ. ಅಹಂಕಾರಿಗಳನ್ನು ಅಲ್ಲಾಹು ಎಂದಿಗೂ ಮೆಚ್ಚುವುದಿಲ್ಲ. ಬಿಜೆಪಿಯನ್ನು ಪರೋಕ್ಷವಾಗಿ ಗೆಲ್ಲಿಸುವ ತಂತ್ರ ಅನ್ನುವ ಅಪಪ್ರಚಾರದಲ್ಲೂ ಕಾಂಗ್ರೆಸ್ಸಿಗರು ತೊಡಗಿದ್ದಾರೆ. ಆದರೆ ಎಂತಹ ಪ್ರಚಾರ ನಡೆಸಿದರೂ ಖಾದರ್ ಸೋಲು ಖಚಿತ ಎಂದರು.
ಜಾತ್ಯಾತೀತ ಜನತಾದಳದ ಜಿಲ್ಲಾ ಅಧ್ಯಕ್ಷ ಮಹಮ್ಮದ್ ಕುಂಞ ಮಾತನಾಡಿ ಖಾದರ್ ಅವರ ಆಹಂಕಾರದ ಮಾತುಗಳು ಇದೀಗ ಅವರಿಗೆ ನಿದ್ರೆಯಿಲ್ಲದ ರಾತ್ರಿಗಳನ್ನು ನಿರ್ಮಿಸಿದೆ. ಉಳ್ಳಾಲದಲ್ಲಿ ಅಶ್ರಫ್ ಅವರಿಗೆ ಸೇರಿರುವ ಬೆಂಬಲಿಗರಿಂದಾಗಿ ಹೆದರಿ ಖಾದರ್ ಮತ್ತು ಪಟಾಲಾಂ ರಾತ್ರಿಯಿಡೀ ಸುತ್ತಾಡುತ್ತಿದೆ. ಸಹೋದರಿಯೇ ತನ್ನ ಸಹೋದರನನ್ನು ಹತ್ಯೆ ನಡೆಸಿದಾಗ ಉಳ್ಳಾಲ ಭಾಗದ ಹಲವು ಅಮಾಯಕ ಯುವಕರನ್ನು ಠಾಣೆಗೆ ಕರೆಸಿ ಹೊಡೆಸುವಲ್ಲಿಯೂ ಖಾದರ್ ಕೈವಾಡವಿತ್ತು. ಜಿಲ್ಲೆಗೆ ಬೆಂಕಿ ಕೊಡುವುದಾಗಿ ಹೇಳಿದ ನಳಿನ್ ಕಟೀಲ್ ಮತ್ತು ಪ್ರಚೋದನಕಾರಿ ಮಾತುಗಳನ್ನಾಡುವ ಕಲ್ಲಡ್ಕ ಭಟ್ ವಿರುದ್ಧ ಪಿಟ್ಟಿ ಕೇಸುಗಳನ್ನು ಹಾಕಿ ಬಿಡುಗಡೆಗೊಳಿಸುವಂತಹ ಮುಸ್ಲಿಂ ನಾಯಕನೆಂದು ಹೇಳಿಕೊಳ್ಳುವ ಖಾದರ್ ಬೇಕಾ? ಎಂದು ಪ್ರಶ್ನಿಸಿದರು. ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ತಮ್ಮಲ್ಲಿ ಖಾದರ್ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಸಚಿವರಾಗಿದ್ದ ಸಂದರ್ಭ ಬೆಡ್ ಶೀಟ್, ಔಷಧಿಯ ವ್ಯವಸ್ಥೆಗಳನ್ನೆಲ್ಲಾ ಹಾಳು ಮಾಡಿಬಿಟ್ಟಿದ್ದಾರೆ.
