UN NETWORKS
ತೊಕ್ಕೊಟ್ಟು: ಪ್ರಸ್ತುತ ದಿನಗಳಿಗೆ ಅನುಗುಣವಾಗಿ ಚರ್ಚ್ ಶತಮಾನೋತ್ಸವ ಸಮಿತಿ ಆಯೋಜಿಸಿರುವ ಕಾರ್ಯಕ್ರಮ ಮಹತ್ವಪೂರ್ಣವಾಗಿದೆ. ಈ ಮೂಲಕ ಎಲ್ಲಾ ಜಾತಿ, ಧರ್ಮದವರು ಒಗ್ಗಟ್ಟಾಗಿ ಬಾಳುವ ಸಂದೇಶ ಸಾರಿದಂತಾಗಿದೆ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ ಅಭಿಪ್ರಾಯಪಟ್ಟರು.
ತೊಕ್ಕೊಟ್ಟು ಸಂತ ಸೆಬೆಸ್ತಿಯನ್ನರ ಚರ್ಚಿನ ಶತಮಾನೋತ್ಸವದ ಅಂಗವಾಗಿ ಕಲ್ಲಾಪು ಆಡಂಕುದ್ರುವಿನಿಂದ ಪೆರ್ಮನ್ನೂರು ಸಂತ ಸೆಬೆಸ್ಟಿಯನ್ ಚರ್ಚ್ ತನಕ ಭಾನುವಾರ ಶಾಂತಿ ಹಾಗೂ ಸೌಹಾರ್ದಕ್ಕೆ ಪ್ರತೀಕವಾಗಿ ಹಮ್ಮಿಕೊಳ್ಳಲಾಗಿದ್ದ ಮ್ಯಾರಾಥಾನ್ಗೆ ಆಡಂಕುದ್ರುವಿನಲ್ಲಿ ಚಾಲನೆ ನೀಡಿ ಮಾತನಾಡಿದರು. ಸಾವಿರಕ್ಕೂ ಮಿಕ್ಕಿದ ಮಂದಿ ಪಾಲ್ಗೊಂಡಿದ್ದು ದುಷ್ಕತ್ಯ ಎಸಗುವವರಿಗೆ, ಕೋಮು ಭಾವನೆ ಕೆರಳಿಸುವ ಮಂದಿಗೆ ಕಾರ್ಯಕ್ರಮದಿಂದ ಶಾಂತಿ ಮನೋಸ್ಥಿತಿ ನಿರ್ಮಾಣವಾಗಲಿದೆ. ಪ್ರಸ್ತುತ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ಅಗತ್ಯ, ಈ ನಿಟ್ಟಿನಲ್ಲಿ ಜಿಲ್ಲೆಗೆ ಮಾದರಿಯಾದಂತಹ ಕಾರ್ಯಕ್ರಮ ತೊಕ್ಕೊಟ್ಟುವಿನಲ್ಲಿ ನಡೆದಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ದಾಯ್ಜಿವಲ್ರ್ಡ್ ಮುಖ್ಯಸ್ಥ ವಾಲ್ಟರ್ ನಂದಳಿಕೆ ಮಾತನಾಡಿ ಸದ್ಯ ಜಿಲ್ಲೆ ಅತ್ಯಂತ ದುರ್ಬಲ ಸ್ಥಿತಿಯನ್ನು ಎದುರಿಸುತ್ತಿದೆ. ಪ್ರತಿನಿತ್ಯ ಶಾಂತಿ ಕದಡುವಂತಹ ಸುದ್ಧಿಗಳನ್ನು ಕೇಳಿ ಭಯದ ವಾತಾವರಣದ ಜತೆಗೆ ಜೀವನ ಮುಂದುವರಿಸಲಾಗುತ್ತಿದೆ. ಶೇ.1 ರಷ್ಟು ಎಸಗುವ ದುಷ್ಕೃತ್ಯಗಳಿಗೆ ಶೇ.99 ಮಂದಿ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಇದೀಗ ಎಲ್ಲರೂ ಒಗ್ಗಟ್ಟಾಗಬೇಕಾದ ಸಮಯ ಬಂದಿದೆ. ಮ್ಯಾರಥಾನ್ ಮೂಲಕ ಅದಕ್ಕೆ ಚಾಲನೆ ದೊರೆತಿದೆ, ಯುವಸಮುದಾಯ ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚು ಪಾಲ್ಗೊಳ್ಳುವುದರ ಜತೆಗೆ ವಾತಾವರಣವನ್ನು ಶಾಂತಿಯಾಗಿರಿಸಲು ಸಾಧ್ಯ ಎಂದರು.
