ಮಂಗಳೂರು ಬಂದರು ಪ್ರದೇಶದಲ್ಲಿ ವರ್ಷಗಳಿಂದ ನಡೆಯುತ್ತಿರುವ ಪರಿಸರ ಮಾಲಿನ್ಯ, ಧೂಳು ಹಾಗೂ CRZ ಉಲ್ಲಂಘನೆಗಳ ಕುರಿತು ಸಾರ್ವಜನಿಕರಿಂದ ಅನೇಕ ಬಾರಿ ಆಕ್ಷೇಪಗಳು ವ್ಯಕ್ತವಾಗಿದ್ದರೂ, ಸಂಬಂಧಿತ ಇಲಾಖೆಗಳು ಹಾಗೂ ಜನಪ್ರತಿನಿಧಿಗಳಿಂದ ಸಮರ್ಪಕ ಕ್ರಮಗಳು ಕಂಡುಬರಲಿಲ್ಲ ಎಂಬ ಟೀಕೆಗಳು ಮತ್ತೆ ಕೇಳಿಬರುತ್ತಿವೆ.

ಇದೀಗ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ನಿರಂತರ ಹೋರಾಟ, ದೂರುಗಳು ಹಾಗೂ ದಾಖಲೆ ಸಮೇತ ಮನವಿಗಳ ಪರಿಣಾಮವಾಗಿ ಮಂಗಳೂರು ಬಂದರು ಇಲಾಖೆ ಎಚ್ಚೆತ್ತುಕೊಂಡಿರುವುದು ಗಮನಾರ್ಹ ಬೆಳವಣಿಗೆಯಾಗಿದೆ. ಸಾರ್ವಜನಿಕರ ದೂರುಗಳ ಆಧಾರದಲ್ಲಿ ಬಂದರು ಇಲಾಖೆ ಪತ್ರ ವ್ಯವಹಾರ ಆರಂಭಿಸಿರುವುದು ಪರಿಸರ ಹೋರಾಟಗಾರರ ಒತ್ತಡದ ಫಲವೆಂದು ಹೇಳಲಾಗುತ್ತಿದೆ.
ಆಶ್ಚರ್ಯದ ವಿಷಯವೆಂದರೆ, ಮಂಗಳೂರು ಜಲಸಾರಿಗೆ ಮತ್ತು ಬಂದರು ಇಲಾಖೆಗೆ ಹಲವು ವರ್ಷಗಳಿಂದ ಅನೇಕ ಸಚಿವರು ಹೊಣೆ ಹೊತ್ತಿದ್ದರೂ, ತಮ್ಮದೇ ಇಲಾಖೆಯ ಜಾಗಗಳ ಸರ್ವೆ ಹಾಗೂ ಪರಿಸರ ಸ್ಥಿತಿಗತಿ ಕುರಿತು ಗಂಭೀರ ಗಮನ ಹರಿಸದಿರುವ ಆರೋಪ ಕೇಳಿಬರುತ್ತಿದೆ. ರಮಾನಾಥ ರೈ, ಎಸ್. ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಕೃಷ್ಣ ಪಾಲೇಮಾರ್, ವಿ. ಸೋಮಣ್ಣ ಸೇರಿದಂತೆ ಹಲವು ನಾಯಕರು ಈ ಇಲಾಖೆಯ ಜವಾಬ್ದಾರಿ ನಿರ್ವಹಿಸಿದ್ದರೂ, ಇಲಾಖೆಯ ವ್ಯಾಪ್ತಿಯ ಭೂಮಿ, ಪರಿಸರ ಸಮಸ್ಯೆಗಳು ಹಾಗೂ ಸಾರ್ವಜನಿಕ ಆರೋಗ್ಯದ ಮೇಲೆ ಉಂಟಾಗುತ್ತಿರುವ ಪರಿಣಾಮಗಳ ಕುರಿತು ಸಮಗ್ರ ಅಧ್ಯಯನ ನಡೆಸುವ ಗೋಜಿಗೆ ಹೋಗಲಿಲ್ಲ ಎಂಬ ಸಾರ್ವಜನಿಕ ಅಸಮಾಧಾನ ವ್ಯಕ್ತವಾಗಿದೆ.
