UN NETWORKS
ಮುಡಿಪು: ಗ್ರಾಮದ ಅಭಿವೃದ್ಧಿಗಾಗಿ ಪಂಚಾಯಿತಿ ಆಡಳಿತ ಮತ್ತು ತಾಲೂಕು ಪಂಚಾಯಿತಿ ಸದಸ್ಯರು ಶ್ರಮಿಸುತ್ತಿದ್ದು, ಇದರ ಒಂದು ಅಂಗವಾಗಿ ಹಲವು ವರ್ಷಗಳಿಂದ ಸಾರ್ವಜನಿಕರಿಗೆ ಹಾಗೂ ಮಂದಿರಕ್ಕೆ ಬರುವ ಭಕ್ತರಿಗೆ ತೊಂದರೆಯಾಗುತ್ತಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮುಂದಾಗಿರುವ ಕಾರ್ಯ ಶ್ಲಾಘನೀಯ ಎಂದು ಎಸ್ ಸಿ ಡಿಸಿಸಿ ನಿರ್ದೇಶಕರಾದ ಟಿ.ರಾಜರಾಂ ಭಟ್ ಹೇಳಿದ್ದಾರೆ.
ಅವರು ಕುರ್ನಾಡು ಪಂಚಾಯಿತಿನ ರೂ. 2 ಲಕ್ಷ ಅನುದಾನ ಮತ್ತು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಡಿ ನಿರ್ಮಾಣವಾಗಲಿರುವ ಮುಡಿಪು ಗಣೇಶಮಂದಿರಕ್ಕೆ ಹೋಗುವ ರಸ್ತೆ ಕಾಂಕ್ರೀಟಿಕರಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಹಲವು ವರ್ಷಗಳಿಂದ ಮಂದಿರದಲ್ಲಿ ನಡೆಯುವ ಉತ್ಸವದ ಸಂದರ್ಭಗಳಲ್ಲಿ ಹಾಗೂ ರಸ್ತೆಯನ್ನು ಅವಲಂಬಿಸಿರುವ ಸಾರ್ವಜನಿಕರಿಗೆ ತೊಂದರೆಯಾಗಿತ್ತು. ಈ ಕುರಿತು ಮಂದಿರದ ಆಡಳಿತ ಪಂಚಾಯಿತಿಗೆ ಸಲ್ಲಿಸಿದ ಮನವಿಗೆ ಶೀಘ್ರವೇ ಸ್ಪಂಧಿಸಿದ ಅಧ್ಯಕ್ಷರು, ನೂತನ ಅಭಿವೃದ್ಧಿ ಅಧಿಕಾರಿ ಹಾಗೂ ಸ್ಥಳೀಯ ಸದಸ್ಯರ ಹಾಗೂ ತಾ.ಪಂ ಸದಸ್ಯರ ಶ್ರಮದಿಂದ ಶಾಶ್ವತ ರಸ್ತೆ ಕಾರ್ಯಗತವಾಗಿದೆ ಎಂದರು.
ತಾಲೂಕು ಪಂಚಾಯಿತಿ ಸದಸ್ಯ ನವೀನ್ ಪಾದಲ್ಪಾಡಿ ಮಾತನಾಡಿ ಕುರ್ನಾಡು ಪಂಚಾಯಿತಿ ವ್ಯಾಪ್ತಿಯಲ್ಲಿ ವಿವದೆಡೆ ಅಭಿವೃದ್ಧಿ ಕೆಲಸಗಳಲ್ಲಿ ಪಂಚಾಯಿತಿ ಜತೆಗೆ ತಾ.ಪಂ ಕೈಜೋಡಿಸಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ಬಂದಲ್ಲಿ ಗ್ರಾಮೀಣ ಭಾಗದ ಒಳರಸ್ತೆಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಈ ಸಂದರ್ಭ ಕುರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಮಿತ್ತಕೋಡಿ, ಉಪಾಧ್ಯಕ್ಷ ನವೀನ್ ಪಾದಲ್ಪಾಡಿ, ಸದಸ್ಯರುಗಳಾದ ಗೋಪಾಲ್ ಬಂಗೇರ, ಶಿವಶಂಕರ್ ಭಟ್, ಗೀತಾ, ಪುಷ್ಪಾ ಹಾಗೂ ಹೇಮನಾಥ್, ವಿಕಾಸ್, ಯೊಗೀಶ್ ಆಚಾರ್ಯ, ಜಯಂತಿ ಶೇಟ್, ವಿಮಲ, ಗೋಪಾಲ ಅಶ್ವತ್ತಡಿ, ಪ್ರಶಾಂತ್ ಉಪಸ್ಥಿತರಿದ್ದರು.
ಮಳೆಗಾಲದಲ್ಲಿ ಎಲ್ಲರೂ ಕೆಸರಿನಲ್ಲೇ ನಡೆದುಕೊಂಡು ಹೋಗಬೇಕಿತ್ತು. ಗಣೇಶ ಚತುರ್ಥಿ ಸಂದರ್ಭ ಗಣೇಶನ ವಿಗ್ರಹವನ್ನು ಕೆಸರಿನಲ್ಲೇ ಹೊತ್ತುಕೊಂಡು ಹೋಗುವ ಅನಿವಾರ್ಯತೆಯಿತೆ ಇತ್ತು. ಎಲ್ಲಾ ಕಡೆ ಅಭಿವೃದ್ಧಿಯಾಗಿದ್ದರೂ, ಪ್ರಸ್ತುತ ರಸ್ತೆಯ ಅಭಿವೃದ್ಧಿಯಾಗದೇ ಇರುವುದು ಬೇಸರ ತಂದಿತ್ತು. ಇದು ಬಹುದಿನದ ಬೇಡಿಕೆಯಾಗಿತ್ತು. ಅದನ್ನು ಕಾರ್ಯಗತಗೊಳಿಸಲು ಕುರ್ನಾಡು ಪಂಚಾಯತ್ ಸಾಕಷ್ಟು ಶ್ರಮಿಸಿರುವುದು ಸಂತಸ ತಂದಿದೆ.
ಡಾ.ಸುರೇಖಾ
ಸ್ಥಳೀಯ ನಿವಾಸಿ














