ಉಳ್ಳಾಲ: ಕೇರಳ ಗಡಿಭಾಗದಲ್ಲಿ ಯಕ್ಷಗಾನ ಬೊಂಬೆಯಾಟವನ್ನು ಸ್ಥಾಪಿಸಿ ಸದ್ಯದ ಕಾಲಘಟ್ಟದಲ್ಲಿ ತ್ರಿಶಂಕು ಸ್ಥಿತಿಯಲ್ಲಿದ್ದೇವೆ, ಪ್ರೋತ್ಸಾಹದ ಕೊರತೆಯಿಂದ ಮುಂದಿನ ದಿನಗಳಲ್ಲಿ ನಮ್ಮೊಂದಿಗೆ ಬೊಂಬೆಯಾಟ ನಿಲ್ಲುತ್ತದೋ ಅನ್ನುವ ಆತಂಕವಿದೆ. ಕಲಾಸಕ್ತರು, ಯಕ್ಷರಸಿಕರು, ವಿದ್ಯಾರ್ಥಿಗಳು ವಿಶ್ವ ಪ್ರಸಿದ್ಧಿ ಪಡೆದು ಪಾಕಿಸ್ತಾನ, ಚೀನಾ, ಫ್ರಾನ್ಸ್ ಸಹಿತ ಹಲವು ವಿದೇಶಗಳಲ್ಲಿ ಪ್ರದರ್ಶಗೊಂಡಿರುವ ಕಾಸರಗೋಡು ಶ್ರೀ ಗೋಪಾಲಕೃಷ್ಣ ಬೊಂಬೆಯಾಟದ ಉಳಿವಿಗಾಗಿ “ಗಣ್ಯರೆಡೆಗೆ ಬೊಂಬೆ ನಡಿಗೆ” ಯಕ್ಷಗಾನ ಬೊಂಬೆಯಾಟಕ್ಕೆ ಫೆ.2 ರಂದು ಧರ್ಮಸ್ಥದಲ್ಲಿ ಚಾಲನೆ ನೀಡಲಾಗುವುದು ಎಂದು ಕಾಸರಗೋಡು ಶ್ರೀ ಗೋಪಾಲಕೃಷ್ಣ ಬೊಂಬೆಯಾಟ ಸಂಘದ ನಿರ್ದೇಶಕ ಕೆ. ವಿ. ರಮೇಶ್ ಹೇಳಿದರು.

ತೊಕ್ಕೊಟ್ಟು ಸೇವಾಸೌಧ ಕಚೇರಿಯಲ್ಲಿರುವ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾಹಿತಿ ನೀಡಿದರು.

ತೆಂಕುತಿಟ್ಟು ಯಕ್ಷಗಾನವನ್ನು ಬೊಂಬೆಯಾಟದ ಮೂಲಕ ಪ್ರದರ್ಶಿಸುತ್ತಿರುವ ಕಾಸರಗೋಡಿನ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘವು ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ಮೂಲಕ ವಿಶ್ವದ ಗಮನ ಸೆಳೆದಿದೆ. 2030ರಲ್ಲಿ ಸಂಸ್ಥೆಯ ಸುವರ್ಣ ಮಹೋತ್ಸವ ಜರಗಲಿದ್ದು ಚಂದ್ರಗಿರಿ ತೀರದ ಯಕ್ಷಪುತ್ಥಳಿ ಬೊಂಬೆಮನೆಯಲ್ಲಿ ಸಾವಿರ ಬೊಂಬೆಗಳ ಮ್ಯೂಸಿಯಂ ಪ್ರಗತಿ ಪಥದಲ್ಲಿದೆ ಎಂದರು. ವಿದ್ಯಾರ್ಥಿ-ಯುವಜನರಿಗೆ ಬೊಂಬೆಯಾಟ ತರಬೇತಿ ನೀಡಲಾಗುತ್ತಿದ್ದು ಈಗಾಗಲೇ ನೂರಕ್ಕೂ ಹೆಚ್ಚು ಮಂದಿ ಸಮರ್ಥ ಕಲಾವಿದರಾಗಿ ಹೊರ ಹೊಮ್ಮಿದ್ದಾರೆ. ‘ಚಿಣ್ಣರ ಅಂಗಳಕ್ಕೆ ಪುತ್ಥಳಿ ಯಾತ್ರೆ’ ಮತ್ತು ‘ಶಾಲೆಯತ್ತ ಬೊಂಬೆ ಚಿತ್ರ’ ಯೋಜನೆಗಳು ಸಾಕಾರಗೊಂಡು ಸಾವಿರಾರು ವಿದ್ಯಾರ್ಥಿಗಳು ಈ ಕಲಾಪ್ರಕಾರವನ್ನು ಕಂಡು ಆಕರ್ಷಿತರಾಗಿದ್ದಾರೆ. ಸಂಸ್ಥೆಯು ದೇಶವಿದೇಶಗಳಲ್ಲಿ ಸಂಚರಿಸಿ ಯಕ್ಷಗಾನದ ಮಹತ್ವವನ್ನು ಬೊಂಬೆಯಾಟದ ಮೂಲಕ ಎತ್ತಿ ಹಿಡಿದು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದುಕೊಂಡಿದೆ ಇದೊಂದು ಹೆಮ್ಮೆಯ ಸಂಸ್ಥೆ ಎಂದರು.
