UN NETWORKS
ಮುಡಿಪು: ಕೋಮು ಗಲಭೆಯಲ್ಲಿ ಭಾಗಿಯಾಗುವವರನ್ನು ರಕ್ಷಿಸುವ ಜವಾಬ್ದಾರಿಯನ್ನು ರೈ ಮತ್ತು ಖಾದರ್ ಮಾಡುತ್ತಿದ್ದು, ಈ ಮೂಲಕ ಜಿಲ್ಲೆಯಲ್ಲಿ ಕೋಮುದಳ್ಳುರಿಯನ್ನು ನಡೆಸಲು ಕಾರಣರಾಗುತ್ತಿದ್ದಾರೆ ಎಂದು ಜಿಲ್ಲಾ ಬಿಜೆಪಿ ಕಾರರ್ಯಕಾರಿಣಿ ಸಮಿತಿ ಸದಸ್ಯ ರಾಜೇಶ್ ಶೆಟ್ಟಿ ಪಜೀರುಗುತ್ತು ಆರೋಪಿಸಿದ್ದಾರೆ.
ಅವರು ಬಿಜೆಪಿ ಕುರ್ನಾಡು ಶಕ್ತಿಕೇಂದ್ರದ ವತಿಯಿಂದ ಪಿಎಫ್ ಐ ಎಸ್ ಡಿಪಿಐ ಸಂಘಟನೆಗಳ ನಿಷೇಧ ಮತ್ತು ಉಸ್ತುವಾರಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಮುಡಿಪು ಜಂಕ್ಷನ್, ಮತ್ತು ಕುರ್ನಾಡು ಗ್ರಾ.ಪಂ ಎದುರುಗಡೆ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸಂಘಪರಿವಾರದ ಕಾರ್ಯಕರ್ತರುಗಳ ಹತ್ಯೆ ನಡೆಸಿರುವಂತಹ ಆರೋಪಿಗಳ ರಕ್ಷಣೆ ಸರಕಾರದಿಂದ ಆಗುತ್ತಿದೆ. ಉಸ್ತುವಾರಿ ಸಚಿವರ ಕೈಯಡಿಯಲ್ಲಿರುವ ಪುಢಾರಿಗಳೇ ಕರೋಪಾಡಿ ಹತ್ಯೆಯಿಂದ ಶರತ್ ಹತ್ಯೆಯನ್ನು ನಡೆಸಿದ್ದಾರೆ. ಇದರಿಂದ ಜಿಲ್ಲೆಯಾದ್ಯಂತ ಕೋಮು ದಳ್ಳುರಿ ನಡೆಸಿ, ಅಶಾಂತಿಯ ವಾತಾವರಣವನ್ನು ನಿರ್ಮಿಸಲಾಗುತ್ತಿದೆ. ಸೌಹಾರ್ದತೆ, ಶಾಂತಿಯುತ ವಾತಾವರಣ ಜಿಲ್ಲೆಯಾದ್ಯಂತ ನೆಲೆಸಬೇಕಿದೆ. ಆದರೆ ಅದನ್ನು ಬಿಡದ ಜಿಲ್ಲೆಯ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕೂಡಲೇ ರಾಜೀನಾಮೆ ನೀಡಬೇಕು. ಅಲ್ಲದೆ ಹಿಂದುಗಳ ಹತ್ಯೆಯನ್ನು ನಿರಂತರವಾಗಿ ನಡೆಸುತ್ತಿರುವ ಕೆಎಫ್ ಡಿ, ಪಿಎಫ್ ಐ ಸಂಘಟನೆಗಳನ್ನು ಕೂಡಲೇ ನಿಷೇಧಿಸಿ ಶಾಂತಿಯ ವಾತಾವರಣ ನಿರ್ಮಾಣ ಆಗಬೇಕಿದೆ ಎಂದರು.
ಈ ಸಂದರ್ಭ ತಾ.ಪಂ ಸದಸ್ಯ ನವೀನ್ ಪಾದಲ್ಪಾಡಿ, ಯುವಮೋರ್ಚ ಕ್ಷೇತ್ರ ಕಾರ್ಯದರ್ಶಿ ಸುಜಿತ್ ಶೆಟ್ಟಿ ಕಂಬ್ಲಪದವು, ಕ್ಷೇತ್ರ ಯುವಮೋರ್ಚಾ ಉಪಾಧ್ಯಕ್ಷ ನವೀನ್ ಶೆಟ್ಟಿ ಕೊಡಕ್ಕಲ್, ಕುರ್ನಾಡು ಗ್ರಾಮ ಯುವಮೋರ್ಚಾ ಅಧ್ಯಕ್ಷ ಮನೋಜ್, ಕುರ್ನಾಡು ಗ್ರಾ.ಪಂ ಉಪಾಧ್ಯಕ್ಷ ನಿತಿನ್ ಗಟ್ಟಿ, ಕೈರಂಗಳ ಗ್ರಾ.ಪಂ ಸದಸ್ಯ ಸಿದ್ದೀಖ್ ಕೆ.ಹೆಚ್, ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಅಸ್ಗರ್, ಜಗದೀಶ ಆಳ್ವ ಕುವೆತ್ತಬೈಲ್, ಚಂದ್ರಶೇಖರ ಕಲ್ಲಾಪು ಉಪಸ್ಥಿತರಿದ್ದರು.












