UN Networks
ಮಾಡೂರು: ಶಬರಿ ಫ್ರೆಂಡ್ಸ್ ಮಾಡೂರು ಇವರ ಆಶ್ರಯದಲ್ಲಿ 14ನೇ ವರ್ಷದ ವಾರ್ಷಿಕೋತ್ಸವ ಹಾಗೂ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಶ್ರೀ ಕೃಷ್ಣ ಸಾಂಸ್ಕೃತಿಕ ಮಹೋತ್ಸವ ಮುದ್ದು ಕೃಷ್ಣ-2017 ಪುಟಾಣಿಗಳ ಪ್ರತಿಭಾ ಕಾರ್ಯಕ್ರಮವು ಆ.13 ರಂದು ಭಾನುವಾರ ಮಾಡೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.
ಕಾರ್ಯಕ್ರಮದ ಪ್ರಯುಕ್ತ ಸಂಜೆ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಉದ್ಯಾವರ ಮಾಡ ಇದರ ಅಣ್ಣ ದೈವದ ಪಾತ್ರಿ ರಾಜ ಬೆಳ್ಚಪಾಡ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಪಿ.ಕೃಷ್ಣ ಗಟ್ಟಿ ಸೋಮೇಶ್ವರ ಅಧ್ಯಕ್ಷತೆಯನ್ನು ವಹಿಸಲಿದ್ದು, ವ್ಯವಸ್ಥಾಪನಾ ಪ್ರಮುಖ್ ಪ್ರೊ. ವಿ.ಜಯರಾಮ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಡಾ. ಅಣ್ಣಯ್ಯ ಕುಲಾಲ್, ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರು ಗುತ್ತು, ಸುರೇಶ್ ಕೆ.ಪಿ, ಮೋಹನ್ ಯು.ಶೆಟ್ಟಿ, ಅನಿಲ್ ದಾಸ್, ತುಳು ಚಲನಚಿತ್ರ ನಟ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್, ರಾಷ್ಟ್ರೀಯ ಪವರ್ ಲಿಫ್ಟರ್ ಹೇಮಚಂದ್ರ ಬಬ್ಬುಕಟ್ಟೆ , ಕೆ. ಸೀತಾರಾಮ್ ಬಂಗೇರ ಕೊಲ್ಯ, ಕುಶಾಲಾಕ್ಷಿ ವಿ ಕುಲಾಲ್ ಕಣ್ವತೀರ್ಥ, ಪದ್ಮನಾಭ ಪಾದೆ, ಪ್ರವೀಣ್ ಕುಮಾರ್ ಉಳ್ಳಾಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ರಾಷ್ಟ್ರಮಟ್ಟದ ಚಿನ್ನದ ಪದಕ ವಿಜೇತ ಕ್ರೀಡಾಪಟು ಸ್ವಸ್ತಿಕ್ ಮಾಡೂರು ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.
ವಿವಿಧ ಸ್ಪರ್ಧೆಗಳು:
ಭಾನುವಾರ ಬೆಳಿಗ್ಗಿನಿಂದ ಭಕ್ತಿಗೀತೆ, ಮುದ್ದು ಕೃಷ್ಣ ಚಿತ್ರ ರಚನೆ, ಭಗವದ್ಗೀತೆ ಕಂಠಪಾಠ, ರಂಗೋಲಿ ಸ್ಪರ್ಧೆಗಳು ನಡೆಯಲಿದ್ದು ಮಧ್ಯಾಹ್ನ 2 ಗಂಟೆಯಿಂದ ಕಂದ ಕೃಷ್ಣ, ಮುದ್ದು ಕೃಷ್ಣ , ಪುಟಾಣಿ ಕೃಷ್ಣ, ಬಾಲಕೃಷ್ಣ ವೇಷದ ಪ್ರದರ್ಶನ ಹಾಗೂ ರಾಧಾಕೃಷ್ಣ ಗೀತಾ ನೃತ್ಯ ಸ್ಫರ್ಧೆ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ನವೀನ್ ಎಸ್. ಕೋಟೆಕಾರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


