UN NETWORKS
ಮುಡಿಪು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವ್ಯಕ್ತಿಯೊಬ್ಬನಿಗೆ ಹುಟ್ಟಿದ ನೆಲದ ಒಡೆತನ ಸಿಕ್ಕಾಗ ಸಿಗುವಷ್ಟು ಸಾರ್ಥಕತೆ ಮತ್ತೊಂದಿಲ್ಲ. ಹಾಗಾಗಿ ನೆಲದ ಒಡೆತನದ ಇಲ್ಲದ ಬಡವರು ತಮ್ಮ ಬದುಕಿನಲ್ಲಿ ಸಾರ್ಥಕ್ಯ ಕಾಣಬೇಕು, ನಮ್ಮ ನೆಲದಲ್ಲಿ ನಾವಿದ್ದೇವೆ ಎಂಬ ಭಾವನೆ ಮೂಡಬೇಕು ಎಂಬ ನೆಲೆಯಲ್ಲಿ ಹಕ್ಕುಪತ್ರ ಕೊಡಲಾಗಿದೆ
ಹಕ್ಕುಪತ್ರ ಅರ್ಜಿ ಸಲ್ಲಿಕೆ ದಿನಾಂಕ ಅನಿವಾರ್ಯತೆ ಇದ್ದಲ್ಲಿ ವಿಸ್ತರಿಸಲಾಗುವುದು ಎಂದು ಹೇಳುತ್ತಿದ್ದಂತೆ , ನಡುವೆ ಮಾತನಾಡಿದ ಕುರ್ನಾಡು ಜಿ.ಪಂ ಸದಸ್ಯೆ ಮಮತಾ ಗಟ್ಟಿ ಮತ್ತು ಬಂಟ್ವಾಳ ತಾ.ಪಂ ಅಧ್ಯಕ್ಷ ಚಂದ್ರಹಾಸ್ ಕರ್ಕೇರ ಅವರನ್ನು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ` ಲೇ ಹುಚ್ಚರೇ. ಸರಿಯಾಗಿ ಕೆಲಸ ಮಾಡ್ರಿ’ ಎಂದು ತರಾಟೆಗೆ ತೆಗೆದುಕೊಂಡ ಘಟನೆ ಇತ್ತೀಚೆಗೆ ನಡೆಯಿತು.
ಕರ್ನಾಟಕ ಸರಕಾರ ಕಂದಾಯ ಇಲಾಖೆ ಆಶ್ರಯದಲ್ಲಿ ಮುಡಿಪುವಿನ ಕುರ್ನಾಡು ಪದವಿಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಗುರುವಾರ ನಡೆದ ಅರ್ಹ ಫಲಾನುಭವಿಗಳಿಗೆ 94ಸಿ, 94ಸಿಸಿ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಹಕ್ಕುಪತ್ರ ವಿತರಿಸುವ ವೇಳೆ ಇಬ್ಬರ ಮೇಲೆ ಸಚಿವರು ಗುಡುಗಿದರು.
ಉಳುವವನೆ ಹೊಲದೊಡೆಯ ಬದುಕುವವನೇ ನೆಲದೊಡೆಯ. ಆಂದು ಉಳುವವನೆ ನೆಲದೊಡೆಯನ್ನಾಗಿ ಮಾಡಲು 25ವರ್ಷಗಳ ನಿರಂತರ ಹೋರಾಟ ಮಾಡಿದ್ದು ಮುಖ್ಯಮಂತ್ರಿ ದೇವರಾಜ ಅರಸು ಅವರ ಕಾಲದಲ್ಲಿ ಈಡೇರಿತು. ಇಂದು ರಾಜ್ಯದಲ್ಲಿ ಸಿದ್ದರಾಮಯ್ಯ ಆಡಳಿತದಲ್ಲಿ ಬದುಕುವನನೇ ನೆಲದೊಡೆಯ ಜಾರಿಗೆ ಬಂದಿದೆ. ಅಷ್ಟಕ್ಕೂ ಸಿದ್ಧರಾಮಯ್ಯ ಅವರು ಆಡಳಿತ ಹಿಡಿಯುವುದಕ್ಕೆ ಮುಂಚೆ ಒಂಬತ್ತು ವರ್ಷ ರಾಜ್ಯದಲ್ಲಿ ಆಡಳಿತ ನಡೆಸಿದವರು ಬಡಜನರಿಗಾಗಿ ಹಕ್ಕುಪತ್ರ ವಿತರಣೆಗೆ ಯಾಕೆ ಮುಂದಾಗಲಿಲ್ಲ ಎಂದು ಪ್ರಶ್ನಿಸಿದರು.
ನಾವು ತಿಳಿದುಕೊಳ್ಳಬೇಕಾದ ಸತ್ಯ ಏನಪ್ಪ ಅಂದ್ರೆ ಭೂಮಿ ನಮ್ಮನ್ನು ಬೆನ್ನಹತ್ತಿ ಬರೋದಿಲ್ಲ, ನಾವೇ ಭೂಮಿ ಹಿಂದೆ ಹೋಗಬೇಕು ಎಂದ ಅವರು ಹಕ್ಕುಪತ್ರಕ್ಕೆ ಅರ್ಜಿ ಸಲ್ಲಿಕೆಯ ದಿನಾಂಕ ಅನಿವಾರ್ಯತೆ ಇದ್ದಲ್ಲಿ ಮುಂದೂಡುತ್ತೇವೆ ಎಂದರು.