ಇದನ್ನು ಸರಿಪಡಿಸಲು ನನ್ನಿಂದಲೂ ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡಿರುವುದಾಗಿ ತಿಳಿಸಿದ ಅವರು ಆರೋಗ್ಯ ಕ್ಷೇತ್ರದಲ್ಲಿ ಪ್ರಾಮಾಣಿಕ ಅಧಿಕಾರಿ ಮದನಗೋಪಾಲ್ ಅವರನ್ನು ಒಂದೇ ದಿನದಲ್ಲಿ ವರ್ಗಾವಣೆಗೊಳಿಸಿರುವುದು ಖಾದರ್ ಅವರ ಕೈವಾಡವಾಗಿದೆ. ಅಲ್ಪಸಂಖ್ಯಾತರ ಮತಗಳನ್ನು ಸೆಳೆಯಲು ಗುಪ್ತ ಸಭೆಗಳನ್ನು ಅಲ್ಲಲ್ಲಿ ನಡೆಸುತ್ತಿದ್ದಾರೆ. ಕಾರ್ಯಕರ್ತರು ಯಾರೂ ಅಂತಹ ಸಭೆಗಳಲ್ಲಿ ಭಾಗವಹಿಸದೆ ತಪ್ಪು ಗ್ರಹಿಕೆಯನ್ನು ನಡೆಸದಿರಿ ಎಂದು ಸೂಚಿಸಿದರು.
ಜೆಡಿಎಸ್ ಅಭ್ಯರ್ಥಿ ಮಾಜಿ ಮೇಯರ್ ಅಶ್ರಫ್ ಮಾತನಾಡಿ ಹಣದ ಆಸೆಯಿಲ್ಲದೆ ಹಿಂದಿನಿಂದಲೂ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದೇನೆ. ಜನರ ಬೆಂಬಲವೇ ಸ್ಪೂರ್ತಿಯಾಗಿದೆ. ಆಹಂಕಾರದ ಮಾತುಗಳನ್ನು ಯಾರಿಗೂ ಹೇಳದಿರಿ. ಕೆಲ ವರ್ಷಗಳ ಹಿಂದೆ ಮಹಾನಗರಪಾಲಿಕೆ ಚುನಾವಣೆಯಲ್ಲಿ ಖಾದರ್ ಮತ್ತು ತಾನು ಜತೆಯಾಗಿಯೇ ಸ್ಪರ್ಧಿಸಿದ್ದೆವು. ಖಾದರ್ ಠೇವಣಿ ಕಳೆದುಕೊಂಡು ಅತ್ತಾವರ ಕ್ಷೇತ್ರದಿಂದ ಸೋಲು ಕಂಡಿದ್ದರೆ, ಬಂದರು ಪ್ರದೇಶದಲ್ಲಿ ತಾನು ಬಹುಮತದಿಂದ ಆಯ್ಕೆಗೊಂಡಿದ್ದೆ. ಪ್ರತಿಯೊಬ್ಬ ಸಾಮಾನ್ಯ ಮನುಷ್ಯನಿಗೂ ಸಾಮಥ್ರ್ಯವಿದೆ ಅನ್ನುವುದನ್ನು ಅರಿತುಕೊಳ್ಳಬೇಕಿದೆ. ಇದೀಗ ಜೆಡಿಎಸ್ ಪ್ರಭಾವದಿಂದ ಬೆದರಿ ನಾಳೆ ಹಣವುಳ್ಳವರ ಗುಪ್ತ ಸಭೆಯನ್ನು ಕಾಂಗ್ರೆಸ್ ನಡೆಸುತ್ತಿದೆ. ಭಾಗವಹಿಸಿದವರು ಎಂದಿಗೂ ವಂಚನೆಯ ಮಾತುಗಳಿಗೆ ಮರುಳಾಗದಿರಿ ಎಂದರು.
ಜೆಡಿಎಸ್ ಮಂಗಳೂರು ಕ್ಷೇತ್ರ ಅಧ್ಯಕ್ಷ ಮೋಹನದಾಸ ಶೆಟ್ಟಿ, ಮುಖಂಡರುಗಳಾದ ಅಕ್ಸಾ ಉಸ್ಮಾನ್, ಝಾಕಿರ್ ಉಳ್ಳಾಲ್, ನಾಸಿರ್, ಹೆಚ್. ಸಾಲಿ , ನಝೀರ್ ಉಳ್ಳಾಲ್, ವಿದ್ಯಾರ್ಥಿ ಜನತಾದಳದ ಸಿನಾನ್, ಅಝೀಝ್ ಮಲಾರ್, ಮೆಹಬೂಬ್, ಸೂಫಿ ಕುಂಞ ಪುತ್ತುಮೋನು , ಸತ್ತಾರ್ ಸಜಿಪ, ಕುಂಞ ಬಾವಾ , ಝೈನುದ್ದೀನ್ ಮುಂತಾದವರು ಉಪಸ್ಥಿತರಿದ್ದರು.