ತೆಂಕುತಿಟ್ಟು ಯಕ್ಷಗಾನದ ಪರಂಪರಾಗತ ಮೌಲ್ಯಗಳಿಗೆ ಪುನರುಜ್ಜೀವನ ನೀಡುವ ದೃಷ್ಟಿಯಿಂದ, ಯಕ್ಷಗಾನ ವಾಲ್ಮೀಕಿ ಕುಂಬಳೆ ಪಾರ್ತಿಸುಬ್ಬ ಅವರ ವಂಶಜರಿಂದ ಸ್ಥಾಪಿತವಾದ ಈ ಸಂಸ್ಥೆ ಇದೀಗ ತನ್ನ ಸುವರ್ಣ ಸಂಭ್ರಮದ ಹಾದಿಯಲ್ಲಿ ಸಾಗುತ್ತಿದ್ದು, ಅದರ ಪೂರ್ವಭಾವಿಯಾಗಿ ಈ ಮಹತ್ವಾಕಾಂಕ್ಷಿ ಅಭಿಯಾನವನ್ನು ಸಾಕಾರಗೊಳಿಸುತ್ತಿದೆ. ಭಾರತದಲ್ಲಿ ಬೊಂಬೆಯಾಟವು ಶತಮಾನಗಳ ಇತಿಹಾಸ ಹೊಂದಿರುವ ಸಾಂಪ್ರದಾಯಿಕ ಕಲಾರೂಪವಾಗಿದೆ. ರಾಮಾಯಣ, ಮಹಾಭಾರತ ಮೊದಲಾದ ಮಹಾಕಾವ್ಯಾಧಾರಿತ ಕಥಾವಸ್ತುಗಳ ಮೂಲಕ ಜನಮನವನ್ನು ಆಕರ್ಷಿಸಿದ ಈ ಕಲೆ, ಕಾಲಕ್ರಮೇಣ ವಿವಿಧ ಪ್ರಾದೇಶಿಕ ರೂಪಗಳನ್ನು ಪಡೆದುಕೊಂಡಿದೆ. ಕರ್ನಾಟಕದಲ್ಲಿ ಇದನ್ನು ‘ಗೊಂಬೆಯಾಟ’ ಎಂದರೆ, ಕಾಸರಗೋಡು ಭಾಗದಲ್ಲಿ ಭಾಷಾ ವೈವಿಧ್ಯದಿಂದಾಗಿ ‘ಬೊಂಬೆಯಾಟ’ ಎಂದು ಕರೆಯಲಾಗುತ್ತದೆ. ಯಕ್ಷಗಾನದ ಕಥಾನಕ, ಸಂಗೀತ, ವೇಷಭೂಷಣ ಹಾಗೂ ನೃತ್ಯ ವೈಭವವನ್ನು ಸೂತ್ರಧಾರಿ ಬೊಂಬೆಗಳ ಮೂಲಕ ಪ್ರದರ್ಶಿಸುವ ಈ ಕಲಾರೂಪವು ಇಂದು ಅಪರೂಪವಾಗುತ್ತಿದ್ದು, ಅದರ ಉಳಿವಿಗಾಗಿ ನಿರಂತರ ಪ್ರಯತ್ನ ಅಗತ್ಯವಾಗಿದೆ. ಕಾಸರಗೋಡಿನ ಪಿಲಿಕುಂಜೆಯಲ್ಲಿ ನೆಲೆಗೊಂಡಿರುವ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘವು ದೇಶದ ಏಕೈಕ ತೆಂಕುತಿಟ್ಟು ಶೈಲಿಯ ಯಕ್ಷಗಾನ ಬೊಂಬೆಯಾಟ ತಂಡವಾಗಿದೆ. ಈ ಸಂಸ್ಥೆಯನ್ನು 1981ರಲ್ಲಿ ವಿದ್ವಾನ್ ಲಕ್ಷ್ಮೀನಾರಾಯಣಯ್ಯ ಮತ್ತು ಕೆ. ವೆಂಕಟಕೃಷ್ಣಯ್ಯ ಅವರು ಸ್ಥಾಪಿಸಿದ್ದು, ಇವರು ಯಕ್ಷಗಾನದ ಪಿತಾಮಹನೆಂದು ಖ್ಯಾತರಾದ ಕುಂಭಳೆ ಪಾರ್ತಿಸುಬ್ಬ ಅವರ ವಂಶಜರು.
