ಉಳ್ಳಾಲ: ಕ್ರೀಡೆಯಲ್ಲಿ ಪ್ರಾಮಾಣಿಕ ಹೋರಾಟಕ್ಕೆ ಸಿಕ್ಕ ಜಯ ಕ್ರೀಡಾಳುವಿಗೆ ಆತ್ಮತೃಪ್ತಿ ಎಂದು ಫಾ. ಮುಲ್ಲರ್ ಚಾರಿಟೇಬಲ್ ಟ್ರಸ್ಟ್ನ ನಿರ್ದೇಶಕ ರೆ. ಫಾ. ಪ್ಯಾಟ್ರಿಕ್ ರಾಡ್ರಿಗಸ್ ಹೇಳಿದರು.
ಅವರು ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಆಶ್ರಯದಲ್ಲಿ ನಡೆಯುತ್ತಿರುವ ದಕ್ಷಿಣ ಭಾರತ ಅಂತರ್ ವೈದ್ಯಕೀಯ ಹಾಗೂ ಆರೋಗ್ಯ ವಿಜ್ಞಾನ ಕಾಲೇಜು ಪಂದ್ಯಾವಳಿ `ಐದನೆಯ ನಿಟ್ಟೆ ಅಕೋಲೇಡ್ಸ್’-2015ನ್ನು ಕೆ.ಎಸ್. ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದರು.
ಸೋಲು ನಿರಾಶೆ ಹುಟ್ಟಿಸಬಾರದು. ಸ್ಪರ್ಧಾಳು ಸೋಲನ್ನು ಸವಾಲಾಗಿ ಸ್ವೀಕರಿಸುವ ಮೂಲಕ ಮುಂದಿನ ಸ್ಪರ್ಧೆಯಲ್ಲಿ ಇನ್ನಷ್ಟು ಸಾಧಿಸಲು ಸಾಧ್ಯ.ವೈಯಕ್ತಿಕವಾಗಲೀ ತಂಡಕ್ಕಾಗಲೀ ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಕ್ರೀಡೆಯು ನಮ್ಮಲ್ಲಿ ಗುಣನಡತೆ ಉತ್ತಮಪಡಿಸಿಕೊಳ್ಳಲು ಹಾಗೂ ವೈಯಕ್ತಿಕ ಅಭಿವೃದ್ಧಿಗೂ ಪೂರಕವಾಗುತ್ತದೆ ಎಂದರು.

ಬಿಲಿಯನ್ ಜನಸಂಖ್ಯೆ ಇರುವ ಭಾರತ ಕ್ರೀಡೆಯಲ್ಲಿ ಜಗತ್ತಿನ ಇತರ ರಾಷ್ಟ್ರಗಳಿಗಿಂತ ಎತ್ತರದ ಸ್ಥಾನದಲ್ಲಿ ಗುರುತಿಸಿಕೊಳ್ಳಬೇಕು ಎಂದು ನಿಟ್ಟೆ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೋ ಡಾ.ಎಸ್.ರಮಾನಂದ ಶೆಟ್ಟಿ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕ್ಷೇಮ ಡೀನ್ ಡಾ. ಸತೀಶ್ ಕುಮಾರ್ ಭಂಡಾರಿ, ರಿಜಿಸ್ಟಾ ರ್ ಡಾ. ಜಯಪ್ರಕಾಶ್ ಶೆಟ್ಟಿ, ಎ.ಬಿ.ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯದ ಡೀನ್ ಡಾ. ಬಿ.ರಾಜೇಂದ್ರ ಪ್ರಸಾದ್, ಅಕಾಡೆಮಿಕ್ ಡೀನ್ ಡಾ. ಯು. ಎಸ್.ಕೃಷ್ಣ ನಾಯಕ್, ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲ ಡಾ.ಧನೇಶ್, ಪಾನೀರಿನ ನಿಟ್ಟೆ ಗುಲಾಬಿ ಶೆಟ್ಟಿ ಸ್ಮಾರಕ ಔಷಧೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಸಿ.ಎಸ್.ಶಾಸ್ತಿ , ನಿಟ್ಟೆ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ. ಫಾತಿಮಾ ಡಿಸಿಲ್ವ ಉಪಸ್ಥಿತರಿದ್ದರು. ಪಂದ್ಯಾವಳಿಯಲ್ಲಿ 24ಕಾಲೇಜು ತಂಡಗಳು ಭಾಗವಹಿಸಿವೆ.
ನಿಟ್ಟೆ ವಿವಿ ಕ್ರೀಡಾ ಸಲಹೆಗಾರ ಡಾ. ಮುರಳಿಕೃಷ್ಣ ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ಕಾವ್ಯಾಂಶುಭಾನ್ ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾ ಕಾರ್ಯದರ್ಶಿ ತನುಷ್ ಶೆಟ್ಟಿ ವಂದಿಸಿದರು.




