UN NETWORKS
ಕಿನ್ಯ: ಔಲಿಯಾಗಳನ್ನು ಬಣ್ಣಿಸುವುದು ಅವರ ಹೆಸರಿನಲ್ಲಿ ಝಿಯಾರತ್ ಮಾಡುವುದು ಉತ್ತಮವಾದ ಕಾರ್ಯ. ಪ್ರವಾದಿಯವರು ಗುರು ಹಿರಿಯರನ್ನು ಗೌರವಿಸುವ ವಿಧಾನವನ್ನು ಕಲಿಸಿಕೊಟ್ಟಿದ್ದಾರೆ. ಅದನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಸಯ್ಯದ್ ಮುಕ್ತಾರ್ ತಂಙಳ್ ಕುಂಬೋಳ್ ಹೇಳಿದರು.
ಅವರು ಕಿನ್ಯದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ವಲಿಯುಲ್ಲಾಹಿ ಹುಸೈನ್ ಮುಸ್ಲಿಯಾರ್ರವರ ಹೆಸರಿನಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುವ ಕೂಟು ಝಿಯಾರತ್ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಕಿನ್ಯ ಮಸೀದಿಗೆ ಬಹಳಷ್ಟು ಇತಿಹಾಸ ಇದೆ. ದರ್ಗಾ ಕೂಟು ಝಿಯಾರತ್ ಹಿಂದಿನಿಂದಲೇ ಇಲ್ಲಿದೆ. ಇದನ್ನು ವರ್ಷಂಪ್ರತಿ ಇಲ್ಲಿ ಆಚರಿಸಿಕೊಂಡು ಬರುವ ಪದ್ಧತಿ ನಿರಂತರವಾಗಿರಬೇಕು. ಪ್ರವಾದಿಯವರು ಏನನ್ನು ಕಲಿಸಿದ್ದಾರೆಯೋ ಅವರ ಬೋಧನೆ ಚೌಕಟ್ಟು ಮೀರದೇ, ಇಸ್ಲಾಂನ ನಿಯಮಗಳ ಚೌಕಟ್ಟು ಮೀರದೇ ಕಾರ್ಯಕ್ರಮ ನಡೆಸಿಕೊಂಡು ಬರಬೇಕು ಎಂದು ಕರೆ ನೀಡಿದರು.
ಸಯ್ಯದ್ ಅಮೀರ್ ತಂಙಳ್ ಕಿನ್ಯ ದುವಾ ನೆರವೇರಿಸಿದರು. ಹುಸೈನ್ ಕುಂಞ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಿನ್ಯ ಕೇಂದ್ರ ಮಸೀದಿ ಖತೀಬ್ ಫತ್ತಾಹ್ ಫೈಝಿ ಧಾರ್ಮಿಕ ಉಪನ್ಯಾಸ ನೀಡಿದರು. ಕುತುಬಿಯಾ ಮದ್ರಸದ ಸದ್ರ್ ಫಾರೂಕ್ ದಾರಿಮಿ, ಮುಮ್ತಾಝ್ ಅಲಿ, ಸಾದುಕುಂಞ ಮಾಸ್ಟರ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಅಬೂಸಾಲಿ ಅತಿಥಿಗಳನ್ನು ಸ್ವಾಗತಿಸಿದರು.


