ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ನೂತನವಾಗಿ ಖಾತೆ ಹಂಚಿಕೆಯಾಗುತ್ತಿದ್ದಂತೆಯೇ ನೂತನ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಪೂರ್ಣ ಪ್ರಮಾಣದಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ರಾಜಧಾನಿಯ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಲು ಮುಂದಾಗಿರುವ ಅವರು, ತಡರಾತ್ರಿ ಜಯನಗರದ ಜನರಲ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸುವ ಮೂಲಕ ಅಧಿಕಾರಿಗಳಿಗೆ ಮತ್ತು ವೈದ್ಯರಿಗೆ ಬಿಸಿ ಮುಟ್ಟಿಸಿದ್ದಾರೆ.

ಆಸ್ಪತ್ರೆಗೆ ಸರ್ಪ್ರೈಸ್ ವಿಸಿಟ್ ನೀಡಿದ ಸಚಿವರು, ಅಲ್ಲಿನ ಸ್ವಚ್ಛತೆ ಹಾಗೂ ರೋಗಿಗಳಿಗೆ ಚಿಕಿತ್ಸೆ ಸರಿಯಾಗಿ ಸಿಗುತ್ತಿದೆಯಾ ಇಲ್ಲವಾ ಎಂಬುದನ್ನು ಖುದ್ದಾಗಿ ಪರಿಶೀಲಿಸಿದರು. ಈ ವೇಳೆ ರಾತ್ರಿ ಪಾಳಯದ ಕರ್ತವ್ಯದಲ್ಲಿದ್ದ ಕೆಲವು ವೈದ್ಯರು ಆಸ್ಪತ್ರೆಗೆ ಗೈರಾಗಿರುವುದು ಸಚಿವರ ಗಮನಕ್ಕೆ ಬಂದಿದೆ.
ರೋಗಿಗಳಿಗೆ ತೊಂದರೆ ಕೊಟ್ಟು ಕರ್ತವ್ಯಕ್ಕೆ ಹಾಜರಾಗದ ವೈದ್ಯರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಈ ಬೇಜವಾಬ್ದಾರಿತನದ ಬಗ್ಗೆ ಉನ್ನತ ಮಟ್ಟದ ವಿಚಾರಣೆ ನಡೆಸಲಾಗುವುದು ಎಂದು ಖಡಕ್ ಆಗಿ ಹೇಳಿದ್ದಾರೆ
ಇನ್ನು ಆಸ್ಪತ್ರೆಯ ವಾರ್ಡ ಗಳ ರೌಂಡ್ಸ್ ನಡೆಸುತ್ತಿದ್ದ ಸಂದರ್ಭದಲ್ಲಿ ತಪಾಸಣೆಗಾಗಿ ಬಂದಿದ್ದ ಗರ್ಭಿಣಿಯೊಬ್ಬರು ಆಸನಗಳ ವ್ಯವಸ್ಥೆಯಿಲ್ಲದೆ ನೆಲದ ಮೇಲೆಯೇ ಕುಳಿತಿರುವುದು ಸಚಿವರ ಕಣ್ಣಿಗೆ ಬಿದ್ದಿದೆ. ಇದನ್ನು ನೋಡಿ ತೀವ್ರ ಆಕ್ರೋಶಗೊಂಡ ಯು.ಟಿ. ಖಾದರ್, ಸ್ಥಳದಲ್ಲಿದ್ದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
“ಆಸ್ಪತ್ರೆಗೆ ಬರುವ ರೋಗಿಗಳಿಗೆ, ಅದರಲ್ಲೂ ಗರ್ಭಿಣಿಯರಿಗೆ ಕನಿಷ್ಠ ಆಸನದ ವ್ಯವಸ್ಥೆ ಕಲ್ಪಿಸಲು ನಿಮಗೇನು ತೊಂದರೆ?” ಎಂದು ಸ್ಥಳದಲ್ಲೇ ವೈದ್ಯರನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಆಸ್ಪತ್ರೆಯ ಮೂಲಸೌಕರ್ಯಗಳನ್ನು ತಕ್ಷಣವೇ ಸರಿಪಡಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಸಚಿವರ ಈ ದಿಢೀರ್ ಆಕ್ಷನ್ ಆಸ್ಪತ್ರೆಯ ಸಿಬ್ಬಂದಿಗಳಲ್ಲಿ ನಡುಕ ಹುಟ್ಟಿಸಿದೆ.

