UN NETWORKS
ಕೊಲ್ಯ: ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರ ಭಾವನೆಗಳಿಗೆ ಧಕ್ಕೆ ಬಾರದಂತೆ ಅನುಷ್ಠಾನಕ್ಕೆ ತಂದು ಜನರ ಚಿಂತನೆಗಳಿಗೆ ಸ್ಪಂಧಿಸಿರುವ ಯಡಿಯೂರಪ್ಪ ನೇತೃತ್ವದ ಸರಕಾರವನ್ನು ಮತ್ತೆ ರಾಜ್ಯದ ಜನತೆ ಬಯಸುತ್ತಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಅಭಿಪ್ರಾಯಪಟ್ಟರು.
ಕೊಲ್ಯ ಸೌಭಾಗ್ಯ ಸದನದಲ್ಲಿ ಬಿಜೆಪಿ ಮಂಗಳೂರು ಕ್ಷೇತ್ರ ಸಮಿತಿ ವತಿಯಿಂದ ಭಾನುವಾರ ನಡೆದ ನವಭಾರತಕ್ಕಾಗಿ ನವಕರ್ನಾಟಕ ಚುನಾವಣಾ ಪ್ರಣಾಳಿಕೆ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.ಇದೇ ಮೊದಲ ಬಾರಿಗೆ ಬಿಜೆಪ ಚುನಾವಣ ಪ್ರಣಾಳಿಕೆಯಲ್ಲೂ ಹೊಸತನ ತಂದಿದ್ದು ಆ ನಿಟ್ಟಿನಲ್ಲಿ ರಾಜ್ಯ, ಜಿಲ್ಲೆ , ಕ್ಷೇತ್ರ ಮಟ್ಟದಲ್ಲಿ ಅಗತ್ಯವಿರುವ ಕಾರ್ಯಕ್ರಮಗಳ ಕುರಿತಾಗಿ ಪ್ರತಿಯೊಬ್ಬರ ಭಾವನೆ ಚಿಂತನೆಗಳನ್ನು ಪತ್ರವೊಂದರಲ್ಲಿ ಬರೆದು ತಿಳಿಸಬಹುದು. ಯಡಿಯೂರಪ್ಪ ನೇತೃತ್ವ ಸರಕಾರ ಆಡಳಿತಕ್ಕೆ ಬಂದಾಗ ಯಾವ ಕಾರ್ಯಕ್ರಮ ಅಗತ್ಯ ಎಂಬುದನ್ನು ಬಲು ಸುಲಭದಲ್ಲಿ ಅರಿಯಲು ಸಾಧ್ಯವಾಗುತ್ತದೆ. ಆ ಮೂಲಕ ನವಕರ್ನಾಟಕ ನಿರ್ಮಾಣದಲ್ಲಿ ಎಲ್ಲರ ಪಾಲ್ಗೊಳ್ಳುವಿಕೆ ಅಗತ್ಯವಿದ್ದು ಪ್ರತಿಯೊಬ್ಬರ ಚಿಂತನೆಗೆ ಮನ್ನಣೆ ದೊರಕಲಿದೆ ಎಂದರು.
ದಶಕದ ಹಿಂದೆ ಪ್ರಪಂಚದಲ್ಲಿ ಚೀನಾ ಏಕ ಪಕ್ಷ ಪಾರಮ್ಯ ಮೆರೆದಿತ್ತು. ಇದೀಗ ಬಿಜೆಪಿ ಅತಿ ಹೆಚ್ಚು ಸದಸ್ಯರನ್ನು ನೋಂದಾಯಿಸಿಕೊಂಡ ಜಗತ್ತಿನ ಏಕೈಕ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭ್ರಷ್ಟಾಚಾರ ರಹಿತ ಆಡಳಿತ ನೀಡಿದ ಕೀರ್ತಿ ನರೇಂದ್ರ ಮೋದಿ ನೇತೃತ್ವದ ಸರಕಾರಕ್ಕಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಎಲ್ಲ ವೃತ್ತಿಯವರು ಎಲ್ಲ ವರ್ಗ ಎಲ್ಲ ಧರ್ಮದ ಮಂದಿ ತಮ್ಮ ಅಭಿಪ್ರಾಯ ತಮ್ಮ ರಾಜ್ಯ ಜಿಲ್ಲೆ ಕ್ಷೇತ್ರ ಮಟ್ಟದಲ್ಲಿ ಮಂಡಿಸಬಹುದು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಮಾತನಾಡಿ ಜನರ ಎಲ್ಲ ಅಭಿಪ್ರಾಯಗಳಿಗೆ ಕ್ಷೇತ್ರ, ಜಿಲ್ಲೆ, ರಾಜ್ಯ ವರ್ಗೀಕರಣ ಮಾಡಲಾಗುತ್ತದೆ. ಸರ್ವರಿಗೆ ಸಮಪಾಲು ಸಮಬಾಳು ಕಲ್ಪಿಸಲಾಗುವುದು. ಒಟ್ಟಿನಲ್ಲಿ ನವಭಾರತಕ್ಕಾಗಿ ನವಕರ್ನಾಟಕ ನಿರ್ಮಾಣವಾಗಬೇಕಿದೆ ಎಂದರು. ಬಿಜೆಪಿ ಜಿಲ್ಲಾ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ, ಶಾಸಕಿ ಮಲ್ಲಿಕಾ ಪ್ರಸಾದ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ, ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ, ಕ್ಷೇತ್ರ ಮಾಜಿ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ಕಾರ್ಯದರ್ಶಿ ನಮಿತಾ ಶ್ಯಾಂ, ಮನಾಪ ಮಾಜಿ ಮೇಯರ್ ಶಂಕರ್ ಭಟ್, ಪ್ರಣಾಳಿಕೆ ಸಮಿತಿ ಸಂಚಾಲಕ ವಿಶ್ವೇಶ್ವರ ಭಟ್ ಬಂಗಾರಡ್ಕ ಹಾಗೂ ರವೀಂದ್ರ ಪೈ ಬೆಂಗಳೂರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ಹೈಜಂಪ್ ನಲ್ಲಿ ರಾಷ್ಟ್ರಪ್ರಶಸ್ತಿಯನ್ನು ಪಡೆದ ಸೃಜನ್ ಜನಾರ್ಧನ್ ಅವರನ್ನು ಸನ್ಮಾನಿಸಲಾಯಿತು.