ಉಳ್ಳಾಲ: ಉಳ್ಳಾಲ ಕ್ಷೇತ್ರದಲ್ಲಿ ಜಾತ್ಯಾತೀತ ಜನತಾದಳದ ಪ್ರಚಾರಕ್ಕೆ ಮಾಜಿ ಪ್ರಧಾನಿ ದೇವೇಗೌಡ, ಸಂಸದ ಓವೈಸೀ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಸೇರಿದಂತೆ ವಿವಿಧ ನಾಯಕರು ಶೀಘ್ರದಲ್ಲೇ ಭಾಗವಹಿಸಲಿದ್ದಾರೆ ಎಂದು ಜಾತ್ಯಾತೀತ ಜನತಾದಳದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞ ಹೇಳಿದ್ದಾರೆ.
ಉಳ್ಳಾಲ ಮಾಸ್ತಿಕಟ್ಟೆಯ ಚುನಾವಣಾ ಕಚೇರಿಯಲ್ಲಿ ಶುಕ್ರವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು
ತೊಕ್ಕೊಟ್ಟು ಉಳ್ಳಾಲ, ದೇರಳಕಟ್ಟೆ, ಮುಡಿಪು ಭಾಗದಲ್ಲಿ ನಡೆಯುವ ಬಹಿರಂಗ ಸಮಾವೇಶಗಳಲ್ಲಿ ಎಲ್ಲಾ ರಾಜ್ಯ ಹಾಗೂ ರಾಷ್ಟ್ರ ಮುಖಂಡರು ಭಾಗವಹಿಸಲಿದ್ದಾರೆ. ಈಗಾಗಲೇ ಎಲ್ಲರನ್ನೂ ಆಹ್ವಾನಿಸಲಾಗಿದೆ. ಅವರಿಂದ ಪ್ರತಿಕ್ರಿಯೆಯೂ ದೊರೆತಿದೆ. ಚುನಾವಣೆ ಶ್ರೀಮಂತರ ಮತ್ತು ಬಡವರ ನಡುವಿನ ಹೋರಾಟವಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡಲಾಗದ, ಮರಳು ಮಾಫಿಯಾದಲ್ಲಿ ತೊಡಗಿಸಿಕೊಂಡಿರುವ ಕಾಂಗ್ರೆಸ್ ಮತ್ತು ಬಿಜೆಪಿಯವರನ್ನು ಜನ ಧಿಕ್ಕರಿಸಲಿದ್ದಾರೆ. ಕ್ಷೇತ್ರದ ಶಾಸಕರು ಪ್ರಚಾರಕ್ಕಾಗಿ ಮಾತ್ರ ಸೀಮಿತವಾಗಿದ್ದಾರೆ. ಅಪಘಾತವಾದಾಗ ಅಲ್ಲಿಗೆ ಓಡಿ ಫೋಟೊ ಕ್ಲಿಕ್ಕಿಸಿಕೊಂಡು ಪ್ರಚಾರ ಪಡೆಯುವಂತಹ ಜಾಯಮಾನ ಖಾದರ್ ಅವರದ್ದಾಗಿದೆ. ಜನರ ಅಭಿವೃದ್ಧಿಗೆ ಕೊಡಬೇಕಾದ ಮಹತ್ವವನ್ನು ಪ್ರಚಾರಕ್ಕಾಗಿ ನೀಡುತ್ತಿದ್ದಾರೆ ಎಂದರು.
ಈ ಸಂದರ್ಭ ಜೆಡಿಎಸ್ ಮಂಗಳೂರು ಕ್ಷೇತ್ರ ಅಧ್ಯಕ್ಷ ಮೋಹನದಾಸ ಶೆಟ್ಟಿ, ಮುಖಂಡರುಗಳಾದ ಅಝೀಝ್ ಮಲಾರ್, ಅಕ್ಸಾ ಉಸ್ಮಾನ್, ಝಾಕಿರ್ ಉಳ್ಳಾಲ್, ನಾಸಿರ್, ಹೆಚ್. ಸಾಲಿ , ನಝೀರ್ ಉಳ್ಳಾಲ್, ವಿದ್ಯಾರ್ಥಿ ಜನತಾದಳದ ಸಿನಾನ್, ದಿನಕರ್ ಉಳ್ಳಾಲ್, ಫಾರುಕ್ ಯು.ಹೆಚ್ ಉಪಸ್ಥಿತರಿದ್ದರು.


