ಉಳ್ಳಾಲ : ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ವಾರಾಹಿ ಪಂಜುರ್ಲಿಗೆ ನೀಡಿದ್ದ ಹರಕೆ ನೇಮೋತ್ಸವದ ವಿವಾದದಲ್ಲಿ ದೈವಾರಾಧನೆಯ ಚಿಂತಕ ತಮ್ಮಣ್ಣ ಶೆಟ್ಟಿಯವರು ಕೊಂಡಾಣ ಕ್ಷೇತ್ರದ ದೈವದ ಬಂಗಾರ ಅಡವಿಟ್ಟ ಬಗ್ಗೆ ವೈಯಕ್ತಿಕ ಆರೋಪ ಮಾಡಿದ್ದ ಕದ್ರಿ ಬಾರೆಬೈಲಿನ ಜಾರಂದಾಯ, ಬಂಟ ಮತ್ತು ವಾರಾಹಿ ಪಂಜುರ್ಲಿ ದೈವಸ್ಥಾನದ ಆಡಳಿತ ಕಮಿಟಿಯ ಗೌರವಾಧ್ಯಕ್ಷ ರವಿ ಪ್ರಸನ್ನ ಅವರು ಕೋಟೆಕಾರು ಗ್ರಾಮದ ಕಾರಣಿಕ ಕ್ಷೇತ್ರ ಕೊಂಡಾಣ ಪಿಲಿಚಾಮುಂಡಿ, ಬಂಟ, ಮುಂಡತ್ತಾಯ ಕ್ಷೇತ್ರಕ್ಕೆ ಸುಮಾರು ನಲ್ವತ್ತರಷ್ಟು ಬೆಂಬಲಿಗರೊಂದಿಗೆ ಭೇಟಿ ನೀಡಿ ದೈವಗಳೆದುರು ಕ್ಷಮೆ ಯಾಚಿಸಿ ತಪ್ಪು ಕಾಣಿಕೆ ಹಾಕಿದ್ದಾರೆ. ಈ ವೇಳೆ ಕುಡ್ಲ ರಾಂಪೇಜ್ ನ ಅಜಯ್ ಅಂಚನ್ ಮೇಲೆ ರವಿ ಪ್ರಸನ್ನ ಬೆಂಬಲಿಗರು ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ.

ರಿಷಬ್ ಶೆಟ್ಟಿ ವಾರಾಹಿ ಪಂಜುರ್ಲಿಗೆ ಸಲ್ಲಿಸಿದ್ದ ಹರಕೆ ನೇಮ ಮತ್ತು ನೇಮದಲ್ಲಿ ದೈವ ನರ್ತಕ ಅತಿರೇಕವಾಗಿ ವರ್ತಿಸಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಟೀಕೆ ಕೇಳಿಬಂದು ವಿವಾದ ರೂಪ ಪಡೆದ ವಿಚಾರದಲ್ಲಿ ಸ್ವತಃ ಕದ್ರಿ ಬಾರೆಬೈಲಿನ ಜಾರಂದಾಯ, ಬಂಟ ಮತ್ತು ವಾರಾಹಿ ಪಂಜುರ್ಲಿ ದೈವಸ್ಥಾನದ ಆಡಳಿತ ಕಮಿಟಿಯ ಗೌರವಾಧ್ಯಕ್ಷ ರವಿ ಪ್ರಸನ್ನ ಸುದ್ದಿಗೋಷ್ಟಿ ನಡೆಸಿ ಹರಕೆ ನೇಮ ಆಗಿರುವ ಬಗ್ಗೆ ನಮಗೆ ಯಾವುದೇ ರೀತಿಯ ಸಂಶಯಗಳಿಲ್ಲ. ದೈವ ನರ್ತನ ಬಗ್ಗೆಯೂ ಆಕ್ಷೇಪ ಇಲ್ಲವೆಂದು ಸಮರ್ಥಿಸಿಕೊಂಡಿದ್ದಲ್ಲದೆ, ವಿವಾದ ಎಬ್ಬಿಸಲು ಕಾರಣರಾಗಿದ್ದಾರೆಂದು ದೈವಾರಾಧಕ ತಮ್ಮಣ್ಣ ಶೆಟ್ಟಿ ವಿರುದ್ಧ ವೈಯಕ್ತಿಕವಾಗಿ ಆರೋಪ ಮಾಡಿದ್ದರು. ತಮ್ಮಣ್ಣ ಶೆಟ್ಟಿ ಎಲ್ಲಿ ಏನು ಮಾಡಿದ್ದಾರೆಂದು ಗೊತ್ತಿದೆ. ಕೊಂಡಾಣ ಮತ್ತು ಷಣ್ಮುಖ ದೇವಸ್ಥಾನದಲ್ಲಿ ದೇವರ ಬಂಗಾರವನ್ನು ತೆಗೆದು ಅಡವಿಟ್ಟಿದ್ದು ದೈವಾರಾಧನೆಗೆ ಅಪಚಾರ ಆಗುವುದಿಲ್ಲವೇ ಎಂದು ಟೀಕಿಸಿದ್ದರು.
