UN NETWORKS
ತೊಕ್ಕೊಟ್ಟು: ಅಕ್ರಮವಾಗಿ ದಾಸ್ತಾನಿರಿಸಲಾಗಿದ್ದ 1,000 ಟನ್ ಮರಳನ್ನು ಉಳ್ಳಾಲ ಪೊಲೀಸರು ಪೆರ್ಮನ್ನೂರು ಗ್ರಾಮದ ಜೋಸೆಫ್ ನಗರ ಎಂಬಲ್ಲಿಂದ ವಶಕ್ಕೆ ಪಡೆದುಕೊಂಡಿದ್ದಾರೆ.
ಸುಮಾರು 1,000 ಟನ್ (100 ಲೋಡ್ ಮರಳು) ದಾಸ್ತಾನಿರಿಸಿರುವ ಖಚಿತ ಮಾಹಿತಿ ಮೇರೆಗೆ ಉಳ್ಳಾಲ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ವಶಕ್ಕೆ ಪಡೆದುಕೊಂಡಿರುವ ಮರಳು ಒಟ್ಟು ರೂ.7,00,000 ಮೌಲ್ಯದ್ದೆಂದು ಅಂದಾಜಿಸಲಾಗಿದೆ.
ಅಕ್ರಮ ಮರಳುಗಾರಿಕೆ, ಸಾಗಾಟ, ದಾಸ್ತಾನು, ಕಳವು ಮಾರಾಟದ ಬಗ್ಗೆ ಮಾಹಿತಿಗಳು ಇದ್ದಲ್ಲಿ ಠಾಣಾಧಿಕಾರಿ ಮತ್ತು ಇಲಾಖೆಯ ಮೇಲಧಿಕಾರಿಗಳಿಗೆ ನೇರವಾಗಿ ಮಾಹಿತಿ ನೀಡುವಂತೆ ಹಾಗೂ ನೀಡಲಾದ ಖಚಿತ ಮಾಹಿತಿ ಬಗ್ಗೆ ಗೌಪ್ಯತೆಯನ್ನು ಕಾಪಾಡಲಾಗುವುದು ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶುಕ್ರವಾರದಂದು ಪೆರ್ಮನ್ನೂರು ಗ್ರಾಮದ ಕಲ್ಲಾಪುವಿನ ಪಟ್ಲ ಎಂಬಲ್ಲಿಂದ 2,500 ಟನ್ ದಾಸ್ತಾನಿರಿಸಲಾದ ಮರಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.


