UN NETWORKS
ಮುಡಿಪು: ಕೊಣಾಜೆ ಠಾಣಾ ವ್ಯಾಪ್ತಿಯ ಮುಡಿಪು ಸಮೀಪದ ನವಗ್ರಾಮ ಸೈಟ್ನಲ್ಲಿ ಬಾವಿನಲ್ಲಿ ಸತ್ತಿದ್ದ ಬೆಕ್ಕನ್ನು ತೆಗೆಯಲೆಂದು ಇಳಿದಿದ್ದ ವ್ಯಕ್ತಿಯು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
ನವಗ್ರಾಮ ಸೈಟ್ನ ಸುಮತಿ ಎಂಬವರ ಪುತ್ರ ರಮೇಶ್ (38) ಎಂಬವರೇ ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಇವರು ತಮ್ಮ ಮನೆಯ ಬಳಿಯ ಬಹಳ ಆಳವಾದ ಬಾವಿಗೆ ಕಳೆದ ಕೆಲವು ದಿನಗಳ ಹಿಂದೆ ಬೆಕ್ಕು ಬಿದ್ದು ಸತ್ತು ಹೋಗಿತ್ತು. ಅಲ್ಲದೆ ಬಾವಿಯ ನೀರು ವಾಸನೆ ಬರುತ್ತಿದ್ದುದರಿಂದ ಬಳಕೆ ಮಾಡಲೂ ಆಗುತ್ತಿರಲಿಲ್ಲ. ಅಲ್ಲದೆ ಮನೆಯ ಅಂಗಳದಲ್ಲಿಯೇ ಇರುವ ದೇವಸ್ಥಾನವೊಂದರ ಪೂಜಾ ಕಾರ್ಯಕ್ರಮವು ಶನಿವಾರ ನಡೆಯಲಿತ್ತು.
ಆದ್ದರಿಂದ ನೀರಿನ ಅಗತ್ಯತೆಗಾಗಿ ಸತ್ತ ಬೆಕ್ಕನ್ನು ತೆಗೆಯಲೆಂದು ಶುಕ್ರವಾರ ಹಗ್ಗದ ಮೂಲಕ ಬಾವಿಗೆ ಇಳಿದಿದ್ದರು. ಈ ಸಂದರ್ಭದಲ್ಲಿ ಬೆಕ್ಕನ್ನು ಮೇಲಕ್ಕೆ ತೆಗೆದು ವ್ಯವಸ್ಥೆ ಮಾಡಲಾಗಿತ್ತು. ಬಳಿಕ ತಾನು ಬಾವಿಯಿಂದ ಮೇಲೇರುವ ಸಂದರ್ಭದಲ್ಲಿ ಅರ್ಧದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಬಾವಿಯು ಬಹಳ ಆಳವಾಗಿ ಇದ್ದುದರಿಂದ ಮೇಲಿದ್ದ ಇಬ್ಬರು ಏನೂ ಮಾಡಲಾಗದೆ ಅಸಾಹಯಕರಾಗಿದ್ದರು. ಬಳಿಕ ಅಗ್ನಿಶಾಮಕ ದಳದವರು ಬಂದು ಇವರನ್ನು ಮೇಲಕ್ಕೆತ್ತುವಾಗ ಗಂಭೀರ ಗಾಯಗೊಂಡಿದ್ದ ಅವರು ಬಾವಿಯಲ್ಲಿಯೇ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.

ಕೇರಳದಲ್ಲಿ ಕೆಲಸ ಮಾಡುತ್ತಿದ್ದರು: ಅವಿವಾಹಿತರಾಗಿದ್ದ ರಮೇಶ್ ಅವರು ಕೇರಳದಲ್ಲಿ ಕಲ್ಲು ತೆಗೆಯುವ ಮಿಷನ್ನ ಆಪರೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು ಪೂಜಾ ಕಾರ್ಯಕ್ರಮಕ್ಕಾಗಿ ಮನೆಗೆ ಬಂದಿದ್ದರು ಎನ್ನಲಾಗಿದೆ. ಆದರೆ ಬಾವಿಗೆ ಬಿದ್ದಿದ್ದ ಬೆಕ್ಕನ್ನು ತೆಗೆಯಲೆಂದು ಇಳಿದ ರಮೇಶ್ ಅವರು ಕಾಲುಜಾರಿ ಬಿದ್ದು ಬಾವಿಯಲ್ಲೇ ಪ್ರಾಣ ಬಿಟ್ಟಿದ್ದಾರೆ. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


