ಪ್ರಸ್ತುತ ದಿನಗಳಲ್ಲಿ ಕೇವಲ ಪಠ್ಯ ಶಿಕ್ಷಣ ಸಾಲದು, ಪಠ್ಯೇತರ ಚಟುವಟಿಕೆಗಳೂ ಅಗತ್ಯ. ಸ್ಪರ್ಧೆಗಳ ಅಯೋಜನೆಯಿಂದ ಮಕ್ಕಳು ಮೊಬೈಲ್ ಬಿಟ್ಟು ಮೈದಾನದಲ್ಲಿ ಕಳೆಯುವ ಅವಕಾಶ ಸಿಗುತ್ತದೆ, ಮಕ್ಕಳಿಗೆ ಎಷ್ಟೇ ಆಸ್ತಿಯನ್ನು ಮಾಡಿಟ್ಟರೂ ಅರೋಗ್ಯ ಇಲ್ಲ ಅಂದ್ರೆ ಯಾವುದೇ ಪ್ರಯೋಜನ ಇಲ್ಲ. ಹಾಗಾಗಿ ಕ್ರೀಡೆ ಬಹಳ ಪ್ರಮುಖ್ಯ ವಾಗಿದೆ ಎಂದು ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗ ಸಹಾಯಕ ನಿರ್ದೇಶಕ ಪ್ರೊ.ರಮೇಶ್ ಹೇಳಿದರು.

ಅಸೈಗೋಳಿ ಯುವಕ ಮಂಡಲ ಮತ್ತು ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿಯಿಂದ ನಡೆಯಲಿರುವ ೩೮ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ‘ಅಸೈಗೋಳಿ ಮೊಸರು ಕುಡಿಕೆ’ ಉತ್ಸವದ ಪ್ರಯುಕ್ತ ಅಸೈಗೋಳಿ ಯುವಕ ಮಂಡಲದ ಕೇಂದ್ರ ಮೈದಾನದಲ್ಲಿ ನಡೆದ ‘ಕ್ರೀಡಾ ಸಂಭ್ರಮ-2026’ ಉದ್ಘಾಟಿಸಿ ಮಾತನಾಡಿದರು.
ಬಂಟರ ಸಂಘ ಉಳ್ಳಾಲ ವಲಯಾಧ್ಯಕ್ಷ ರವೀಂದ್ರ ರೈ ಕಲ್ಲಿಮಾರ್ ಮಾತನಾಡಿ, ಕ್ರೀಡೆ ಕೇವಲ ಮನರಂಜನೆಗೆ ಸೀಮಿತವಲ್ಲ. ಮಾನಸಿಕ, ದೈಹಿಕ ಆರೋಗ್ಯ, ಸರ್ವಧರ್ಮ ಸಮನ್ವಯತೆ, ಪ್ರೀತಿ, ತಾಳ್ಮೆ, ಪರಸ್ಪರ ಬೆರೆಯುವಿಕೆ ಮುಂತಾದ ಜೀವನ ಮೌಲ್ಯಗಳಿವೆ ಎಂದು ತಿಳಿಸಿದರು.
ಅಸೈಗೋಳಿ ಯುವಕ ಮಂಡಲದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಫುಲ್ಲು ಅಧ್ಯಕ್ಷತೆ ವಹಿಸಿ, ಕ್ರೀಡೆಗೆ ಜಾತಿ, ಧರ್ಮದ ಹಂಗಿಲ್ಲ. ಎಲ್ಲರೂ ಭಾಗವಹಿಸುವ ಕ್ರೀಡಾಕೂಟ ಸಮಾಜದಲ್ಲಿ ಸಾಮರಸ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಕೊಣಾಜೆ ಮಂಗಳ ಗ್ರಾಮೀಣ ಯುವಕ ಸಂಘದ ಅಧ್ಯಕ್ಷ ಎ.ಕೆ.ಅಬ್ದುಲ್ ರಹ್ಮಾನ್ ಕೋಡಿಜಾಲ್, ಪರಂಜ್ಯೋತಿ ಮಾತೃಮಂಡಳಿ ಅಧ್ಯಕ್ಷೆ ನಾಗವೇಣಿ ಶೆಟ್ಟಿ, ಸಂಚಾಲಕ ಕೃಷ್ಣಪ್ಪ, ಸಿದ್ದಾರ್ಥ್ ಶೆಟ್ಟಿ ಜತೆಕಾರ್ಯದರ್ಶಿ ವಿಶ್ವನಾಥ ಪೂಜಾರಿ, ವನಿತಾ ಮನಮೋಹನ್ ಮೊದಲಾದವರು ಉಪಸ್ಥಿತರಿದ್ದರು.
ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ತ್ಯಾಗಂ ಹರೇಕಳ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಕ್ರೀಡಾ ಸಂಚಾಲಕ ರಾಧಾಕೃಷ್ಣ ರೈ ವಂದಿಸಿದರು.ದೈಹಿಕ ಶಿಕ್ಷಣ ಶಿಕ್ಷಕ ರಾಜೀವ ಟಿ.ನಾಯಕ ನಿರೂಪಿಸಿದರು.

