ಉಳ್ಳಾಲ; ನಮ್ಮ ಭಾರತದ ನೆಲಕ್ಕೆ ಅಪಮಾನವಾದಾಗ ನಾವೆಲ್ಲರೂ ಒಗ್ಗಟ್ಟಾಗಿ ಉತ್ತರ ನೀಡೋಣ. ಈ ದೇಶದ ಮೇಲೆ ನಿರಂತರವಾಗಿ ಆಕ್ರಮಣಗಳಾಗಿವೆ. ಇಂತಹ ಆಕ್ರಮಣಗಳಿಂದ ಬೇರೆ ಬೇರೆ ದೇಶಗಳ ಸಂಸ್ಕೃತಿಯು ನಾಶವಾಗಿದೆ. ಆದರೆ ಭಾರತೀಯ ಸಂಸ್ಕೃತಿಯ ನಾಶ ಎಂದಿಗೂ ಸಾಧ್ಯವಿಲ್ಲ ವಕೀಲರಾದ ಪ್ರಸಾದ್ ಕುಮಾರ್ ರೈ ಬಿ.ಸಿ.ರೋಡ್ ಹೇಳಿದರು.

ಹಿಂದೂ ಸಂಗಮ ಆಯೋಜನಾ ಸಮಿತಿ ಉಳ್ಳಾಲ ತಾಲೂಕು ಇದರ ವತಿಯಿಂದ ಕುರ್ನಾಡು, ಪಜೀರು, ಬೋಳಿಯಾರ್, ಚೇಳೂರು, ಸಜಿಪನಡು, ಸಜಿಪಪಡು ಗ್ರಾಮಗಳನ್ನೊಳಗೊಂಡ ಕುರ್ನಾಡು ಮಂಡಲದ ಮುಡಿಪುವಿನಲ್ಲಿ ಭಾನುವಾರ ನಡೆದ ಹಿಂದೂ ಸಂಗಮದಲ್ಲಿ ಬೌದ್ಧಿಕ್ ನೀಡಿದರು.

ಎಲ್ಲರಿಗೂ ಒಳಿತಾಗಲಿ ಎನ್ನುವ ಸಂಸ್ಕೃತಿ ನಮ್ಮದು. ಶತ್ರುಪಾಲಯದ ಮೇಲೆ ನುಗ್ಗಿ ದಾಳಿ ಮಾಡುವುದೂ ನಮಗೆ ತಿಳಿದಿದೆ. ರಾಮಾಯಣ ಕಾಲದಿಂದ ಹಿಡಿದು ಇತ್ತೀಚಿನ ಸಿಂಧೂರ ಆಪರೇಷನ್ ವರಗೂ ಇದು ನಡೆದಿದೆ. ನಮ್ಮ ಶಕ್ತಿಯನ್ನು, ಸಾಮರ್ಥ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ಅಗತ್ಯವಿದ್ದು, ಈ ಉದ್ದೇಶದಿಂದ ಇಂತಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಮ್ಮತನವನ್ನು ಗಟ್ಟಿಗೊಳಿಸುವ ಕಾರ್ಯ ಆಗಬೇಕಿದೆ. ಕುಟುಂಬ ಪದ್ದತಿಯನ್ನು ಸುದೃಢಗೊಳಿಸಬೇಕಿದೆ ಮತ್ತು ಸಾಮಾಜಿಕ ಸಾಮರಸ್ಯವನ್ನು ಬೆಳೆಸೋಣ ಎಂದರು.

ಹಿರಿಯರಾದ ಸೇಸಪ್ಪ ಟೈಲರ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಗಡಿಪ್ರದಾನರಾದ ಗುಣಕರ ಆಳ್ವ ಯಾನೆ ರಾಮ ರೈ, ಕೃಷಿಕರಾದ ಪರಮೇಶ್ವರ ಸಪಲ್ಯ, ಹಿರಿಯರಾದ ಚಿನ್ನಯ್ಯ ಸಾಲಿಯಾನ್, ಸೂರ್ಯನಾರಾಯಣ ಭಟ್ , ವಿಠಲ ಆಚಾರ್ಯ, ದೈವ ನರ್ತಕ ಸುಂದರ ನಲಿಕೆ, ಧರ್ಮಣ್ಣ ಬೆಳ್ಚಾಡ ರಾಮಣ್ಣ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.ಮಹಿಳಾ ಸಂಚಾಲಕಿ ತುಳಸಿ ನಿತಿನ್ ಗಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಶ್ ಅವರು ಸ್ಬಾಗತಿಸಿದರು. ಶ್ರೇಯಸ್ ವಂದಿಸಿದರು.



