ಮಂಗಳೂರು,ನ.03; ನಿಟ್ಟೆ ವಿಶ್ವವಿದ್ಯಾನಿಲಯದ 15ನೇ ಘಟಿಕೋತ್ಸವವು ನ.7 ಮತ್ತು 8ರಂದು ಮಂಗಳೂರಿನ ದೇರಳಕಟ್ಟೆ ಕ್ಷೇಮ ಕ್ಯಾಂಪಸ್ ಹಾಗೂ ಕಾರ್ಕಳದ ನಿಟ್ಟೆ ವಿಶ್ವವಿದ್ಯಾನಿಲಯದ ಕ್ಯಾಂಪಸ್ನಲ್ಲಿ ನಡೆಯಲಿದೆ ಎಂದು ವಿಶ್ವವಿದ್ಯಾನಿಲಯ ಉಪಕುಲಪತಿ ಫ್ರೋ.ಎಂಎಸ್.ಮೂಡಿತ್ತಾಯ ಹೇಳಿದ್ದಾರೆ.



ಇವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಘಟಿಕೋತ್ಸವದಲ್ಲಿ 1999 ಪದವೀಧರರರಿಗೆ ಪದವಿ ಪ್ರಧಾನ ಮಾಡಲಾಗುತ್ತದೆ. ಈ ಪೈಕಿ 28 ಡಾಕ್ಟರೇಟ್ , 959 ಸ್ನಾತಕೋತ್ತರ ಪದವೀಧರರಿಗೆ, 1054 ಪದವೀಧರರಿಗೆ, 5ಫೆಲೋಶಿಫ್, 2ಪಿ.ಜಿ.ಡಿಪ್ಲೋಮಾ ಪದವೀಧರರಿಗೆ ಪದವಿ ನೀಡಲಾಗುವುದು.
ದಿ. ಡಾ.ಮಧುಕರ ಶಾಂತರಾಮ ಕೆ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಪದವಿ ನೀಡಲಾಗುವುದು. ಕುಲಾಧಿಪತಿ ಎನ್ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದು, ಹೊಸದಿಲ್ಲಿ ಏಮ್ಸ್ ಆಸ್ಪತ್ರೆಯ ಹೃದ್ರೋಗ ವಿಭಾಗದ ಮಾಜಿ ಮುಖ್ಯಸ್ಥರಾಗಿದ್ದವರು ಘಟಿಕೋತ್ಸವದಲ್ಲಿ ಭಾಷಣ ಮಾಡಲಿದ್ದಾರೆ. ಘಟಿಕೋತ್ಸವದ ಎರಡನೇ ಕಾರ್ಯಕ್ರಮವು ನ.8ರಂದು ನಿಟ್ಟೆ ವಿ.ವಿ. ಆವರಣದಲ್ಲಿ ನಡೆಯಲಿದ್ದು, ಕೇರಳದ ಕೇಂದ್ರೀಯ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಸಿದ್ದು ಪಿ.ಅಲಗೂರು ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಡಾ.ಎಂ.ಎಸ್.ಮೂಡಿತ್ತಾಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ.ಹರ್ಷ ಹಾಲಹಳ್ಳಿ, ಪರೀಕ್ಷಾಂಗ ನಿಯಂತ್ರಕ ಪ್ರಸಾದ್ ಬಿ ಶೆಟ್ಟಿ ಹಾಗೂ ವಿನೋದ್ ಆರ್, ನೇಸರ ಕಾಡನಕುಪ್ಪೆ, ಹೇಮಂತ್ ಉಪಸ್ಥಿತರಿದ್ದರು.