ಇವರ ಮಾತಿನ ಮಧ್ಯೆ ಜಿ.ಪಂ ಸದಸ್ಯೆ ಮಮತಾ ಡಿ.ಎಸ್ ಗಟ್ಟಿ ಮತ್ತು ಬಂಟ್ವಾಳ ತಾ.ಪಂ ಅಧ್ಯಕ್ಷ ಚಂದ್ರಹಾಸ್ ಕರ್ಕೇರ ಅವರು ` ಸರ್ ಸ್ವಲ್ಪ ದಿನ ಮುಂದೂಡಿದರೆ ತುಂಬಾ ಸಹಕಾರಿಯಾಗುತ್ತದೆ ‘ ಅಂದರು. ಅಷ್ಟಕ್ಕೇ ಬಿಸಿಯಾದ ಸಚಿವರು ` ಲೇ ಹಚ್ಚರೇ ಮಾಡೋ ಕೆಲ್ಸ ಸರಿಯಾಗಿ ಮಾಡ್ರಿ… ನೀವ್ ಮಾಡಿದ್ರೆ ಜನರಿಗೆ ಕೊಟ್ಟ ತಾರೀಖಿನ ಒಳಗಡೆ ಹಕ್ಕುಪತ್ರ ಸಿಗುವುದು’ ಎಂದರು. ಅಷ್ಟಕ್ಕೇ ವೇದಿಕೆಯಲ್ಲಿದ್ದ ಇಬ್ಬರು ಜನಪ್ರತಿನಿಧಿಗಳು ಇರುಸುಮುರುಸುಗೊಂಡು ಸುಮ್ಮನಾಗಿಬಿಟ್ಟರು.
ಕಾರ್ಯಕ್ರಮದಲ್ಲಿ ಸಚಿವ ಯು.ಟಿ. ಖಾದರ್ ಮಾತನಾಡಿ ರಾಜ್ಯ ಸರಕಾರ ಶಿಕ್ಷಣ, ಆರೋಗ್ಯ, ವಸತಿ ಸೇರಿದಂತೆ ಬಹಳಷ್ಟು ಕ್ರಾಂತಿಕಾರಿ ಯೋಜನೆ ಜಾರಿಗೆ ತಂದಿದೆ. ತಾನು ಸಚಿವನಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಕುರ್ನಾಡು ಜಿಲ್ಲಾ ಪಂಚಾಯಿತಿ ಕ್ಷೇತ್ರ ಯಾಪ್ತಿಯ ಜನರ ಹಲವು ದಶಕಗಳ ಹಿಂದಿನ ಬೇಡಿಕೆಯಾಗಿದ್ದ ಪದವಿ ಕಾಲೇಜು ಮಂಜೂರು ಮಾಡಿಸಲಾಗಿದೆ. ಹಾಗೆಯೇ ಪದವಿಪೂರ್ವ ಕಾಲೇಜಿಗೆ ನಾಲ್ಕು ಕೋಟಿ ರೂ. ಗಳ ಅನುದಾನ ಮಂಜೂರು ಮಾಡಿಸಿದ್ದು ಈಗಾಗಲೇ ಮೊದಲ ಹಂತದಲ್ಲಿ ಎರಡು ಕೋಟಿ ರೂ. ಬಿಡುಗಡೆಗೊಳಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತುಳು ಅಕಾಡೆಮಿಯ ಅಧ್ಯಕ್ಷ ಎ.ಸಿ. ಭಂಡಾರಿ, ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ್, ದಕ್ಷಿಣ ಕನ್ನಡ ಜಿಲ್ಲಾ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಡಾ. ಎಂ.ಆರ್. ರವಿ, ಮಂಗಳೂರು ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು, ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಪಿ. ಕರ್ಕೇರ, ಮುಡಿಪು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಮಾಣಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯೆ ಮಂಜುಳಾ ಮಾಧವ, ತುಂಬೆ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯ ರವೀಂದ್ರ ಕಂಬಳಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಪ್ರಶಾಂತ್ ಕಾಜವ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್ ಅಬ್ಬಾಸ್, ಕೆಪಿಸಿಸಿ ಕಾರ್ಯದರ್ಶಿ ರಾಜಕುಮಾರ್, ಎಸಿ ರೇಣುಕಾ ಪ್ರಸಾದ್, ಬಂಟ್ವಾಳ ತಾಲೂಕು ಪಂಚಾಯಿತಿ ಸದಸ್ಯ ನವೀನ್ ಪಾದಲ್ಪಾಡಿ ಹಾಗೂ ಹೈದರ್ ಕೈರಂಗಳ, ಬಾಳೆಪುಣಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ, ಕುರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೈಲಜಾ ಮಿತ್ತಕೋಡಿ, ಮಾಜಿ ಅಧ್ಯಕ್ಷ ದೇವದಾಸ್ ಭಂಡಾರಿ ಕುರ್ನಾಡು, ಪುತ್ತೂರು ಎಸಿ ರಘುನಂದನ್, ಪದ್ಮಶ್ರೀ, ಸಿಪ್ರಿಯಾನ್ ಮಿರಾಂಡ ಹಾಗೂ ಪದ್ಮನಾಭ ನರಿಂಗಾನ ಉಪಸ್ಥಿತರಿದ್ದರು.
ಜಿಲ್ಲಾ ಪಂಚಾಯತಿ ಸದಸ್ಯೆ ಮಮತಾ ಡಿ. ಎಸ್. ಗಟ್ಟಿ ಸ್ವಾಗತಿಸಿದರು. ಅಬ್ದುಲ್ ರಝಾಕ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.























