ಮಂಗಳೂರು, ಆ. 31 : ತಮ್ಮನೇ ಚಾಕು ಇರಿದು ಅಣ್ಣನನ್ನು ಕೊಲೆ ಮಾಡಿದ ಘಟನೆ ಮಂಗಳೂರಿನ ಕೊಟ್ಟಾರ ಕ್ರಾಸ್ ಸಮೀಪದ ಮನೆಯಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.

ಅಡಿವೆಪ್ಪ(40) ಕೊಲೆಯಾದ ವ್ಯಕ್ತಿ. ರಾಜು (36) ಕೊಲೆ ಮಾಡಿದ ಆರೋಪಿ.ದೂರುದಾರರಾದ ಈರವ್ವ ಗುರುಪುತ್ರ ಕುಂಬಾರ ಅವರು ಕಳೆದ ಒಂದು ವರ್ಷದಿಂದ ಕೊಟ್ಟಾರ ಕ್ರಾಸ್ ಸಮೀಪದ ಬಾಡಿಗೆ ಮನೆಯಲ್ಲಿ ತಮ್ಮ ಪುತ್ರರಾದ ಅಡಿವೆಪ್ಪ ಮತ್ತು ರಾಜು ಅವರೊಂದಿಗೆ ವಾಸವಾಗಿದ್ದರು. ಇಬ್ಬರೂ ಮಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಇವರಿಬ್ಬರ ಅತಿಯಾದ ಮದ್ಯಪಾನ ಅಭ್ಯಾಸದಿಂದಾಗಿ ಅವರ ಪತ್ನಿಯರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಅಡಿವೆಪ್ಪ ಅವರ ಪತ್ನಿ ರೇಖಾ ಅವರು ಮಕ್ಕಳೊಂದಿಗೆ ಕಾವೂರಿನಲ್ಲಿ ವಾಸವಾಗಿದ್ದು, ಆಗಾಗ್ಗೆ ಕುಟುಂಬವನ್ನು ಭೇಟಿಯಾಗುತ್ತಿದ್ದರು.ಆಗಸ್ಟ್ 30ರಂದು ಸಂಜೆ ಸುಮಾರು 6 ಗಂಟೆಗೆ ದೂರುದಾರರು ಕೊಟ್ಟಾರ ಕ್ರಾಸ್ ಬಳಿ ತಮ್ಮ ಗೂಡಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ವೇಳೆ, ಪುತ್ರರಾದ ಅಡಿವೆಪ್ಪ ಮತ್ತು ರಾಜು ಮದ್ಯ ಸೇವಿಸಿ ಅಲ್ಲಿಗೆ ಬಂದಿದ್ದರು. ಈ ವೇಳೆ ಅಡಿವೆಪ್ಪ ಅವರು ರಾಜು ಅವರ ಮೊಬೈಲ್ ಫೋನ್ ತೆಗೆದುಕೊಂಡಿದ್ದರು. ದೂರುದಾರರು ಮಧ್ಯಪ್ರವೇಶಿಸಿ ಅಡಿವೆಪ್ಪ ಅವರಿಗೆ ಬುದ್ಧಿವಾದ ಹೇಳಿ, ಮೊಬೈಲ್ ಫೋನ್ ಅನ್ನು ರಾಜು ಅವರಿಗೆ ಹಿಂದಿರುಗಿಸಿದ್ದರು. ಬಳಿಕ ಇಬ್ಬರೂ ಸಹೋದರರು ಸಂಜೆ ಸುಮಾರು 6.30ಕ್ಕೆ ಮನೆಗೆ ತೆರಳಿದ್ದರು.ನಂತರ ರಾತ್ರಿ ಸುಮಾರು 10.30ಕ್ಕೆ ಅವರ ನೆರೆಹೊರೆಯ ಪ್ರೀತಮ್ ಅವರು ದೂರುದಾರರ ಅಂಗಡಿಗೆ ಕೆಲವು ವಸ್ತುಗಳನ್ನು ಖರೀದಿಸಲು ಬಂದು ಮನೆಗೆ ಹಿಂದಿರುಗಿದ್ದರು. ರಾತ್ರಿ ಸುಮಾರು 10.45ಕ್ಕೆ ಮತ್ತೆ ಅಂಗಡಿಗೆ ಬಂದ ಪ್ರೀತಮ್, ಇಬ್ಬರು ಸಹೋದರರು ಜಗಳವಾಡಿದ್ದು, ಮನೆಯಲ್ಲಿ ರಕ್ತ ಕಾಣಿಸುತ್ತಿದೆ ಎಂದು ದೂರುದಾರರಿಗೆ ತಿಳಿಸಿದ್ದಾರೆ.ತಕ್ಷಣ ಪ್ರೀತಮ್ ಅವರ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದ ದೂರುದಾರರು ಮನೆಗೆ ತೆರಳಿದ್ದಾರೆ. ಈ ವೇಳೆ ಕಿರಿಯ ಪುತ್ರ ರಾಜು ತನ್ನ ಅಣ್ಣ ಅಡಿವೆಪ್ಪ ಅವರ ಎದೆಗೆ ಚೂರಿಯಿಂದ ಇರಿದಿರುವುದು ಬೆಳಕಿಗೆ ಬಂದಿದೆ. ಅಡಿವೆಪ್ಪ ಅವರಿಗೆ ತೀವ್ರ ರಕ್ತಸ್ರಾವವಾಗಿದ್ದು, ಅವರನ್ನು ಆಂಬ್ಯುಲೆನ್ಸ್ ಮೂಲಕ ಚಿಕಿತ್ಸೆಗಾಗಿ ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಡಿವೆಪ್ಪ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.ಘಟನೆ ಕುರಿತು ದೂರುದಾರರು ಬಳಿಕ ಅಡಿವೆಪ್ಪ ಅವರ ಪತ್ನಿ ರೇಖಾ ಅವರಿಗೆ ಮಾಹಿತಿ ನೀಡಿದರು. ನಂತರ ಅವರೊಂದಿಗೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದರು. ಈ ಕಾರಣದಿಂದಾಗಿ ಎಫ್ಐಆರ್ ದಾಖಲಿಸುವಲ್ಲಿ ವಿಳಂಬವಾಗಿದೆ ಎಂದು ತಿಳಿಸಲಾಗಿದೆ.ದೂರಿನ ಆಧಾರದ ಮೇಲೆ ಘಟನೆ ಸಂಬಂಧ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉರ್ವ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್), 2023ರ ಸೆಕ್ಷನ್ 103(1) ಅಡಿಯಲ್ಲಿ ರಾಜು ಕುಂಬಾರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ಕುರಿತು ತನಿಖೆ ಮುಂದುವರಿದಿದೆ.

