ಉಳ್ಳಾಲ: ಸೋಮೇಶ್ವರ ಗ್ರಾಮದ ಕುಂಪಲ ಜಂಕ್ಷನ್ ಪ್ರದೇಶದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದ ಮೂವರು ಮಾದಕ ವಸ್ತು ಸೇವನೆ ಮಾಡಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಗಸ್ಟ್ 11ರಂದು ಸಂಜೆ 5 ಗಂಟೆ ಸುಮಾರಿಗೆ ಕುಂಪಲ ಜಂಕ್ಷನ್ನ ಸಾರ್ವಜನಿಕ ಸ್ಥಳದಲ್ಲಿ ಮಹಮ್ಮದ್ ಹಪೀದ್ ಹಸನ್ (23), ಅಬಿಷೇಕ್ (23) ಹಾಗೂ ಅಲೇನಾ ಅನೀಲ್ ಡೆನಿಯಲ್ ಎಂಬವರು ನಿಷೇಧಿತ ಮಾದಕ ವಸ್ತು ಸೇವಿಸಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದರು ಎನ್ನಲಾಗಿದೆ.
ಈ ಕುರಿತು ಮಾಹಿತಿ ಪಡೆದ ಉಳ್ಳಾಲ ಠಾಣೆಯ ಪಿಎಸ್ಐ ಸಂತೋಷ ಕುಮಾರ್ ಡಿ. ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ.
ನಂತರ ಆರೋಪಿಗಳನ್ನು ಕೋಟೆಕಾರು–ನಾಟೆಕಲ್ ಯುನಿವರ್ಸಿಟಿ ರಸ್ತೆಯಲ್ಲಿರುವ ಕಣಚೂರು ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್ಗೆ ವೈದ್ಯಕೀಯ ತಪಾಸಣೆಗಾಗಿ ಹಾಜರುಪಡಿಸಲಾಯಿತು. ಆಸ್ಪತ್ರೆಯ ವೈದ್ಯಾಧಿಕಾರಿಯವರು ನಡೆಸಿದ ವೈದ್ಯಕೀಯ ಪರೀಕ್ಷೆಯ ಬಳಿಕ ಆರೋಪಿಗಳು ಮಾದಕ ವಸ್ತು ಸೇವಿಸಿರುವುದಾಗಿ ಅಭಿಪ್ರಾಯ ನೀಡಿ, ಬಯೋಕೆಮಿಸ್ಟ್ರಿ ವರದಿಯೊಂದಿಗೆ ದೃಢಪತ್ರ ನೀಡಿದ್ದಾರೆ.
ಈ ವರದಿಯ ಆಧಾರದ ಮೇಲೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ.


