ಉಳ್ಳಾಲ ನ್ಯೂಸ್ ನೆಟ್ವರ್ಕ್
ಮುಡಿಪು; ಮುಡಿಪು ಮೂಳೂರು ರಸ್ತೆ ದುರಸ್ತಿಗೆ ಆಗ್ರಹಿಸಿ ಮೂಳೂರು ನಾಗರಿಕ ಹೋರಾಟ ಸಮಿತಿ ಮುಡಿಪು ಚೆಕ್ ಪೋಸ್ಟ್ ಸಮೀಪ ರಸ್ತೆ ತಡೆ ನಡೆಸಿ , ವಾಹನಗಳು ತೆರಳದಂತೆ ಪ್ರತಿಭಟನೆ ನಡೆಸಿತು.
ರಸ್ತೆಗಡ್ಡವಾಗಿ ಕಲ್ಲು, ಹಳೆ ಮನೆ ಸಾಮಗ್ರಿಗಳನ್ನು ಇರಿಸಿದ ಪ್ರತಿಭಟನಕಾರರು ಬೆಳಿಗ್ಗೆ 6 ಗಂಟೆಯಿಂದ 11 ಗಂಟೆಯವರೆಗೂ ವಾಹನಗಳು ತೆರಳದಂತೆ ತಡೆಯೊಡ್ಡಿದರು. ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.
ಇದರಿಂದ ಮಂಚಿ, ಇರಾ, ಮೂಳೂರು ಭಾಗಕ್ಕೆ ತೆರಳುವ ಪ್ರಯಾಣಿಕರು, ರಸ್ತೆಯಲ್ಲೇ ಉಳಿದು ಪರದಾಡುವಂತಾಯಿತು. ಸುಮಾರು 9ರ ಹೊತ್ತಿಗೆ ಬಿಜೆಪಿ ಕ್ಷೇತ್ರ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಭೇಟಿ ನೀಡಿ ಪ್ರತಿಭಟನಾಕಾರರ ಕೈಜೋಡಿಸಿದರು. ಹಿಂದೆ ಜಿಲ್ಲಾ ಪಂಚಾಯಿತಿ ಅಧೀನದಲ್ಲಿದ್ದರೂ ಸದ್ಯ ಕೆಐಎಡಿಬಿ ಇಲಾಖೆ ಸ್ವಾಧೀನಪಡಿಸಿಕೊಂಡ ಹಿನ್ನೆಲೆಯಲ್ಲಿ ಅವರ ಬೇಜವಾಬ್ದಾರಿಯಿಂದ ಕಾಮಗಾರಿ ನಡೆದಿಲ್ಲ.
ಅಧಿಕಾರಿಗಳು ಕೂಡಲೇ ಕ್ರಮಕೈಗೊಳ್ಳಬೇಕಿದೆ. ಅಲ್ಲದೆ ಅಧಿಕಾರಿಗಳು ಬರುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ತಿಳಿಸಿದ್ದು, ಮತ್ತೆ ರಸ್ತೆ ತಡೆ ಮುಂದುವರಿಯಿತು.
50 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ರಸ್ತೆ 2007ರಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಭೂಸ್ವಾಧೀನಗೊಳಪಟ್ಟಿತು. ಅದಕ್ಕಿಂತ ಮೊದಲು ಲೋಕೋಪಯೋಗಿ ಇಲಾಖೆ ಅಧೀನದಲ್ಲಿದ್ದು ಬಳಿಕ ಜಿಲ್ಲಾ ಪಂಚಾಯಿತಿ ಅಧೀನಕ್ಕೆ ನೀಡಲಾಗಿತ್ತು. ನಮ್ಮ ಊರು ನಮ್ಮ ರಸ್ತೆ ಅನುದಾನದಲ್ಲೂ ಈ ರಸ್ತೆ ಅಭಿವೃದ್ಧ ಮಾಡಲಾಗಿತ್ತು. 2010ರಲ್ಲಿ ಪೃಕೃತಿ ವಿಕೋಪದಡಿ 17 ಲಕ್ಷ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗಿತ್ತು.
