UN NETWORKS
ಮುಡಿಪು: ರಾಜ್ಯದಲ್ಲಿ ಸ್ವಯಂಘೋಷಿತ ಪ್ರಗತಿಪರರು, ವಿಚಾರಧಾರಿಗಳು ಎಂದು ಹೇಳಿಕೊಳ್ಳುತ್ತಿರುವವರು ಹಿಂದೂ ಧರ್ಮದ ವಿಚಾರಧಾರೆಗಳನ್ನು ವಿರೋಧಿಸಿ, ನಿಂಧಿಸಿ ದಾರಿತಪ್ಪಿಸುವ ಷಡ್ಯಂತ್ರವನ್ನು ಮಾಡುತ್ತಿದ್ದಾರೆ.
ಮತ್ತೊಂದೆಡೆಯಲ್ಲಿ ನಮ್ಮ ಜಿಲ್ಲೆಯಲ್ಲಿ ಪೂಜ್ಯನೀಯ ಭಾವದಿಂದ ಆರಾಧಿಸುತ್ತಿರುವ ಕೊರಗಜ್ಜ, ದೇಯಿಬೈದೆತಿಗೆ ಅವಮಾನ ಮಾಡುವಂತಹ ಹೀನ ಕೃತ್ಯ ಮಾಡುತಿದ್ದರೂ ಸರಕಾರ ಕಣ್ಣುಮುಚ್ಚಿ ಕುಳಿತಿದ್ದು, ಈ ನಿಟ್ಟಿನಲ್ಲಿ ಹಿಂದೂ ಸಮಾಜ ಒಗ್ಗಟ್ಟಾಗಬೇಕಾದ ಅನಿವಾರ್ಯತೆ ಇದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಾಣಿ ಮಂಡಲದ ಕಾರ್ಯವಾಹಕ ಪ್ರಥ್ವಿರಾಜ್ ಕಲ್ಲಡ್ಕ ಅವರು ಹೇಳಿದರು.
ಅವರು ಮುಡಿಪುವಿನಲ್ಲಿ ಬುಧವಾರ ಹಿಂದು ಜಾಗರಣ ವೇದಿಕೆ ಮತ್ತು ವಿಶ್ವ ಹಿಂದೂ ಪರಿಷತ್ ವತಿಯಿಂದ ರಾಜ್ಯ ಸರಕಾರದ ಹಿಂದೂ ವಿರೋಧಿ ನೀತಿಯನ್ನು ಖಂಡಿಸಿ ಪ್ರತಿಭಟನಾ ಪ್ರದರ್ಶನ ಮತ್ತು ಖಂಡನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಜಾತ್ಯಾತೀತ ನೆಲೆಯಲ್ಲಿ ಒಂದಾಗಿರುವ ಹಿಂದೂ ಧರ್ಮವನ್ನು ಒಡೆಯುವ ಕೆಲಸಕ್ಕೆ ರಾಜ್ಯ ಸರಕಾರ ಮುಂದಾಗುತ್ತಿರುವುದರ ಜೊತೆಗೆ ಹಿಂದೂ ಧಾರ್ಮಿಕ ಮುಖಂಡರನ್ನು, ನಾಯಕರನ್ನು ಬಂಧಿಸುವ ಮೂಲಕ ಕಟ್ಟಿ ಹಾಕುವ ಪ್ರಯತ್ನವನ್ನು ಮಾಡುತ್ತಿದೆ. ಅಲ್ಲದೆ ಗೌರಿ ಹತ್ಯೆಯ ಆರೋಪವ್ನನೂ ಹಿಂದೂ ನಾಯಕರ ಹೆಗಲ ಮೇಲೆ ಹಾಕುವಂತಹ ಆರೋಪವನ್ನು ಮಾಡಲಾಗುತ್ತಿದೆ. ಆದ್ದರಿಂದ ಇದಕ್ಕೆಲ್ಲ ಬುದ್ದಿ ಕಲಿಸಬೇಕಾದರೆ ಹಿಂದೂ ಸಮಾಜ ಒಗ್ಗಾಟಾಗಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಜಾರಾಂ ಭಟ್, ಕುರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಮಿತ್ತಕೋಡಿ, ತಾಲೂಕು ಪಂಚಾಯಿತಿ ಸದಸ್ಯ ನವೀನ್ ಪಾದಲ್ಪಾಡಿ, ಮುಖಂಡರಾದ ಗೋಪಾಲ ಅಶ್ವಥ್ಥಾಡಿ, ವಿಜೇಶ್ ನಾಯ್ಕ್, ಕೇಶವ ಭಟ್, ನವೀನ್ ಶೆಟ್ಟಿ ಕೊಡಕ್ಕಲ್ಲು ಮೊದಲಾದವರು ಉಪಸ್ಥಿತರಿದ್ದರು.