ಇದೇ ರೀತಿ ಜಿಲ್ಲೆಯ ಹಲವಾರು ಶಾಸಕರು ಬಂದು ಹೋದರೂ, ಜಿಲ್ಲಾಡಳಿತದಲ್ಲಿ ಹಲವು ಜಿಲ್ಲಾಧಿಕಾರಿಗಳು ಬದಲಾದರೂ ಸಹ ಈ ಇಲಾಖೆಯ ಕಾರ್ಯವೈಖರಿ, ಪರಿಸರ ಹಾನಿ ಹಾಗೂ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಸಾರ್ವಜನಿಕ ಹಿತಾಸಕ್ತಿ, ಪರಿಸರ ಸಂರಕ್ಷಣೆ ಮತ್ತು ಆರೋಗ್ಯದ ವಿಚಾರದಲ್ಲಿ ಗಂಭೀರ ಕ್ರಮ ಕೈಗೊಳ್ಳಬೇಕಾದವರು ಕೇವಲ ಇಲಾಖೆಯ ಹೆಸರಿನಲ್ಲಿ ಲಕ್ಷ ಲಕ್ಷ ಸಂಬಳ ಮತ್ತು ಸವಲತ್ತುಗಳನ್ನು ಪಡೆಯುವುದರಲ್ಲೇ ಸೀಮಿತರಾಗಿದ್ದಾರೆ ಎಂಬ ಆಕ್ರೋಶ ಜನರಿಂದ ವ್ಯಕ್ತವಾಗುತ್ತಿದೆ.
ಬಂದರು ಪ್ರದೇಶದ ಸುತ್ತಮುತ್ತ ವಾಸಿಸುವ ಜನರು ಹಲವು ವರ್ಷಗಳಿಂದ ಧೂಳು ಮಾಲಿನ್ಯ, ಗಾಳಿಯ ಗುಣಮಟ್ಟ ಹದಗೆಡುವಿಕೆ, ಆರೋಗ್ಯ ಸಮಸ್ಯೆಗಳು ಹಾಗೂ ಪರಿಸರ ಹಾನಿ ಕುರಿತು ಧ್ವನಿ ಎತ್ತುತ್ತಲೇ ಬಂದಿದ್ದಾರೆ. ಆದರೆ ಅಧಿಕಾರ ಯಂತ್ರಾಂಗ ಮತ್ತು ರಾಜಕೀಯ ವಲಯದಲ್ಲಿ ಇದಕ್ಕೆ ತಕ್ಕ ಗಂಭೀರತೆ ಕಾಣಿಸಲಿಲ್ಲ ಎನ್ನುವುದು ಸ್ಥಳೀಯರ ಬೇಸರ.
ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟವು ದಾಖಲಾತಿ ಸಮೇತವಾಗಿ ವಿವಿಧ ಇಲಾಖೆಗೆ ಸಲ್ಲಿಸಿದ ದೂರುಗಳು ಹಾಗೂ ಕಾನೂನು ಚೌಕಟ್ಟಿನೊಳಗಿನ ಹೋರಾಟದಿಂದ ಇದೀಗ ಬಂದರು ಇಲಾಖೆ ಸ್ಪಂದಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಸರ ಮತ್ತು ಸಾರ್ವಜನಿಕ ಆರೋಗ್ಯದ ವಿಚಾರದಲ್ಲಿ ನಾಗರಿಕರ ಹಕ್ಕುಗಳನ್ನು ಕಾಪಾಡಲು ಹೋರಾಟ ಸಂಘಟನೆಗಳು ಮುಂದಾಗುತ್ತಿರುವುದು ಪ್ರಜಾಪ್ರಭುತ್ವದ ಆರೋಗ್ಯಕರ ಬೆಳವಣಿಗೆ ಎಂದು ಪರಿಸರ ಹೋರಾಟಗಾರರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಮುಂದೆ ಕೇವಲ ಪತ್ರ ವ್ಯವಹಾರಕ್ಕೆ ಸೀಮಿತವಾಗದೆ, ಸ್ಥಳ ಪರಿಶೀಲನೆ, ವೈಜ್ಞಾನಿಕ ಅಧ್ಯಯನ, ಮಾಲಿನ್ಯ ನಿಯಂತ್ರಣ ಕ್ರಮಗಳು ಹಾಗೂ ಸಾರ್ವಜನಿಕರಿಗೆ ಪಾರದರ್ಶಕ ಮಾಹಿತಿ ನೀಡುವ ಕಾರ್ಯವನ್ನು ಬಂದರು ಇಲಾಖೆ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

