UN NETWORKS
ಉಳ್ಳಾಲ: ಬೈಕ್ ಅಪಘಾತಕ್ಕೀಡಾಗಿ ಸಹಸವಾರ ಇನ್ಫೋಸಿಸ್ ಉದ್ಯೋಗಿ ಸಾವನ್ನಪ್ಪಿ, ಸವಾರ ಗಂಭೀರ ಗಾಯಗೊಂಡಿರುವ ಘಟನೆ ದೇರಳಕಟ್ಟೆಯ ಹೆಚ್.ಎನ್ ವಿದ್ಯಾರ್ಥಿನಿ ನಿಲಯ ಎದುರುಗಡೆ ಗುರುವಾರ ನಸುಕಿನ ಜಾವ ಸಂಭವಿಸಿದೆ.
ತಮಿಳುನಾಡು ರದ್ದುನಗರ ತಾನ್ ಸೆಲ್ವಂ ಎಂಬವರ ಪುತ್ರ ಷಣ್ಮುಗನಾಥನ್(24) ಮೃತರು. ಸವಾರ ಮಿಲಿಂದ್ (22) ಗಂಭೀರ ಗಾಯಗೊಂಡವರಾಗಿದ್ದಾರೆ. ಮಿಲಿಂದ್ ಬಾಡಿಗೆ ಮನೆ ಪಂಪ್ ವೆಲ್ ನಲ್ಲಿದ್ದು, ಗೆಳೆಯ ಷಣ್ಮುಗನಾಥನ್ ಅವರನ್ನು ಮುಡಿಪುವಿಗೆ ಬಿಡಲು ಬೆಳಿಗ್ಗೆ ನಸುಕಿನ ಜಾವ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಅತಿವೇಗದ ಚಾಲನೆಯಿಂದಾಗಿ ರಸ್ತೆಯಿಂದ ಬಲಭಾಗದಲ್ಲಿರುವ ಹಾಸ್ಟೆಲ್ ಕೆಳಕ್ಕೆ ಹಾರಿದ ಬೈಕ್, ಹಾಸ್ಟೆಲ್ ಕಂಪೌಂಡಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕಿನಿಂದ ಗೋಡೆಗೆ ಎಸೆಯಲ್ಪಟ್ಟ ಷಣ್ಮುಗನಾಥನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಾಳುವನ್ನು ವಿದ್ಯಾರ್ಥಿನಿ ನಿಲಯದ ಪ್ರಬಂಧಕರು ಸಮೀಪದ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲಸದ ಕೊನೆಯ ದಿನವಾಗಿತ್ತು : ಐದು ವರ್ಷಗಳಿಂದ ಇನ್ಫೋಸಿಸ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಷನ್ಮುಗನಾಥನ್ ಇವರಿಗೆ ಚೆನ್ನೈ ಇನ್ಫೋಸಿಸ್ ಗೆ ವರ್ಗಾವಣೆಗೊಂಡಿದ್ದರು. ಜ.4 ಮುಡಿಪು ಇನ್ಫೋಸಿಸ್ ನಲ್ಲಿ ಕೊನೆಯ ದಿನವಾಗಿತ್ತು. ನಾಳೆ ಚೆನ್ನೈ ತೆರಳುವವರಿದ್ದರು.


