ಉಳ್ಳಾಲ ನ್ಯೂಸ್ ನೆಟ್ವರ್ಕ್
ಉಳ್ಳಾಲ: ವೈಜ್ಞಾನಿಕ ಯುಗದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿಯೂ ಬದಲಾವಣೆಗಳು ನಡೆಯುತ್ತಿದ್ದು, ಹೊಸ ಬದಲಾವಣೆಗೆ ತಕ್ಕಂತೆ ವೈದ್ಯರು ತಮ್ಮಲ್ಲಿರುವ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವ ಅಗತ್ಯವಿದ್ದು ಇಂತಹ ಕಾರ್ಯಾಗಾರಗಳು ಇದಕ್ಕೆ ಪೂರಕ ಎಂದು ಅಮೇರಿಕಾದ ಬೋಸ್ಟನ್ನಿನ ಮಸ್ಯಾಚುಸೆಟ್ಸ್ಯುನಿವರ್ಸಿಟಿಯ ನರಶಸ್ತ್ರ ಚಿಕಿತ್ಸೆಯ ಅನಸ್ಥೇಷಿಯ ವಿಭಾಗದ ಮುಖ್ಯಸ್ಥರಾದ ಡಾ| ಸ್ಟ್ಯಾನ್ಲಿ ಡಿ’ಸೋಜ ಅಭಿಪ್ರಾಯಪಟ್ಟರು
ಅವರು ನಿಟ್ಟೆ ವಿಶ್ವವಿದ್ಯಾನಿಲಯದ ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯಲ್ಲಿ ಮೆದುಳಿನ ಶಸ್ತ್ರಚಿಕಿತ್ಸೆಯ ಅರಿವಳಿಕೆಯಲ್ಲಿನ ನವೀನ ಬೆಳವಣಿಗೆಗಳ ಕುರಿತು ಒಂದು ದಿನದ ನಿರಂತರ ವೈದ್ಯಕೀಯ ಕಲಿಕಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಧಾರವಾಡದ ಡಿಮ್ಹಾನ್ಸ್ನ ಪ್ರಾಧ್ಯಾಪಕ ಡಾ| ಉಮೇಶ್ ಜಿ., ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ನರರೋಗ ತಜ್ಞ ಡಾ| ರಾಘವೇಂದ್ರ ಬಿ.ಎಸ್, ಕ್ಷೇಮ ಕಾಲೇಜಿನ ಡಾ| ಶ್ರೀಪಾದಜಿ ಮೆಹೆಂದಳೆ, ಶ್ರೀನಿವಾಸ ಮೆಡಿಕಲ್ ಕಾಲೇಜಿನ ಅರಿವಳಿಕೆಯ ವಿಭಾಗದ ಮುಖ್ಯಸ್ಥ ಡಾ| ಸತ್ಯಜಿತ್ ಕಾರಂತ್ ಉಪನ್ಯಾಸ ನೀಡಿದರು.
ಕ್ಷೇಮದ ಡೀನ್ ಫ್ರೊಫೆಸರ್ ಡಾ| ಸತೀಶ್ ಕುಮಾರ್ ಭಂಂಡಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕ್ಷೇಮದ ಅರಿವಳಿಕೆ ವಿಭಾಗದ ಮುಖ್ಯಸ್ಥ ಡಾ| ಆನಂದ ಬಂಗೇರ ಅಧ್ಯಕ್ಷತೆಯನ್ನು ವಹಿಸಿದ್ದರು.
ಮುಖ್ಯ ಅತಿಥಿ ಕೆ.ಎಸ್.ಹೆಗ್ಢೆ ಆಸ್ಪತ್ರೆಯ ಮೆಡಿಕಲ್ ಸುಪರಿಟೆಂಡೆಂಟ್ ಡಾ| ಶಿವಕುಮಾರ್ ಹಿರೇಮಠ್ ಭಾಗವಹಿಸಿದ್ದರು. ಡಾ| ಹರೀಶ್ ಬಿ.ಜಿ.ಮತ್ತು ಡಾ| ವರುಣಾ ಭಾಸ್ಕರ್ ಅವರು ಕಾರ್ಯಕ್ರಮ ಸಂಘಟಿಸಿದ್ದರು. ಡಾ| ಸುಮಲತಾ ಶೆಟ್ಟಿ ನಿರೂಪಿಸಿದರು. ಮಂಗಳೂರಿನ ಎಲ್ಲಾ ವೈದ್ಯಕೀಯ ಕಾಲೇಜುಗಳ ನೂರಕ್ಕೂ ಹೆಚ್ಚು ಅರಿವಳಿಕಾ ತಜ್ಞರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.


