ಬಿ.ಸಿ.ರೋಡ್ : ಸಂಬಂಧಿ ಇಯುವಕ, ತನಗೆ ನಿತ್ಯ ಕಿರುಕುಳ ನೀಡುತ್ತಿದ್ದ ಚೇತನ್ ಕೆಎಸ್ ಆರ್ ಟಿಸಿ ಬಸ್ಸಿನಲ್ಲಿ ನನ್ನ ಪಕ್ಕದಲ್ಲೇ ಕುಳಿತಿದ್ದಾನೆ ಅನ್ನುತ್ತಾ ಮನೆಮಂದಿಗೆ ಯುವತಿ ಲಾವಣ್ಯ ಮೊಬೈಲ್ ಮೂಲಕ ತಿಳಿಸುತ್ತಿದ್ದಂತೆ ತಲವಾರು ಎತ್ತಿದ್ದನು ಎಂಬುದು ಬಸ್ಸಿನಲ್ಲಿದ್ದ ಪ್ರತ್ಯಕ್ಷದರ್ಶಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಕಲ್ಲಡ್ಕದಲ್ಲಿ ಕೆಲಸ ಮುಗಿಸಿ ಬಂಟ್ವಾಳ ಕಕ್ಯೆಪದವು ನಿವಾಸಿ ಲಾವಣ್ಯ(೨೫) ವಾಪಸ್ಸಾಗುತ್ತಿದ್ದಾಗ, ಅದೇ ಬಸ್ಸನ್ನು ಸಂಬಂಧಿ ಚೇತನ್ ಕೂಡಾ ಹತ್ತಿದ್ದಾನೆ. ಬೇರೆ ಕಡೆಯಲ್ಲಿ ಸೀಟು ಇದ್ದರೂ, ಲಾವಣ್ಯ ಸಮೀಪವೇ ಬಂದು ಕಿರಾತಕ ಕುಳಿತಿದ್ದನು. ಬಿ.ಸಿ.ರೋಡ್ ಹತ್ತಿರವಾಗುತ್ತಿದ್ದಂತೆ ಗಾಬರಿಗೊಂಡಿದ್ದ ಲಾವಣ್ಯ ಮೊಬೈಲ್ ಮೂಲಕ ಮನೆಮಂದಿಗೆ ಕರೆ ಮಾಡಿ ಆತ ತನ್ನ ಬಳಿಯೇ ಕುಳಿತಿದ್ದಾನೆ ಅಂದಿದ್ದಾಳೆ. ಅಷ್ಟರಲ್ಲಿ ತನ್ನಲ್ಲಿದ್ದ ತಲವಾರು ಹೊರತೆಗೆದ ಚೇತನನ್ನು ಕಂಡು ಬೆಚ್ಚಿಬಿದ್ದ ಲಾವಣ್ಯ, ಬಸ್ಸಿನಿಂದ ಇಳಿಯಲು ಮುಂದಾಗಿದ್ದಾಳೆ. ಆಕೆ ಇಳಿಯುತ್ತಿದ್ದಂತೆ ಸಾರ್ವಜನಿಕರೆದುರೇ ಆಕೆಯನ್ನು ಅಟ್ಟಾಡಿಸಿಕೊಂಡು ತಲೆ ಮತ್ತು ಬೆನ್ನಿನ ಭಾಗಕ್ಕೆ ಯದ್ವಾತದ್ವ ಕಡಿದು ಹತ್ಯೆ ನಡೆಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಘಟನೆಯ ವಿಡಿಯೋವನ್ನು ಸ್ಥಳದಲ್ಲಿದ್ದ ವ್ಯಕ್ತಿಯೋರ್ವರು ಸೆರೆಹಿಡಿದಿದ್ದಾರೆ. ಕೊನೇ ಘಳಿಗೆಯಲ್ಲಿ ಲಾವಣ್ಯಳಿಗೆ ಕಡಿದು ಪರಾರಿಯಾಗುವಂತಹ ವಿಡಿಯೋ ಸೆರೆಯಾಗಿದೆ. ಏಕಮುಖ ಪ್ರೇಮವೇ ಲಾವಣ್ಯ ಜೀವಕ್ಕೆ ಕಂಟಕವಾಗಿದೆ ಅನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.


