ಉಳ್ಳಾಲ: ಸೋಮೇಶ್ವರ ಪರಿಸರದಲ್ಲಿ ಶ್ರೀಕೃಷ್ಣ ಆರಾಧನೆ ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ. ಕುಂಪಳದಲ್ಲಿ ಈ ಉತ್ಸವದ ಆರಂಭದ ಸಂದರ್ಭದಲ್ಲಿಯೂ ಸೋಮೇಶ್ವರ ಕ್ಷೇತ್ರದ ತೀರ್ಥವನ್ನು ಪಡೆದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅಭಿಪ್ರಾಯಪಟ್ಟರು.

ಅವರು ಸೋಮೇಶ್ವರದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಠಮಿ ಉತ್ಸವ ಸಮಿತಿ ಆಶ್ರಯದಲ್ಲಿ ಸೆ. 4 ರಂದು ನಡೆಯಲಿರುವ ನಾಲ್ಕನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಠಮಿ ಉತ್ಸವ ಮುದ್ದುಕೃಷ್ಣ ವೇಷ ಸ್ಪರ್ಧೆ ಹಾಗೂ ವಿವಿಧ ಮನೋರಂಜನಾ ಸ್ಪರ್ಧೆಗಳ ಆಮಂತ್ರಣ ಪತ್ರಿಕೆಯನ್ನು ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದ ವಠಾರದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.
ಉತ್ಸವವನ್ನು ಯಶಸ್ವಿಯಾಗಿ ಆಯೋಜಿಸುವುದು ಸುಲಭದ ಮಾತಲ್ಲ. ಎಲ್ಲರನ್ನು ಒಗ್ಗೂಡಿಸಿ, ಧಾರ್ಮಿಕ ಕ್ಷೇತ್ರವನ್ನು ಮುನ್ನಡೆಸುವುದು ದೊಡ್ಡ ಜವಾಬ್ದಾರಿಯ ಕೆಲಸವಾಗಿದೆ. ಸಂಘಟನೆಯ ಶಕ್ತಿ, ಶಿಸ್ತು ಮತ್ತು ಸಮರ್ಪಣೆಯಿಂದ ಮಾತ್ರ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯ.ಸೋಮೇಶ್ವರದಲ್ಲಿ ನಡೆಯುತ್ತಿರುವ ಶ್ರೀಕೃಷ್ಣ ಆರಾಧನೆ ವಿಜೃಂಭಣೆಯಿಂದ, ಭಕ್ತಿಭಾವದಿಂದ ಹಾಗೂ ಶಿಸ್ತುಬದ್ಧವಾಗಿ ನೆರವೇರಬೇಕು. ಈ ಉತ್ಸವವು ಸಮಾಜದಲ್ಲಿ ಸೌಹಾರ್ದತೆ, ಧಾರ್ಮಿಕ ಮೌಲ್ಯಗಳು ಮತ್ತು ಸಂಘಟನಾ ಮನೋಭಾವವನ್ನು ಮತ್ತಷ್ಟು ಬಲಪಡಿಸಲಿ ಎಂದು ಶುಭ ಹಾರೈಸಿದರು.
ಮೂಡಬಿದ್ರೆ ತಹಶೀಲ್ದಾರ್ ಗುರುಪ್ರಸಾದ್ ಮಾತನಾಡಿ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶ ಕೇವಲ ಉತ್ಸವ ಆಚರಣೆಯಲ್ಲ; ಸಮಾಜದಲ್ಲಿ ಒಗ್ಗಟ್ಟು ಬೆಳೆಸುವುದು ಹಾಗೂ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವುದಾಗಿದೆ.ಇಂತಹ ಉತ್ಸವಗಳು ಸಮಾಜದ ಎಲ್ಲ ವರ್ಗದ ಜನರನ್ನು ಒಂದೇ ವೇದಿಕೆಗೆ ಕರೆತಂದು ಪರಸ್ಪರ ಸಹಕಾರ, ಸೌಹಾರ್ದತೆ ಮತ್ತು ಸೇವಾ ಮನೋಭಾವವನ್ನು ಬೆಳೆಸುವ ಕೆಲಸ ಮಾಡುತ್ತವೆ. ಕಾರ್ಯಕ್ರಮಗಳು ಶಿಸ್ತುಬದ್ಧವಾಗಿ, ಸಾಂಸ್ಕೃತಿಕ ಮೌಲ್ಯಗಳಿಗೆ ಅನುಗುಣವಾಗಿ ನಡೆಯುವ ಮೂಲಕ ಸಮಾಜಕ್ಕೆ ಉತ್ತಮ ಮಾದರಿಯಾಗಬೇಕು ಎಂದರು.
