ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೊಣಾಜೆ: ಹಾರ್ಡ್ವೇರ್ ಅಂಗಡಿ ಮಾಲೀಕನಿಗೆ ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿದ ಪ್ರಮುಖ ಆರೋಪಿಯನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.
ಮುಡಿಪು ಕೈರಂಗಳದ ನವಾಝ್ (28) ಬಂಧಿತ. ಫೆ.23 ರಂದು ಮುಡಿಪು ಪೇಟೆಯಲ್ಲಿ ಅರಫಾ ಹಾರ್ಡ್ವೇರ್ ಅಂಗಡಿ ಮಾಲೀಕರಾದ ಮಹಮ್ಮದ್ ಹನೀಫ್ ಎಂಬವರಿಗೆ ತಲೆಗೆ ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿದ್ದರು. ಕೃತ್ಯ ಎಸಗಿದ ತಂಡದಲ್ಲಿ ನವಾಝ್ ಮತ್ತು ಆತನ ಸಹಚರರು ಭಾಗಿಯಾಗಿದ್ದರು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡಿದ್ದ ಕೊಣಾಜೆ ಪೊಲೀಸರು ಪ್ರಮುಖ ಆರೋಪಿ ನವಾಜ್ ನನ್ನು ಬಂಧಿಸಿ, ಇತರ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ವೈದ್ಯ ವಿದ್ಯಾರ್ಥಿಗಳ ಅಪಹರಣಕಾರ: ಆರೋಪಿ ನವಾಝ್ ರಾಜ್ಯಾದ್ಯಂತ ಸುದ್ಧಿ ಗಳಿಸಿದ್ದ ದೇರಳಕಟ್ಟೆ ವೈದ್ಯ ವಿದ್ಯಾರ್ಥಿ-ವಿದ್ಯಾರ್ಥಿನಿ ಅಪಹರಣ ನಡೆಸಿ ಲೈಂಗಿಕ ಶೋಷಣೆ ನಡೆಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಇತ್ತೀಚೆಗೆ ಜೈಲಿನಿಂದ ಬಿಡುಗಡೆಗೊಂಡ ಈತ ಮತ್ತೆ ಅಪರಾಧ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದಾನೆ. ಈ ಹಿಂದೆ ಮುಡಿಪುವಿನಲ್ಲಿ ನಡೆದ ಗಲಭೆ ಪ್ರಕರಣದಲ್ಲಿಯೂ ಆರೋಪಿಯಾಗಿದ್ದಾನೆ.
ಪೊಲೀಸ್ ಆಯುಕ್ರ ಚಂದ್ರಶೇಖರ್, ಡಿಸಿಪಿಗಳಾದ ಶಾಂತರಾಜು ಮತ್ತು ಸಂಜೀವ ಪಾಟೀಲ್ ಹಾಗೂ ಎಸಿಪಿ ದಕ್ಷಿಣ ಉಪವಿಭಾಗದ ಕಲ್ಯಾಣ್ ಶೆಟ್ಟಿ ಅವರ ಮಾರ್ಗದರ್ಶನದಂತೆ ಕೊಣಾಜೆ ಪೊಲೀಸ್ ಠಾಣಾಧಿಕಾರಿ ಅಶೋಕ್.ಪಿ, ಪಿ.ಎಸ್.ಐ.ಸುಧಾಕರ್ ಹಾಗೂ ಸಿಬ್ಬಂದಿಗಳಾದ ಸಂತೋಷ್, ಶಿವಪ್ರಸಾದ್, ಚಂದ್ರಶೇಖರ್ ಪಾಲ್ಗೊಂಡಿದ್ದರು.