ಬಿಜೆಪಿ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್ ಕಾರ್ಯಕ್ರಮ ನಿರೂಪಿಸಿದರು. ಮನೋಜ್ ಆಚಾರ್ಯ ವಂದಿಸಿದರು.

ಸಭೆಗೆ ಆಗಮಿಸಿದವರು ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಜನರ ಅಭಿಪ್ರಾಯಗಳು:
ಎಸಿ ಕೊಠಡಿಗೆ ಸೀಮಿತವಾಗಿದ್ದ ಚುನಾವಣಾ ಪ್ರಣಾಳಿಕೆ ಈಗ ಮನೆಯಿಂದ ಹೊರಗೆ ಬರುತ್ತಿರುವುದು ಸಂತಸ ಕೊಟ್ಟಿದೆ.
ಹಿಂದುಳಿದ ವರ್ಗಕ್ಕೆ ಡೊನೇಶನ್ ರಹಿತ ಶಿಕ್ಷಣ , ಆರ್ಥಿಕ ಮೀಸಲಾತಿ, ಉಳ್ಳಾಲಕ್ಕೆ ಥೀಮ್ ಪಾರ್ಕ್, ವಾಟರ್ ಪಾರ್ಕ್, ಕ್ರೀಡಾಂಗಣ, ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರ ಗೀತೆ, ರಾಷ್ಟ್ರ ಧ್ವಜ ಗೌರವಿಸುವಂತೆ ಕ್ರಮ, ಮಾದಕ ವ್ಯಸನ ಸಂಬಂಧಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ.
ಆನಂದ ಕೆ. ಅಸೈಗೋಳಿ
ನಿವೃತ್ತ ಮುಖ್ಯ ಶಿಕ್ಷಕ
***
ಅಲ್ಪಸಂಖ್ಯಾತ ರಿಗೆ ಸಿಗುವ ಅನುದಾನ ನೇರವಾಗಿ ಫಲಾನುಭವಿಗಳಿಗೆ ಸಿಗುವಂತಾಗಬೇಕು. ಮಧ್ಯವರ್ತಿಗಳ ಸಮಸ್ಯೆ ಇರಬಾರದು.
ಕರೀಂ
ನಾಗತೋಟ
**
ಗ್ರಾಮ ಪಂಚಾಯಿತಿ ಮಟ್ಟದಿಂದಲೇ ತ್ಯಾಜ್ಯ ವಿಲೇವಾರಿಗೆ ಕ್ರಮ, ಪ್ರಾಣತ್ಯಾಗ ಮಾಡಿದ ಸೈನಿಕನ ಕುಟುಂಬಕ್ಕೆ ಸರಕಾರಿ ಕೆಲಸ, ಸುವ್ಯವಸ್ಥೆಯುಳ್ಳ ಸೈನಿಕ ಭವನ, ಜಿಲ್ಲೆಯಲ್ಲಿ ಸಾಮರಸ್ಯ ಕಾಪಾಡಲು ಸೂಕ್ರ ಕ್ರಮ
ವೆಂಕಟೇಶ್ ಕುಂಪಲ
ನಿವೃತ್ತ ಸೈನಿಕರು
**
ಮಾನ ಉಳಿಸುವ ಕಾರ್ಯ ಮಾಡುವ ಟೈಲರ್ ಗಳು ಅಸಂಘಟಿತ ಕಾರ್ಮಿಕ ವಿಭಾಗಕ್ಕೆ ಸೇರಿದ್ದು, ಯಡ್ಯೂರಪ್ಪ ಅವರು ಬೋರ್ಡ್ ಸ್ಥಾಪಿಸಿಸಿದ್ದರೂ ಬೇಕಾದ ಸೌಲಭ್ಯ ಸಿಕ್ಕಿಲ್ಲ.