ಇದಕ್ಕೆ ಕೌಂಟರ್ ಆಗಿ ಪತ್ರಿಕಾಗೋಷ್ಟಿ ನಡೆಸಿದ್ದ ತಮ್ಮಣ್ಣ ಶೆಟ್ಟಿ ಅವರು ರವಿ ಪ್ರಸನ್ನ ತನ್ನ ಮೇಲಿನ ಕಳ್ಳತನದ ಆರೋಪ ಸಾಬೀತು ಪಡಿಸಲಿ, ಆರೋಪ ಸಾಬೀತು ಪಡಿಸಲಾಗದಿದ್ದರೆ ಆತನನ್ನ ತಂತ್ರಿ ಅಲ್ಲ ಕುತಂತ್ರಿ ಎಂದು ಕರೆಯುವುದಾಗಿ ಬಹಿರಂಗ ಸವಾಲು ಎಸೆದಿದ್ದರು. ಈ ಎಲ್ಲಾ ವಿದ್ಯಮಾನಗಳ ನಡುವೆ ರವಿ ಪ್ರಸನ್ನ ಅವರು ಇಂದು ಕೊಂಡಾಣ ಕ್ಷೇತ್ರಕ್ಕೆ ಬಂದು ದೈವದೆದುರು ತಪ್ಪು ಕಾಣಿಕೆ ಹಾಕಿದ್ದಾರೆ.
ಈ ವೇಳೆ ಕ್ಷೇತ್ರದ ಅಂಗಣದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ರವಿ ಪ್ರಸನ್ನ ಅವರು ಕೊಂಡಾಣ ಕ್ಷೇತ್ರದ ನೀಲೇಶ್ವರ ಪದ್ಮನಾಭ ತಂತ್ರಿ ಮತ್ತು ಆಡಳಿತ ಮಂಡಳಿಯವರು ಕರೆದಿದ್ದಕ್ಕೆ ಇಲ್ಲಿ ಬಂದಿರುವೆ. ಇಲ್ಲಿನ ಪಿಲಿಚಾಮುಂಡಿ, ಬಂಟ ದೈವಗಳ ಎದುರು ಪ್ರಾರ್ಥಿಸಿದ್ದು, ತಮ್ಮಣ್ಣ ಶೆಟ್ಟಿ ಅವರು ಧರ್ಮರಸು ಜಾರಂದಾಯ ದೈವದ ಕುರಿತು ಏನು ಹೇಳಿದ್ದಾರೋ ಬಿಟ್ಟಿದ್ದೇನೆ. ವಾರಾಹಿ ಪಂಜುರ್ಲಿ ದೈವದ ಅಸ್ತಿತ್ವದ ಬಗ್ಗೆ ಬಂದಿದ್ದ ವಿಚಾರವನ್ನೂ ಬಿಟ್ಟಿದ್ದೇನೆ. ಆಡಿದ ಎಲ್ಲಾ ಮಾತುಗಳನ್ನೂ ಹಿಂಪಡೆದಿರುವೆ ಎಂದು ತಮ್ಮಣ್ಣ ಶೆಟ್ರೆ ಹೇಳಿದ್ದರಿಂದ ನಾನೂ ಕೂಡ ಆಡಿದ ಮಾತುಗಳನ್ನ ಹಿಂಪಡೆದಿದ್ದು ವಿವಾದದಲ್ಲಿ ಕೊಂಡಾಣ ಕ್ಷೇತ್ರದ ಹೆಸರು ತೆಗೆದಿದ್ದಕ್ಕೆ ತಪ್ಪು ಕಾಣಿಕೆ ಹಾಕಿ ದೈವದಲ್ಲಿ ಕ್ಷಮೆ ಕೇಳಿರುವುದಾಗಿ ಹೇಳಿದರು.