ಕೈಗಾರಿಕಾ ವಲಯವಾಗಿ ಮೂಳೂರು ಘೋಷಣೆಯಾದ ಬಳಿಕ ಮುಖ್ಯರಸ್ತೆ ಕೆಐಎಡಿಬಿ ಅಧೀನಕ್ಕೊಳಪಟ್ಟರೂ ಇಲಾಖೆ ಮುಡಿಪುವಿನಿಂದ ಮೂಳೂರುವರೆಗಿನ ಒಂದೂವರೆ ಕಿ.ಮೀ. ರಸ್ತೆಯನ್ನು ನಿರ್ಲಕ್ಷಿಸಿ ವಾಹನ, ಜನಸಂಚಾರವೇ ಇಲ್ಲದ ಮೂಳೂರಿನಲ್ಲಿ ಕೋಟ್ಯಾಂತರ ವೆಚ್ಚದಲ್ಲಿ ಚತುಷ್ಪತ ರಸ್ತೆ ನಿರ್ಮಿಸಿದೆ. ಒಂದೂವರೆ ಕಿ.ಮೀ. ರಸ್ತೆ ಏರಿಳಿತ, ತೀರಾ ಇಕ್ಕಟ್ಟಿನಿಂದ ಕೂಡಿದ್ದು ಅಲ್ಲಲ್ಲಿ ಹೊಂಡಗಳಿಂದ ಕೂಡಿದೆ ಅಲ್ಲದೆ ರಸ್ತೆಯ ಎರಡೂ ಬಡಿ ಸವೆದು ಆಳವಾದ ಹೊಂಡಗಳು ನಿರ್ಮಾಣವಾಗಿದೆ.
ಘನವಾಹನ ಮುಂದಿನಿಂದ ಬಂದಾಗ ದ್ವಿಚಕ್ರ ವಾಹನಕ್ಕೂ ದಾರಿಯಿಲ್ಲ ಸ್ಥಿತಿಯಿದ್ದು, ಒಂದೊಮ್ಮೆ ರಸ್ತೆ ಬಿಟ್ಟು ಕೆಳಗಿಳಿಯುವ ದ್ವಿಚಕ್ರ ಅಥವಾ ತ್ರಿಚಕ್ರ ವಾಹನ ಮಗುಚಿ ಬೀಳುವ ಸ್ಥಿತಿಯಿದ್ದು ಈಗಾಗಲೇ ಹಲವು ಅಪಘಾತಗಳು ನಡೆದಿವೆ, ಕಳೆದ ವರ್ಷ ಇಬ್ಬರು ಸಾವನ್ನಪ್ಪಿದ ಘಟನೆಯೂ ನಡೆದಿದೆ. ಇದರಿಂದ ಬೇಸತ್ತ ನಾಗರಿಕರು ಹಲವು ಬಾರಿ ಸಂಬಂಧಪಟ್ಟ ಇಲಾಖೆಗೆ ಮಾಡಿದ ಮನವಿಗೆ ಪ್ರತಿಫಲ ದೊರೆಯದ ಕಾರಣ ಸೋಮವಾರ ವಾಹನ ಬಂದ್ ಮಾಡಿ ಪ್ರತಿಭಟಿಸಿದ್ದಾರೆ.
ಸ್ಥಳಕ್ಕೆ ಬಂದ ಅಧಿಕಾರಿ, ಪ್ರತಿಭಟನೆ ಹಿಂದೆಗೆತ
ಬೆಳಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. 11 ಗಂಟೆ ವೇಳೆಗೆ ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಗಟ್ಟಿ ಆಗಮಿಸಿ ಇಲಾಖಾಧಿಕಾರಿ ಯವರಿಗೆ ಫೋನ್ ಮೂಲಕ ಮಾತನಾಡಿ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ ಇಲಾಖೆಯಿಂದ ಅಧಿಕಾರಿಗಳೇ ಬರಬೇಕು, ನಾವು ಹೋದಾಗ ರಸ್ತೆಗೂ, ಇಲಾಖೆಗೂ ಸಂಬಂಧವೇ ಇಲ್ಲ ಎಂದು ಸಬೂಬು ನೀಡಿದ್ದಾರೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಅದರಂತೆ ಅಧಿಕಾರಿಗೆ ಮಾಹಿತಿ ನೀಡಲಾಯಿತು.