ವಸಂತ
ಕೆಎಸ್ ಟಿಎ ರಾಜ್ಯ ಪ್ರಧಾನ ಕಾರ್ಯದರ್ಶಿ
**
ಕ್ರೀಡೆಗೆ ಉತ್ತೇಜನ ಸಿಗಬೇಕು. ಕ್ರೀಡಾಂಗಣ ಬೇಕು. ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ಉದ್ಯೋಗ. ಮಂಗಳೂರು ವಿವಿಯಲ್ಲಿ ಬಿಪಿಎಡ್ ಮುಂದುವರಿಸಬೇಕು.
ಗೋಪಿನಾಥ್
ಉಮಾ ಮಹೇಶ್ವರೀ ಕಬಡ್ಡಿ ಅಕಾಡೆಮಿ
**
ದೇವಸ್ಥಾನ ಭಕ್ತರಿಂದ ಭಕ್ತರಿಗಾಗಿಯೇ ಇರಬೇಕು, ಎ ಗ್ರೇಡ್ ದೇವಸ್ಥಾನದ ಆದಾಯ ಸಿ ಗ್ರೇಡ್ ದೇವಸ್ಥಾನದ ಅಭಿವೃದ್ಧಿಗೆ ಸಹಾಯಕವಾಗುವಂತೆ ಕ್ರಮ ಕೈಗೊಳ್ಳಬೇಕು. ಆಗಮ ಶಾಸ್ತ್ರ ವಾಸ್ತು ಶಾಸ್ತ್ರ ಉಳಿಸಿಕೊಂಡು ಹೋಗಬೇಕು.
ಮುಳಿಂಜ ವೆಂಕಟೇಶ ಭಟ್
*
ಸ್ವಸಹಾಯ ಸಂಘದ ಮೂಲಕ ಕಡಿಮೆ ಬಡ್ಡಿಗೆ ಸಾಲ ಸಿಗಬೇಕು.
ವಾಣಿ ತಲಪಾಡಿ
**
ಸಂವಿಧಾನ ತಿದ್ದುಪಡಿ ಆಗ್ತಿದ್ದರೂ ನಾಯಕರು ಮೌನ ವಹಿಸುವುದೇಕೆ?
ಆನಂದ ಪೂಜಾರಿ ಸರ್ಕುಡೇಲು
ಕೆಎಸ್ಆರ್ ಟಿಸಿ ನಿವೃತ್ತ ಡ್ರೈವರ್
**
ಮೊಗವೀರ ಸಮುದಾಯ ಸೌಲಭ್ಯಗಳಿಂದ ವಂಚಿತವಾಗುತ್ತಿದ್ದು ಆ ಕಾರಣಕ್ಕೆ ಎಸ್ ಟಿ ವರ್ಗಕ್ಕೆ ಸೇರಿಸಬೇಕು. ಸಮುದಾಯವನ್ನು ಒಡೆಯುವ ಪ್ರಯತ್ನ ನಿಲ್ಲಬೇಕು, ಗೋಮಾಳ ಭೂಮಿಯನ್ನು ಸರಕಾರದ ವಶಕ್ಕೆ ಪಡೆಯಬೇಕು.
ರಾಜೇಶ್ ಪುತ್ರನ್
ಉಳ್ಳಾಲ ಮೊಗವೀರ ಸಂಘದ ಕಾರ್ಯದರ್ಶಿ
**
ಧರ್ಮ ಶಿಕ್ಷಣ ಸಿಗಬೇಕು
ನಾರಾಯಣ ಕಜೆ
**
ಮಂಗಳೂರು ಕ್ಷೇತ್ರದಲ್ಲಿ ಸುಸಜ್ಜಿತ ಕ್ರೀಡಾಂಗಣ, ಅಗ್ನಿಶಾಮಕ ಠಾಣೆ ನಿರ್ಮಿಸಬೇಕು. ಎಸ್ಎಸ್ಎಲ್ಸಿ ತೇರ್ಗಡೆಯಾಗದಿದ್ದರೂ ಚಾಲಕರಿಗೆ ಬ್ಯಾಡ್ಜ್ ವಿತರಣೆಗೆ ಕ್ರಮ ತೆಗೆದುಕೊಳ್ಳಬೇಕು.
ಮುನೀರ್ ಮಾಸ್ಟರ್ ಕೈರಂಗಳ
ಬಿಜೆಪಿ ಅಲ್ಪಸಂಖ್ಯಾತ ಪ್ರಧಾನ ಕಾರ್ಯದರ್ಶಿ
**
ಕೃಷಿಗೆ ಬೇಕಾದ ಕೃಷಿ ಮಾಹಿತಿ ಕೇಂದ್ರ ಸ್ಥಾಪನೆಗೆ ಕ್ರಮ
ಟಿ.ಜಿ.ರಾಜಾರಾಮ ಭಟ್
ಪ್ರಗತಿಪರ ಕೃಷಿಕರು