ಉತ್ಸವ ಸಮಿತಿ ಗೌರವ ಸಲಹೆಗಾರರಾದ ವಾಸುಗೋಪಾಲ್ ಮಾತನಾಡಿ, ನಾಲ್ಕು ವರ್ಷಗಳ ಪಯಣವನ್ನು ಪೂರ್ಣಗೊಳಿಸಿದ್ದರೂ ಪ್ರತಿವರ್ಷ ಹೊಸ ಹೆಜ್ಜೆಗಳನ್ನು ಇಡುತ್ತಾ ಉತ್ಸವವನ್ನು ಮತ್ತಷ್ಟು ಅರ್ಥಪೂರ್ಣವಾಗಿ ರೂಪಿಸಲಾಗುತ್ತಿದೆ.ಆರಂಭದಿಂದಲೂ ಹಲವು ಸವಾಲುಗಳು ಮತ್ತು ಸಮಸ್ಯೆಗಳು ಎದುರಾದರೂ, ಸಂಘಟನೆಯ ಸದಸ್ಯರು, ಭಕ್ತರು ಹಾಗೂ ಸಾರ್ವಜನಿಕರ ಸಹಕಾರದಿಂದ ಅವುಗಳನ್ನು ಯಶಸ್ವಿಯಾಗಿ ಎದುರಿಸಿ ಉತ್ಸವವನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ.ಪ್ರತಿಯೊಂದು ಅನುಭವವೂ ಮುಂದಿನ ವರ್ಷಗಳ ಉತ್ಸವವನ್ನು ಇನ್ನಷ್ಟು ಉತ್ತಮವಾಗಿ ರೂಪಿಸಲು ನೆರವಾಗಿದ್ದು, ಸಮಾಜದ ಎಲ್ಲರ ಸಹಭಾಗಿತ್ವದೊಂದಿಗೆ ಉತ್ಸವವನ್ನು ಇನ್ನಷ್ಟು ವಿಜೃಂಭಣೆಯಿಂದ, ಶಿಸ್ತುಬದ್ಧವಾಗಿ ಹಾಗೂ ಆದರ್ಶಪ್ರಾಯವಾಗಿ ನಡೆಸುವ ಸಂಕಲ್ಪ ಹೊಂದಿದ್ದೇವೆ ಎಂದರು.
ಆಮಂತ್ರಣ ಪತ್ರಿಕೆ ಬಿಡುಗಡೆಗೆ ಮುನ್ನ ಶ್ರೀ ಕ್ಷೇತ್ರ ಸೋಮೇಶ್ವರದಲ್ಲಿ ವಿಶೇಷ ಪೂಜೆ ನೆರವೇರಿಸಿ, ಕಾರ್ಯಕ್ರಮದ ಪ್ರತಿಯೊಂದು ವಿಚಾರವೂ ಯಶಸ್ವಿಯಾಗಿ ನೆರವೇರಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು.
ಮುಖ್ಯ ಅತಿಥಿಗಳಾಗಿ ಉತ್ಸವ ಸಮಿತಿ ಗೌರವ ಸಲಹೆಗಾರರಾದ ಶರತ್ ಚಂದ್ರ ಗಟ್ಟಿ, ದಿನೇಶ್ ಕಾಜವ, ರಾಜಗೋಪಾಲ್, ಬೆಂಗಳೂರಿನ ವೈದ್ಯ ಡಾ. ಸಂತೋಷ್ ಉಪಸ್ಥಿತರಿದ್ದರು . ಉತ್ಸವ ಸಮಿತಿ ಅಧ್ಯಕ್ಷರಾದ ರಾಘವ ಉಚ್ಚಿಲ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪ್ರವೀಣ್ ಸೋಮೇಶ್ವರ ನಿರೂಪಿಸಿ ವಂದಿಸಿದರು.

