ಉಳ್ಳಾಲ: ಕುಡಿಯುವ ನೀರು ಪೂರೈಕೆ, ವಿಳಂಬ ಕಾಮಗಾರಿ ಬಗ್ಗೆ ವ್ಯಾಪಕ ಚರ್ಚೆ ಕೋಟೆಕಾರ್ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಕೋಟೆಕಾರ್ ಪಟ್ಟಣ ಪಂಚಾಯತ್ ಅಧ್ಯಕ್ಷ ದಿವ್ಯ ಸತೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಮೃತ್ 2.0 ಕುಡಿಯುವ ನೀರು ಯೋಜನೆ ಇಂಜಿನಿಯರ್ ಶೋಭಾ ಮಾತನಾಡಿ, ಮಾಡೂರಿನಲ್ಲಿ ಟ್ಯಾಂಕ್ ಕಾಮಗಾರಿ ಸಂಪರ್ಕ ಆಗಿದೆ. ಪನೀರ್ ನಲ್ಲಿ ಟ್ಯಾಂಕ್ ವ್ಯವಸ್ಥೆ ಆಗಿದೆ. ನಾಟೆಕಲ್ ಕಣಚೂರು ಬಳಿ ಟ್ಯಾಂಕ್ ನಿರ್ಮಾಣ ಯೋಜನೆ ಇದೆ. ಈ ಯೋಜನೆ ಯಡಿ ಆಗಿರುವ ಕಾಮಗಾರಿ ಕಾರ್ಯನಿರ್ವಹಣೆ ಪ.ಪಂ ಮಾಡಬೇಕು ಎಂದು ಎಸ್ಟಿಮೆಂಟ್ನಲ್ಲಿ ಇದೆ. ಕಾರ್ಯನಿರ್ವಹಣೆಯ ಖರ್ಚು ಪಂಚಾಯತ್ ಭರಿಸಬೇಕು. ಒಂದು ತಿಂಗಳೊಳಗೆ ಈ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಸಭೆಗೆ ತಿಳಿಸಿದರು.
ಕೋಟೆಕಾರ್ನ ಕೆಲವು ಕಡೆ ಸಿವಿಲ್ ಕಾಮಗಾರಿ ಆಗುತ್ತಿಲ್ಲ, ಕೆಲವು ಕಡೆ ಮೀಟರ್ ಅಳವಡಿಕೆ, ಪೈಪ್ ಜೋಡಣೆ ಆಗಿಲ್ಲ. ಬಹಳಷ್ಟು ಮನೆಗಳಿಗೆ ಸಂಪರ್ಕ ಬಾಕಿ ಇದೆ. ನೀರು ಕೆಲವು ಬಾರಿ ಬಾರದ ದಿನಗಳಿವೆ. ಒಂದು ಲೈನ್ನಲ್ಲಿ 60 ಮನೆಗಳಿವೆ. ಒಂದು ಮನೆಗೆ ನೀರು ಸರಬರಾಜು ಆಗದಿದ್ದರೆ ಪಂಚಾಯತ್ ನೀರು ಬಿಡಬೇಕಾಗುತ್ತದೆ. ಇದಕ್ಕೆ ಪರಿಹಾರ ಏನು ಎಂದು ಸುಜಿತ್ ಮಾಡೂರು ಪ್ರಶ್ನಿಸಿದರು.
ಮಾಡೂರು ಟ್ಯಾಂಕ್ನಿಂದ ನಾಲ್ಕು ವಾರ್ಡ್ಗಳಿಗೆ ನೀರು ಸರಬರಾಜು ಆಗಬೇಕು. ಆದರೆ ಕೆಲವು ವಾರ್ಡ್ಗಳಲ್ಲಿ ಟ್ಯಾಪ್ನಲ್ಲಿ ನೀರು ಬರುತ್ತಿಲ್ಲ. ಬಹಳಷ್ಟು ಮನೆಗಳಿಗೆ ನೀರು ತಲುಪದೇ ತೊಂದರೆ ಆಗುತ್ತಿದೆ. ಇದಕ್ಕೆ ಪರಿಹಾರ ಆಗಬೇಕು ಎಂದು ಅಹ್ಮದ್ ಅಜ್ಜಿನಡ್ಕ ಹೇಳಿದರು.
ಕೆಲವು ಕಡೆ ಸರಬರಾಜು ಆಗುವುದಿಲ್ಲ ಎಂದು ದೂರು ಇದೆ. ನೀರು ಬಿಡುವವರು ನೀರು ಬಿಡುವಾಗ ನೋಡಬೇಕು ಎಂದು ಅಧ್ಯಕ್ಷ ದಿವ್ಯ ಸತೀಶ್ ನೀರು ಬಿಡುವ ಸಿಬ್ಬಂದಿಗೆ ಸೂಚನೆ ನೀಡಿದರು.
ಕುಡಿಯುವ ನೀರು ಸಂಪರ್ಕ ಮಾಡಿ ವಾರ ಕಳೆದಿದೆ. ಒಂದು ವಾರ್ಡ್ನಲ್ಲಿ ಐದು ಮನೆಗಳಿಗೆ ನೀರು ಬರುವುದಿಲ್ಲ. ಅವರು ಎಲ್ಲಿಗೆ ಹೋಗಬೇಕು ಎಂದು ಉಪಾಧ್ಯಕ್ಷ ಪ್ರವೀಣ್ ಪ್ರಶ್ನಿಸಿದರು. ಟ್ಯಾಂಕರ್ನಲ್ಲಿ ಸರಬರಾಜು ಮಾಡುವ ನೀರಿನ ಗುಣಮಟ್ಟ ಬಗ್ಗೆ ಟ್ಯಾಂಕರ್ನವರು ಪರೀಕ್ಷೆ ಮಾಡಿ ವರದಿ ಒಪ್ಪಿಸುವ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು.
ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆಯಲ್ಲಿ ನೀರು ಬ್ಲಾಕ್ ಆಗಿ ಸಂಚಾರಕ್ಕೆ ತೊಂದರೆ ಆಗುವ ಬಗ್ಗೆ ಮಾಧ್ಯಮದಲ್ಲಿ ವರದಿ ಬಂದಿದೆ. ಈ ಬಗ್ಗೆ ಕೋಟೆಕಾರ್ ಪಟ್ಟಣ ಪಂಚಾಯತ್ ನಿಗಾ ವಹಿಸಬೇಕು. ಈ ಬಗ್ಗೆ ನಾವು ಎನ್ಎಚ್ಎಐಗೆ ಪತ್ರ ಬರೆಯುತ್ತೇವೆ. ಪಂಚಾಯತ್ ವತಿಯಿಂದ ಒಂದು ಮನವಿ ಪತ್ರ ಎನ್ಎಚ್ಎಐಗೆ ಸಲ್ಲಿಸಬೇಕು ಎಂದು ಸಂಚಾರ ಪೊಲೀಸ್ ಇಲಾಖೆ ಎಎಸ್ಐ ಸಂತೋಷ್ ಸಲಹೆ ನೀಡಿದರು.
ಸಭೆಯಲ್ಲಿ ಉಪಾಧ್ಯಕ್ಷ ಪ್ರವೀಣ್, ಮುಖ್ಯಾಧಿಕಾರಿ ಮಾಲಿನಿ, ಸ್ನಾಯಿ ಸಮಿತಿ ಅಧ್ಯಕ್ಷ ಧೀರಜ್ ಉಪಸ್ಥಿತರಿದ್ದರು.

