UN NETWORKS
ಉಳ್ಳಾಲ : ಕೊಲ್ಯ ಬಳಿ ಸ್ಕೂಟರ್ ಬೈಕ್ ನಡುವೆ ನಡೆದ ಅಪಘಾತದ ಗಾಯಾಳು ರವೀಂದ್ರ(71) ಅವರಿಗೆ ಹರೀಶ್ ಸಾಂತ್ವಾನ ಯೋಜನೆಯಡಿ ಚಿಕಿತ್ಸೆ ನೀಡಲು ನಿರಾಕರಿಸಿದ ಘಟನೆ ಸೋಮವಾರ ತೊಕ್ಕೊಟ್ಟುವಿನಲ್ಲಿ ನಡೆದಿದೆ.
ಉಳ್ಳಾಲಬೈಲು ನಿವಾಸಿ ರವೀಂದ್ರ ಅವರು ತಮ್ಮ ಮೊಮ್ಮಗನೊಂದಿಗೆ ಸ್ಕೂಟರ್ನಲ್ಲಿ ಕೊಲ್ಯ ಬೈಪಾಸ್ ಮಾರ್ಗವಾಗಿ ಉಚ್ಚಿಲ ಕಡೆ ತೆರಳುತ್ತಿದ್ದಾಗ ಅತೀ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ರವೀಂದ್ರ ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದರು. ಈ ಸಂದರ್ಭದಲ್ಲಿ ತೊಕ್ಕೊಟ್ಟಿನ ನೇತಾಜಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದು, ಆಸ್ಪತ್ರೆಯವರು 15 ಸಾವಿರ ಕಟ್ಟುವಂತೆ ಹೇಳಿದಾಗ ರವೀಂದ್ರ ಅವರ ಕುಟುಂಬದ ಸದಸ್ಯರು ಗಾಯಗೊಂಡ ತಕ್ಷಣ ರಾಜ್ಯ ಸರಕಾರದ ಹರೀಶ್ ಸಾಂತ್ವಾನ ಯೋಜನೆಯಡಿ ಚಿಕಿತ್ಸೆ ನೀಡುವಂತೆ ಆಸ್ಪತ್ರೆಯ ಮುಖ್ಯಸ್ಥರಿಗೆ ತಿಳಿಸಿದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರು ಈ ಹಿಂದೆ ಇಬ್ಬರಿಗೆ ಚಿಕಿತ್ಸೆ ನೀಡಿದ ಹಣ ಸರಕಾರ ನೀಡದೆ ಇದ್ದ ಕಾರಣ ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದಾಗ ಕೆಲಕಾಲ ಗೊಂದಲವಾಯಿತು.
ಮದ್ಯಪ್ರವೇಶಿಸಿದ ಬಿಜೆಪಿ ಮುಖಂಡರು : ಅಪಘಾತದ ಸುದ್ಧಿ ತಿಳಿದು ಬಿಜೆಪಿ ಮುಖಂಡ ಡಾ| ಮುನೀರ್ ಬಾವ ಆಸ್ಪತ್ರೆಗೆ ಆಗಮಿಸಿದ್ದು, ಬಳಿಕ ಆಸ್ಪತ್ರೆಯ ಮುಖ್ಯಸ್ಥರೊಂದಿಗೆ ಮಾತನಾಡಿ ಚಿಕಿತ್ಸೆ ನೀಡುವಂತೆ ತಿಳಿಸಿದರು. ಆ ಬಳಿಕ ಆಸ್ಪತ್ರೆಯ ವೈದ್ಯರು ಚಿಕಿತ್ಸೆಗೆ ಒಪ್ಪಿ ಗಾಯಾಳುವಿಗೆ ಚಿಕಿತ್ಸೆ ನೀಡಿದರು.
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



