UN NETWORKS
ಉಳ್ಳಾಲ: ಆರೋಗ್ಯ ಕ್ಷೇತ್ರ ಕ್ರೀಡೆಯಲ್ಲಿ ಹೆಚ್ಚಿನ ಪಾತ್ರವನ್ನು ವಹಿಸುತ್ತದೆ. ರೋಗಗಳನ್ನು ದೂರವಾಗಿಸಲು ವೈದ್ಯರು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಸಲಹೆಯನ್ನು ನೀಡುತ್ತಾ ಬರಬೇಕಿದೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ಆಡಳಿತ ವಿಭಾಗದ ಸಹ ಕುಲಾಧಿಪತಿ ವಿಶಾಲ್ ಹೆಗ್ಡೆ ಹೇಳಿದರು.
ದಕ್ಷಿಣ ವಲಯ ಮಟ್ಟದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಅಂತರಕಾಲೇಜು ಕ್ರೀಡಾಕೂಟ ನಿಟ್ಟೆ ಅಕೊಲೇಡ್ಸ್ -2018 ಗೆ ಕ್ಷೇಮ ಆಡಿಟೋರಿಯಂನಲ್ಲಿ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.
ಕ್ರೀಡೆ ಅನ್ನುವುದು ವ್ಯಾವಹಾರಿಕವಾಗಿ ಮನರಂಜನೆಯಾಗಿ ವಿಶ್ವದಾದ್ಯಂತ ಬೆಳೆಯುತ್ತಿದೆ. ಭಾರತದಲ್ಲಿ ಎಸ್ ಎಸ್ ಎಲ್ ಸಿ ನಂತರ ವಿದ್ಯಾರ್ಥಿಗಳು ಕ್ರೀಡೆಯಲ್ಲಿನ ಒಲವನ್ನೇ ದೂರ ಮಾಡುತ್ತಾರೆ. ಹೆತ್ತವರ ಒತ್ತಾಯಕ್ಕಾಗಿ ಕ್ರೀಡೆಯಿಂದ ಮಕ್ಕಳು ದೂರ ಉಳಿಯುವಂತಾಗುತ್ತದೆ. ಅದರ ಪರಿಣಾಮವನ್ನು 40ರ ಹರೆಯದ ಬಳಿಕ ಅನುಭವಿಸಬೇಕಾಗುತ್ತದೆ, 20-40ರ ಹರೆಯದೊಳಗೆ ಕ್ರೀಡೆಯಲ್ಲಿ , ವ್ಯಾಯಾಮದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಲ್ಲಿ ಜೀವನದಲ್ಲಿ ಉತ್ಸಾಹದೊಂದಿಗೆ ಒತ್ತಡದ ಜೀವನಗಳಿಗೆ ಪರಿಹಾರವನ್ನು ಕಾಣಲು ಸಾಧ್ಯ. ಇದರಿಂದ ಮುಂಬರುವ ರೋಗಗಳನ್ನು ತಡೆಯಲು ಸಾಧ್ಯ ಎಂದರು.
ನಿಟ್ಟೆ ವಿ.ವಿ ಕುಲಸಚಿವೆ ಅಲ್ಕಾ ಕುಲಕರ್ಣಿ ಮಾತನಾಡಿ ವೈದ್ಯರು ಸದಾ ಒತ್ತಡಗಳಿಂದ ಇರುವವರಾಗಿರುತ್ತಾರೆ. ಅದನ್ನು ನಿವಾರಿಸಲು ಕ್ರೀಡೆಯಿಂದ ಮಾತ್ರ ಸಾಧ್ಯ. ಆರೋಗ್ಯ ಕಾಪಾಡುವಲ್ಲಿಯೂ ಕ್ರೀಡೆ ಸಹಕಾರಿ ಎಂದರು.
ಕ್ಷೇಮ ವೈದ್ಯಕೀಯ ಕಾಲೇಜಿನ ಡೀನ್ ಡಾ|.ಪಿ.ಯಸ್,ಪ್ರಕಾಶ್, ಕ್ಷೇಮ ವೈಸ್ ಡೀನ್ ಗಳಾದ ಡಾ| ಜೆ.ಪಿ.ಶೆಟ್ಟಿ, ಡಾ| ಅಮೃತ್ ಮಿರಾಜ್ಕರ್, ಎ.ಬಿ.ಶೆಟ್ಟಿ ಸ್ಮಾರಕ ದಂತ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ| ಯು.ಯಸ್.ಕೃಷ್ಣ ನಾಯಕ್, ಸ್ನಾತಕೋತ್ತರ ವಿಭಾಗದ ನಿರ್ದೇಶಕ ಡಾ| ರಾಜೇಂದ್ರ ಪ್ರಸಾದ್, ಫಿಸಿಯೋಥೆರಪಿ ಕಾಲೇಜು ಪ್ರಾಂಶುಪಾಲ ಡಾ| ಧಾಣೇಶ್, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ| ಫಾತಿಮಾ ಡಿಸಿಲ್ವಾ, ಉಪಪ್ರಾಂಶುಪಾಲೆ ಸವಿತಾ ನಾಯಕ್, ಸ್ಟೂಡೆಂಟ್ ಕೌನ್ಸಿಲ್ ಅಧ್ಯಕ್ಷೆ ಇಂದು ಉಪಸ್ಥಿತರಿದ್ದರು.
ಕ್ರೀಡಾ ಸಲಹೆಗಾರ ಡಾ| ಮುರಲೀಕೃಷ್ಣ ಸ್ವಾಗತಿಸಿದರು. ಮಿಖಾಯ ಕಾರ್ಯಕ್ರಮ ನಿರೂಪಿಸಿದರು. ಸ್ಟೂಡೆಂಟ್ ಕೌನ್ಸಿಲ್ ಸ್ಪೋಟ್ರ್ಸ್ ಸೆಕ್ರಟರಿ ಅಜಯ್ ಶರ್ಮಾ ವಂದಿಸಿದರು.


