ಉಳ್ಳಾಲ: ಛಾಯಾಗ್ರಾಹಕರ ಕುಟುಂಬ ಭದ್ರತೆಗಾಗಿ ಸೌತ್ ಕೆನರಾ ಫೋಟೊಗ್ರಾಫರ್ಸ್ ಅಸೋಸಿಯೇಷನ್(ಎಸ್ ಕೆಪಿಎ)ವತಿಯಿಂದ ನೂತನ ಯೋಜನೆಯೊಂದು ಜಾರಿಗೊಳ್ಳಲಿದ್ದು,ಸಂಘದ ಎಲ್ಲಾ ಸದಸ್ಯರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಸೌತ್ ಕೆನರಾ ಫೋಟೊಗ್ರಾಫರ್ಸ್ ಅಸೋಸಿಯೇಷನ್ ನ ಜಿಲ್ಲಾಧ್ಯಕ್ಷರಾದ ನವೀನ್ ರೈ ಪಂಜಳ ತಿಳಿಸಿದರು.

ಉಳ್ಳಾಲ ಶ್ರೀ ಚೀರುಂಭ ಭಗವತಿ ಕ್ಷೇತ್ರದ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೊಗ್ರಾಫರ್ಸ್ ಅಸೋಸಿಯೇಷನ್ ನ ಉಳ್ಳಾಲ ವಲಯದ ಹದಿಮೂರನೇ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ದಕ್ಷಿಣ ಕನ್ನಡ, ಉಡುಪಿ ಉಭಯ ಜಿಲ್ಲೆಯ ಛಾಯಾಗ್ರಾಹಕರ ಶ್ರೇಯೋಭಿವೃದ್ಧಿಗಾಗಿ ಎಸ್ ಕೆಪಿಎ ಅವಿರತವಾಗಿ ಶ್ರಮಿಸುತ್ತಿದೆ. ಸಂಘದ ಸದಸ್ಯರ ಕುಟುಂಬದ ಭದ್ರತೆಗಾಗಿ ಎಸ್ ಕೆಪಿಎ ವತಿಯಿಂದ ನೂತನ ಯೋಜನೆಯೊಂದನ್ನು ಈ ವರುಷದ ಕೊನೆಯಲ್ಲಿ ಜಾರಿಗೊಳಿಸಲಿದ್ದು, ಸದಸ್ಯರು ವಾರ್ಷಿಕ 3000/ ರೂ.ಗಳನ್ನ ಕಟ್ಟಿದಲ್ಲಿ ಅವರ ಮರಣಾನಂತರ ಕುಟುಂಬಕ್ಕೆ ಹತ್ತು ಲಕ್ಷ ರೂಪಾಯಿಗಳು ಯೋಜನೆಯ ಮುಖಾಂತರ ಪರಿಹಾರ ರೂಪದಲ್ಲಿ ಸಿಗಲಿದೆಯೆಂದರು.
ಎಸ್ ಕೆಪಿಎ ಉಳ್ಳಾಲ ವಲಯದ ಅಧ್ಯಕ್ಷರಾದ ರಾಜೇಶ್ ತೊಕ್ಕೊಟ್ಟು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಯ್ ಕುಮಾರ್, ಉಪಾಧ್ಯಕ್ಷರಾದ ದೇವರಾಜ್ ಶೆಟ್ಟಿ,ಎಸ್ ಕೆಪಿಎ ವಿವಿದೋದ್ಧೇಶ ಸಹಕಾರಿ ಸಂಘದ ನಿರ್ದೇಶಕರಾದ ಚಿದಾನಂದ.ಎ, ಜಿಲ್ಲಾ ಕಟ್ಟಡ ಸಮಿತಿ ಸದಸ್ಯರಾದ ಅರುಣ್ ಉಳ್ಳಾಲ್,ಉಳ್ಳಾಲ ವಲಯದ ಗೌರವಾಧ್ಯಕ್ಷರಾದ ಪ್ರವೀಣ್ ಬೀರಿ, ಉಪಾಧ್ಯಕ್ಷರಾದ ಸಿದ್ಧೀಕ್ ಮೊದಲಾದವರು ಉಪಸ್ಥಿತರಿದ್ದರು.
ಎಸ್ ಕೆಪಿಎ ಉಳ್ಳಾಲ ವಲಯ ಉಪಾಧ್ಯಕ್ಷರಾದ ಕಿರಣ್ ಉಳ್ಳಾಲ್ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಸಚಿನ್ ಶೆಟ್ಟಿ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಸಂದೇಶ್ ಉಳ್ಳಾಲ್ ಲೆಕ್ಕ ಪತ್ರ ಮಂಡಿಸಿದರು. ಡೆಮಾಟ್ರಿಕ್ ಡಿಸೋಜ ನಿರೂಪಿಸಿದರು. ತನುಂಜಯ ರಾವ್ ವಂದಿಸಿದರು.