ಪತ್ರಿಕಾಗೋಷ್ಟಿ ಮುಗಿದ ತಕ್ಷಣ ಯೂಟ್ಯೂಬರ್ ಅಜಯ್ ಅಂಚನ್ ಅವರು ಮೈಕ್ ಹಿಡಿದು ರವಿ ಪ್ರಸನ್ನ ಅವರನ್ನ ಸಂದರ್ಶನ ಮಾಡಲು ಮುಂದಾಗಿದ್ದಾರೆ. ಈ ವೇಳೆ ರವಿ ಪ್ರಸನ್ನ ಅವರೊಂದಿಗೆ ಬಂದಿದ್ದ ನಲ್ವತ್ತಕ್ಕೂ ಅಧಿಕ ಬೆಂಬಲಿಗರು ಕಾರಣೀಕ ಕೊಂಡಾಣ ಕ್ಷೇತ್ರದ ಅಂಗಣದಲ್ಲೇ ಅಜಯ್ ಅವರಿಗೆ ಹಲ್ಲೆ ಮಾಡಲು ಮುಗಿ ಬಿದ್ದಿದ್ದಾರೆ. ಕ್ಷೇತ್ರದ ಆಡಳಿತ ಸಮಿತಿಯವರು ಮತ್ತು ತಮ್ಮಣ್ಣ ಶೆಟ್ಟಿ ಅವರು ಅಜಯ್ ಅವರನ್ನ ರಕ್ಷಿಸಿ ಕಾರಿನೊಳಗಡೆ ಕೂರಿಸಿದ್ದಾರೆ.
ಬಾರೆಬೈಲಿನ ದೈವ ಕ್ಷೇತ್ರದಲ್ಲೂ ಪತ್ರಿಕಾಗೋಷ್ಟಿ ನಡೆಸಿದ್ದ ರವಿ ಪ್ರಸನ್ನ ಅವರು ಬೆಂಬಲಿಗರನ್ನ ಸೇರಿಸಿ ಪತ್ರಕರ್ತರ ಜೊತೆಯೇ ಉದ್ಧಟತನದಿಂದ ಮಾತನಾಡಿದ್ದರು. ಇದೀಗ ಕೊಂಡಾಣ ಕ್ಷೇತ್ರಕ್ಕೆ ತಪ್ಪು ಕಾಣಿಕೆ ಹಾಕಲು ಬಂದಾಗಲೂ ಬೆಂಬಲಿಗರ ಪಡೆಯನ್ನೇ ಕರೆ ತಂದ ರವಿ ಪ್ರಸನ್ನ ಅವರು ಕೊಂಡಾಣ ಕ್ಷೇತ್ರದಲ್ಲಿ ಗಲಾಟೆ ನಡೆಸಿದ್ದಾರೆ.
ಕೊಂಡಾಣ ಪಿಲಿಚಾಮುಂಡಿ, ಬಂಟ,ಮುಂಡತ್ತಾಯ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹರ್ಷರಾಜ್ ಮುದ್ಯ ಕೊಂಡಾಣ ಕ್ಷೇತ್ರದ ಒಂದನೇ ಗುರಿಕಾರರಾದ ಮುತ್ತಣ್ಣ ಶೆಟ್ಟಿ, ಹಿರಿಯರಾದ ನಾರಾಯಣ ರೈ, ಕದ್ರಿ ಮಂಜುನಾಥ ಕ್ಷೇತ್ರದ ಕೃಷ್ಣ ಕದ್ರಿ ಉದ್ಯಮಿ ಗಿರಿಧರ್ ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.