12 ಗಂಟೆ ಬಳಿಕ ಇಲಾಖೆಯ ಅಧಿಕಾರಿ ಸ್ಥಳಕ್ಕೆ ಆಗಮಿಸಿ ರಸ್ತೆ ಇಲಾಖೆಯ ಸುಪದ್ದಿಗೆಗೆ ಬಂದಿದ್ದು ಮಂಗಳವಾರವೇ ತಾತ್ಕಾಲಿಕ ಕಾಮಗಾರಿ ನಡೆಸಿ ಮುಂದೆ ಅಭಿವೃದ್ಧಿಪಡಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.
ಪ್ರತಿಭಟನೆಯಲ್ಲಿ ಬಿಜೆಪಿ ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ರೈ, ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಸದಸ್ಯ ನವೀನ್ ಪಾದಲ್ಪಾಡಿ, ಹೈದರ್ ಕೈರಂಗಳ, ಸ್ಥಳೀಯ ಮುಖಂಡರಾದ ರಾಧಾಕೃಷ್ಣ ರೈ, ದಯಾನಂದ ರೈ, ಟಿ.ಜಿ.ರಾಜಾರಾಮ್ ಭಟ್, ಸುರೇಶ್ ಕೊಟ್ಟಾರಿ, ಅಬ್ದುಲ್ ಅಝೀಝ್, ಶಿವಣ್ಣ ಮೊದಲಾದವರು ಭಾಗವಹಿಸಿದ್ದರು.
`ಕೆಐಎಡಿಬಿ ಯಾವುದೇ ಭೂಸ್ವಾಧೀನಪಡಿಸಿಕೊಂಡ ಬಳಿಕ ಆ ಭಾಗದತ್ತ ತಿರುಗಿ ನೋಡುವುದಿಲ್ಲ, ಮೂಳೂರಿನಲ್ಲಿ ಕೈಗಾರಿಕಾ ವಲಯ ಆದರೆ ಸ್ಥಳೀಯ ಪ್ರದೇಶ ಅಭಿವೃದ್ಧಿಯಾಗುತ್ತದೆ ಎನ್ನುವ ನೆಲೆಯಲ್ಲಿ ಭೂಸ್ವಾಧೀನಕ್ಕೆ ಬೆಂಬಲ ನೀಡಲಾಗಿತ್ತು, ಆದರೆ ಇದರಿಂದ ಸ್ಥಳೀಯರಿಗೆ ತೊಂದರೆಯಾಗಿದ್ದು, ಜನಪ್ರತಿನಿಧಿಗಳ ಮಾತನ್ನೂ ಕಡೆಗಣಿಸಲಾಗಿದೆ’
ಸಂತೋಷ್ ಕುಮಾರ್ ರೈ, ಬಿಜೆಪಿ ಕ್ಷೇತ್ರಾಧ್ಯಕ್ಷ
ರಸ್ತೆ ದುರಸ್ತಿ ಕುರಿತು ಹಲವು ಬಾರಿ ನಾಗರಿಕರು ಸೇರಿಕೊಂಡು ಮನವಿ ಸಲ್ಲಿಸಿದ್ದೆವು. ಆ ಬಳಿಕ ರಸ್ತೆ ಅವ್ಯವಸ್ಥೆಯಿಂದ ಅಪಘಾತ, ಅವಘಢಗಳು ಸಂಭವಿಸಿರುವುದರ ಕುರಿತು ಜನಪ್ರತಿನಿಧಿಗಳಲ್ಲಿ ಅಂಗಲಾಚಿ ಬೇಡಿದ್ದೇವೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದೇವೆ. ಇದಕ್ಕೂ ಸ್ಪಂಧನೆ ಸಿಗದೇ ಇದ್ದಲ್ಲಿ ಉಗ್ರ ರೀತಿಯಲ್ಲಿ ಹೋರಾಡುತ್ತೇವೆ
