UN NETWORKS
ಉಳ್ಳಾಲ: ಶಿಕ್ಷಕರಿಗೆ ವೇತನ ಹೆಚ್ಚಳ ಮಾಡಿರುವ ಆದೇಶ ಶೀಘ್ರವೇ ಮುಖ್ಯಮಂತ್ರಿಯವರು 6ನೇ ಹಣಕಾಸು ಅಯೋಗಕ್ಕೆ ನೀಡುವ ನಿರೀಕ್ಷೆ ಇದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.

ಅವರು ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಂಗಳೂರು ದಕ್ಷಿಣ ವಲಯ ಶಿಕ್ಷಕರ ದಿನಾಚರಣೆ ಸಮಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಮಂಗಳೂರು ದಕ್ಷಿಣ ಬೋಳಾರ ವತಿಯಿಂದ ಜೆಪ್ಪಿನಮೊಗರು ಪ್ರೆಸ್ಟೀಜ್ ಇಂಟರ್ ನ್ಯಾಷನಲ್ ಶಾಲೆ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಜರಗಿದ ಗುರು ವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ಇಲ್ಲದಿದ್ದಲ್ಲಿ ಜೀವನ ದುಸ್ತರವಾಗುತ್ತದೆ, ಇಂದು ಹೆಚ್ಚು ಸುಶಿಕ್ಷಿತರೇ ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದು, ಅವರಲ್ಲಿರುವ ಆತ್ಮ ವಿಶ್ವಾಸದ ಕೊರತೆ ಕಾರಣ ಎಂದರು.
ಗುರುಚೇತನ ಪುಸ್ತಕ ಬಿಡುಗಡೆಗೊಳಿಸಿದ ಶಾಸಕ ಜೆ.ಆರ್.ಲೋಬೋ ಮಾತನಾಡಿ, ಸಮಾಜ, ದೇಶದ ಅಭಿವೃದ್ಧಿ, ರಕ್ಷಣೆಗೆ ಸೂಕ್ತ ಪ್ರಜೆಗಳು ಅಗತ್ಯ, ಅಂತಹ ಪ್ರಜೆಗಳನ್ನು ನಿರ್ಮಿಸುವ ಜವಾಬ್ದಾರಿ ಶಿಕ್ಷಕರು ಮಾಡುತ್ತಿದ್ದಾರೆ. ರಾಷ್ಟ್ರ ರಕ್ಷಣೆಯಲ್ಲಿ ತೊಡಗಿಕೊಂಡಿರುವ ಶಿಕ್ಷಕರಿಗಾಗಿ ರಾಧಾಕೃಷ್ಣನ್ ಅವರು ತಮ್ಮ ದಿನ ಮೀಸಲಿಟ್ಟಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿಧನರಾದ ಶಿಕ್ಷಕರಿಗೆ ಮೌನ ಪ್ರಾರ್ಥನೆ ಮುಖಾಂತರ ಶ್ರದ್ಧಾಂಜಲಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಇದೇ ವೇಳೆ 50 ಕ್ಕೂ ಅಧಿಕ ನಿವೃತ್ತ ಶಿಕ್ಷಕ ಶಿಕ್ಷಕಿಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಪಂಚಾಯತ್ ಅಧ್ಯಕ್ಷ ಮೊಹಮ್ಮದ್ ಮೋನು ವಹಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯ ಇದರ ಇಂಗ್ಲಿಷ್ ಭಾಷಾ ಅಧ್ಯಯನ ಸಂಸ್ಥೆಯ ಡಾ.ರವಿಶಂಕರ್ ರಾವ್ ದಿಕ್ಸೂಚಿ ಭಾಷನ ಮಾಡಿದರು.
ಮಹಾನಗರಪಾಲಿಕೆ ಮೇಯರ್ ಕವಿತಾ ಸನಿಲ್, ಉಳ್ಳಾಲ ನಗರಸಭೆ ಅಧ್ಯಕ್ಷ ಹುಸೈನ್ ಕುಂಞಮೋನು, ಕಾರ್ಪೊರೇಟರ್ ಸುರೇಂದ್ರ, ಸೋಮೇಶ್ವರ ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ, ತಾಲೂಕು ಪಂಚಾಯಿತಿ ಸದಸ್ಯರುಗಳಾದ ಸುರೇಖಾ ಚಂದ್ರಹಾಸ್, ಶಶಿಪ್ರಭಾ, ಜಬ್ಬಾರ್ , ನೂರ್ಜಹಾನ್ , ಡಯೆಟ್ ಮಂಗಳೂರು ಇದರ ಉಪಪ್ರಾಂಶುಪಾಲೆ ದಯಾವತಿ , ಅನುದಾನಿತ ಶಾಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ.ಎಂ.ಕೆ. ಮಂಜನಾಡಿ, ಲೆಕ್ಕ ಪರಿಶೋಧಕ ಎಂ.ಎಚ್.ಮಲಾರ್ ಉಪಸ್ಥಿತರಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪಿ.ಜ್ಞಾನೇಶ್ ಸ್ವಾಗತಿಸಿದರು. ಶಿಕ್ಷಕ ರವಿಶಂಕರ್ ಹರೇಕಳ ಪ್ರಾರ್ಥಿಸಿದರು. ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ತ್ಯಾಗಂ ಹರೇಕಳ ಹಾಗೂ ಸಿಆರ್ಪಿ ಶಿಲಾವತಿ ಕಾರ್ಯಕ್ರಮ ನಿರೂಪಿಸಿದರು.