ಪ್ರಸ್ತುತ ಈ ಸಂಸ್ಥೆಯ ನೇತೃತ್ವವನ್ನು ವಹಿಸಿರುವ ಕೆ.ವಿ. ರಮೇಶ್ ಅವರು, ದೇಶ–ವಿದೇಶಗಳಲ್ಲಿ ನಿರಂತರ ಪ್ರದರ್ಶನ, ಕಾರ್ಯಾಗಾರ ಹಾಗೂ ತರಬೇತಿ ಶಿಬಿರಗಳ ಮೂಲಕ ಯಕ್ಷಗಾನ ಬೊಂಬೆಯಾಟದ ಪುನರುಜ್ಜೀವನಕ್ಕೆ ಶ್ರಮಿಸುತ್ತಿದ್ದಾರೆ.
ದೇಶ–ವಿದೇಶಗಳಲ್ಲಿ 3000ಕ್ಕೂ ಅಧಿಕ ಪ್ರದರ್ಶನ: ಈ ತಂಡವು ಇದುವರೆಗೆ 3000ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿ ರಾಷ್ಟ್ರಮಟ್ಟದಲ್ಲೂ ಅಂತರರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿ ಗಳಿಸಿದೆ. ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ದೆಹಲಿ, ಅಸ್ಸಾಂ, ಪಶ್ಚಿಮ ಬಂಗಾಳ, ಸಿಕ್ಕಿಂ, ಅರುಣಾಚಲ ಪ್ರದೇಶ, ಗುಜರಾತ್ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಪ್ರದರ್ಶನ ನೀಡಲಾಗಿದೆ. ಪಾಕಿಸ್ತಾನ (ಲಾಹೋರ್), ಫ್ರಾನ್ಸ್ (ಪ್ಯಾರಿಸ್), ದುಬೈ, ಪ್ರಾಗ್ (ಚೆಕ್ ಗಣರಾಜ್ಯ), ಚೀನಾ ಮೊದಲಾದ ರಾಷ್ಟ್ರಗಳಲ್ಲಿ ಪ್ರದರ್ಶನ ನೀಡಿ ಭಾರತೀಯ ಸಂಸ್ಕೃತಿಯ ಗಂಭೀರತೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಲಾಗಿದೆ. ‘ಚಿನ್ನರ ಅಂಗಳಕ್ಕೆ ಪುತ್ಥಳಿ ಯಾತ್ರೆ’ – ಇನ್ಫೋಸಿಸ್ ಫೌಂಡೇಶನ್ ಸಹಯೋಗದಲ್ಲಿ 30 ಶಾಲೆಗಳಲ್ಲಿ ಪ್ರದರ್ಶನ , ‘ಶಾಲೆಯತ್ತ ಬೊಂಬೆ ಚಿತ್ತ’ – ಕಾಸರಗೋಡು ಜಿಲ್ಲೆಯ ಶಾಲಾ ಮಟ್ಟದ ಅಭಿಯಾನ, ಕೋವಿಡ್ ಜಾಗೃತಿ ಯಕ್ಷಗಾನ ಬೊಂಬೆಯಾಟ – ಕನ್ನಡ, ಇಂಗ್ಲಿಷ್, ಹಿಂದಿಯಲ್ಲಿ ಡಿಜಿಟಲ್ ಪ್ರದರ್ಶನಗೊಂಡಿದ್ದು, ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆಯೂ ಪ್ರಶಂಸೆಯನ್ನು ಮಾಡಿದೆ.