ದಯಾನಂದ ಆಳ್ವ ಮೂಳೂರು
ರಸ್ತೆ ಯಾರ ಕೈಯಲ್ಲಿದೆ ಅನ್ನುವ ಸ್ಪಷ್ಟತೆಯೂ ಇರಲಿಲ್ಲ. ಇತ್ತೀಚೆಗೆ ಕೆಐಎಡಿಬಿ ಅಧೀನದಲ್ಲಿ ಇರುವುದಾಗಿ ತಿಳಿದುಬಂತು. ಆ ಬಳಿಕ ಇಲಾಖೆಗೂ ಮನವಿ ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ. ಜನಪ್ರತಿನಿಧಿಗಳಿಗೂ ಬೇಡಿಕೆ ಸಲ್ಲಿಸಿದ್ದರೂ ಸ್ಪಂಧನೆ ಸಿಕ್ಕಿಲ್ಲ. ಮುಂದೆ ನಡೆಯುವ ಉಗ್ರ ಹೋರಾಟಕ್ಕೆ ಕೆಐಎಡಿಬಿಯೇ ನೇರ ಹೊಣೆಯಾಗುವುದು.
ಇಸ್ಮಾಯಿಲ್
ಸ್ಥಳೀಯ
ಜಿ.ಪಂ ಗ್ರಾಮೀಣ ರಸ್ತೆಯಾಗಿತ್ತು. ಇದೀಗ ಕೆಐಎಡಿಬಿಯಡಿ ರಸ್ತೆಯಾಗಿದೆ. ಕೆಐಎಡಿಬಿ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ದುರಸ್ತಿಗೊಳಿಸುವಂತೆ ಹೇಳಿದ್ದೇವೆ. ಇತ್ತೀಚೆಗೆ ತಾ.ಪಂ ಅಧ್ಯಕ್ಷ ಚಂದ್ರಹಾಸ್ ಕರ್ಕೇರ , ತಾ.ಪಂ ಸದಸ್ಯ ಹೈದರ್ ಕೈರಂಗಳ ಮತ್ತು ತಾನು ಜತೆಗೆ ತೆರಳಿ ಜಿಲ್ಲಾ ಪಂಚಾಯಿತಿ ಮುಖ್ಯಾಧಿಕಾರಿಯನ್ನು ಭೇಟಿ ಮಾಡಿ ರಸ್ತೆ ಕುರಿತು ತಿಳಿಸಿದ್ದೆವು. ಅದರಂತೆ ಕೆಐಎಡಿಬಿ ಅಧಿಕಾರಿಯನ್ನು ಕರೆಸಿ ರಸ್ತೆ ದುರಸ್ತಿ ನಡೆಸುವಂತೆ ಆಗ್ರಹಿಸಿದ್ದರು. ಅದರಂತೆ ಪಿಡಬ್ಲ್ಯುಡಿ ಇಂಜಿನಿಯರ್ ಅವರಲ್ಲಿ ರಸ್ತೆಗೆ ತಗಲುವ ವೆಚ್ಛ ಹಾಗೂ ರೂಪುರೇಷೆಯನ್ನು ರಚಿಸಿ ಇಲಾಖೆಗೆ ಈಗಾಗಲೇ ನೀಡಿದ್ದಾರೆ. ಅದರಂತೆ ಒಂದು ವಾರದಲ್ಲಿ ಕಾಮಗಾರಿ ಆರಂಭವಾಗುವ ವಿಶ್ವಾಸವಿದೆ. ಆರಂಭವಾಗದೇ ಇದ್ದಲ್ಲಿ ಎಲ್ಲರೂ ಜತೆಯಾಗಿ ಮತ್ತೆ ಪ್ರತಿಭಟಿಸುತ್ತೇವೆ.
ಮಮತಾ.ಡಿ. ಎಸ್ ಗಟ್ಟಿ
ಜಿಲ್ಲಾ ಪಂಚಾಯಿತಿ ಸದಸ್ಯರು