ತೊಕ್ಕೊಟ್ಟು ಸಂತ ಸೆಬೆಸ್ತಿಯನ್ನರ ಚರ್ಚಿನಲ್ಲಿ ಸಮಾಪನಗೊಂಡ ಮ್ಯಾರಥಾನ್ನಲ್ಲಿ ಭಾಗವಹಿಸಿ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಮಾತನಾಡಿ ಮ್ಯಾರಥಾನ್ನಲ್ಲಿ ಎಲ್ಲರೂ ಭಾಗವಹಿಸುವ ಅವಕಾಶವನ್ನು ಚರ್ಚ್ ಶತಮಾನೋತ್ಸವ ಸಮಿತಿ ಕಲ್ಪಿಸಿದೆ. ಈ ಇತಿಹಾಸ ಪ್ರಸಿದ್ಧ ಚರ್ಚ್ ಸಮಾಜದ ಶಕ್ತಿಯಾಗಿದೆ. ಶತಮಾನೋತ್ಸವದ ಕಾರ್ಯಕ್ರಮವನ್ನು ಎಲ್ಲರೂ ತಮ್ಮ ಮನೆಯ, ಊರಿನ ಕಾರ್ಯಕ್ರಮದಂತೆ ಪಾಲ್ಗೊಂಡು ಯಶಸ್ವಿಯಾಗಿ ನಡೆಸಬೇಕಿದೆ ಎಂದರು. ಶಾಂತಿ ಹಾಗೂ ಸೌಹಾರ್ದ ಕಾಪಾಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಮಹತ್ವದ ಪಾತ್ರ ವಹಿಸಿದೆ ಎಂದು ಚರ್ಚ್ನ ಧರ್ಮಗುರು ಡಾ.ಜೆ.ಬಿ. ಸಲ್ದಾನ ಹೇಳಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಉಳ್ಳಾಲ ನಗರಸಭೆ ಮುಖ್ಯಾಧಿಕಾರಿ ವಾಣಿ ಆಳ್ವ , ಅಂತರಾಷ್ಟೀಯ ಕ್ರೀಡಾಪಟು ರೋಶನ್ ಫೆರಾವೊ, ಶತಮಾನೋತ್ಸವ ಸಮಿತಿ ಪ್ರಧಾನ ಸಂಚಾಲಕ ಸುರೇಶ ಭಟ್ನಗರ, ಸಹಾಯಕ ಧರ್ಮಗುರು ಫಾ. ಸ್ಟ್ಯಾನಿ, ಫಾ. ಲೈಝಿಲ್, ಸಿಸ್ಟರ್ ಅನಿತಾ, ವಿನಿತಾ, ನಗರಸಭೆಯ ಸದಸ್ಯೆ ರಝಿಯಾ ಇಬ್ರಾಹಿಂ, ಉಪಾಧ್ಯಕ್ಷೆ ಚಿತ್ರಾ ಚಂದ್ರಕಾಂತ್ , ಸದಸ್ಯ ಸುಂದರ್ ಉಳಿಯ,ಟ ಬಾಜಿಲ್ ಡಿಸೋಜ, ಉಳ್ಳಾಲ ಪುರಸಭೆಯ ಸಭೆಯ ಮಾಜಿ ಸದಸ್ಯ ಭಗವಾನ್ ದಾಸ್, ಪೊಸಕುರಲ್ ನ ಆಡಳಿತ ನಿರ್ದೇಶಕ ವಿದ್ಯಾಧರ್ ಶೆಟ್ಟಿ ಹಾಗೂ ಮ್ಯಾರಾಥಾನ್ ಗೆ ಸಹಕರಿಸಿದ ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು. ಸಂತ ಸೆಬೆಸ್ಟಿಯನ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಅರುಣ್ ಉಳ್ಳಾಲ ಕಾರ್ಯಕ್ರಮ ನಿರೂಪಿಸಿದರು.
ಮ್ಯಾರಥಾನ್ ನಲ್ಲಿ ಪುರುಷರ ವಿಭಾಗದಲ್ಲಿ ಅಮನ್ ಮದನಿ ಅಲೇಕಳ ಪ್ರಥಮ, ಹನುಮ ಗೌಡ ದ್ವಿತೀಯ ಹಾಗೂ ಸೃಜನ್ ಶೆಟ್ಟಿ ತೃತೀಯ ಪ್ರಶಸ್ತಿಯನ್ನು ಪಡೆದರೆ, ಮಹಿಳೆಯರ ವಿಭಾಗದಲ್ಲಿ ಪೂರ್ಣಿಮಾ ಪ್ರಥಮ, ಪೃಥ್ವಿಜಾ ದ್ವಿತೀಯ ಹಾಗೂ ಸ್ಟೆನಿಲ್ಲಾ ಡಿಸೋಜ ತೃತೀಯ ಪ್ರಶಸ್ತಿಯನ್ನು ಪಡೆದುಕೊಂಡರು.