ಗಣ್ಯರೊಂದಿಗೆ ಯಕ್ಷಪುತ್ಥಳಿಗಳು ಪ್ರಧಾನಮಂತ್ರಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರಿಗೆ ಯಕ್ಷಗಾನ ಬೊಂಬೆಯನ್ನು ಸಾಂಸ್ಕೃತಿಕ ಗೌರವವಾಗಿ ನೀಡಲಾಗಿದೆ.
ಯಕ್ಷಪುತ್ಥಳಿ ಬೊಂಬೆ ಮ್ಯೂಸಿಯಂ – ಮಹಾದೃಷ್ಟಿ : ಸಂಸ್ಥೆಯ ಮಹತ್ವಾಕಾಂಕ್ಷಿ ಕನಸಾದ ‘ಯಕ್ಷ ಪುತ್ತಳಿ ಬೊಂಬೆ ಮನೆ’ ಯೋಜನೆಯಡಿ, ವಿಶ್ವದ ಮೊದಲ ಯಕ್ಷಗಾನ ಬೊಂಬೆ ಮ್ಯೂಸಿಯಂ ಸ್ಥಾಪನೆಯ ಗುರಿಯಿದೆ. ಸುಮಾರು 1000 ಮರದ ಯಕ್ಷಪುತ್ಥಳಿಗಳನ್ನು ನಿರ್ಮಿಸಿ ಪ್ರದರ್ಶಿಸುವ ಯೋಜನೆ ಇದಾಗಿದ್ದು, ಪ್ರತಿ ಬೊಂಬೆಯ ಅಂದಾಜು ವೆಚ್ಚ ರೂ.36,000 ಆಗಿದ್ದು, ಒಟ್ಟು ಯೋಜನಾ ವೆಚ್ಚ ಸುಮಾರು ರೂ.3.75 ಕೋಟಿ ಆಗಲಿದೆ.
ಗಣ್ಯರೆಡೆಗೆ ಬೊಂಬೆ ನಡಿಗೆ – ಪರಂಪರೆಯ ಕಾಯಕಲ್ಪ : ಫೆಬ್ರವರಿ 6ರಂದು ನಡೆಯುವ “ಗಣ್ಯರೆಡೆಗೆ ಬೊಂಬೆ ನಡಿಗೆ” ಅಭಿಯಾನವು ಯಕ್ಷಗಾನ ಬೊಂಬೆಯಾಟವನ್ನು ಸಮಾಜದ ಗಣ್ಯರು, ಕಲಾಭಿಮಾನಿಗಳು ಹಾಗೂ ಯುವ ಪೀಳಿಗೆಗೆ ಮತ್ತೊಮ್ಮೆ ಪರಿಚಯಿಸುವ ಮಹತ್ವದ ವೇದಿಕೆಯಾಗಲಿದೆ. “ಪ್ರೀತಿಯಿಂದ ಬನ್ನಿ… ಯಕ್ಷಪುತ್ಥಳಿಗಳನ್ನು ಹರಸಿ” ಎಂಬ ಮನವಿಯೊಂದಿಗೆ ಸಂಘದ ಪದಾಧಿಕಾರಿಗಳು ಸಾರ್ವಜನಿಕರ ಸಂಪೂರ್ಣ ಸಹಕಾರವನ್ನು ಕೋರಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸದಸ್ಯ ರಾಧಾಕೃಷ್ಣ ಉಳಿಯತಡ್ಕ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು, ಕಾಸರಗೋಡು ಜಿಲ್ಲಾ ಕನ್ನಡ ಜಾಗೃತರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ಜಗದೀಶ್ ಕೂಡ್ಲು, ಎಸ್. ಎಲ್ ಭಾರದ್ವಾಜ್ ಹಾಗೂ ಅಚಲ್ ಭಟ್ ಉಪಸ್ಥಿತರಿದ್ದರು.




