ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಪಡೀಲ್ ಶಾಖೆಯ ವತಿಯಿಂದ ಉಚಿತ ಆಯುರ್ವೇದ ಆರೋಗ್ಯ ತಪಾಸಣಾ, ನೇತ್ರ ತಪಾಸಣಾ, ದಂತ ಚಿಕಿತ್ಸಾ ಹಾಗೂ ರಕ್ತದಾನ ಶಿಬಿರವು ಹಿಂದೂ ಯುವ ಸೇನೆ ಸೂರ್ಯನಾರಾಯಣ ಶಾಖೆ, ಮರೋಳಿ , ಗ್ರಾಮ ಸಮಿತಿ ಮರೋಳಿ, ಶ್ರೀ ರಾಮ ಭಜನಾ ಮಂದಿರ, ಮರೋಳಿ ಹಾಗೂ ಲಯನ್ಸ್ ಕ್ಲಬ್ ಮಂಗಳೂರು ಆದಿತ್ಯ ಇವರುಗಳ ಜಂಟಿ ಸಹಯೋಗದೊಂದಿಗೆ ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಸೂರ್ಯರಶ್ಮಿ ಸಭಾಂಗಣದಲ್ಲಿ ಜರುಗಿತು.
ಈ ಕಾರ್ಯಕ್ರಮವನ್ನು ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಜೀರ್ಣೊದ್ದಾರ ಸಮಿತಿಯ ಗೌರವಾಧ್ಯಕ್ಷರಾದ ಕೆ. ಪಿ ಶೆಟ್ಟಿ ರವರು ಉದ್ಘಾಟಿಸಿ ಮಾತನಾಡಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ರವರ ಮುಂದಾಳತ್ವದಲ್ಲಿ ಹಾಗೂ ಆಡಳಿತ ಮಂಡಳಿಯ ಮಾರ್ಗದರ್ಶನದಲ್ಲಿ ತನ್ನ ಎಲ್ಲಾ ಶಾಖೆಗಳ ವಾರ್ಷಿಕೋತ್ಸವದ ಪ್ರಯುಕ್ತ ಆರೋಗ್ಯದ ಕಾಳಜಿಯಿಂದ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಿರುವುದು ಜನಸಾಮಾನ್ಯರಿಗೆ ತುಂಬಾ ಅನುಕೂಲವಾಗಿದೆ, ಸಂಘದ ಈ ಕಾರ್ಯವು ಶ್ಲಾಘನೀಯ. ಈ ಶಿಬಿರದಲ್ಲಿ ಅನೇಕ ವೈದ್ಯಕೀಯ ಸೇವೆಗಳು ಲಭ್ಯವಿದ್ದು, ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಬಡವರ ಆರೋಗ್ಯದ ದೃಷ್ಟಿಯಿಂದ ನಿರಂತರವಾಗಿ ಆರೋಗ್ಯ ಶಿಬಿರವನ್ನು ಏರ್ಪಡಿಸುತ್ತಾ ಬಂದಿದ್ದು, ಇದರಿಂದ ಸಾರ್ವಜನಿಕರು ಆರೋಗ್ಯದ ಬಗ್ಗೆ ಕಾಳಜಿ ವಹಿಸುವಲ್ಲಿ ನಮ್ಮ ಸಹಕಾರಿ ಸಂಘವು ಮುಖ್ಯ ಪಾತ್ರ ವಹಿಸಿದೆ. ಹಲವು ಜನರ ಶ್ರಮ ಹಾಗೂ ಸಹಕಾರದಿಂದ ಆರೋಗ್ಯ ಶಿಬಿರವನ್ನು ಆಯೋಜನೆ ಮಾಡುತ್ತಿದ್ದೇವೆ. ಭಾನುವಾರ ರಜಾ ದಿನದ ಸಂದರ್ಭದಲ್ಲೂ ಕೂಡ ಶಿಬಿರ ಏರ್ಪಡಿಸಲು ಸಹಕರಿಸುತ್ತಿರುವ ಯೆನಪೋಯ ಆಸ್ಪತ್ರೆ ಹಾಗೂ ಸಮುದಾಯ ದಂತ ಆರೋಗ್ಯ ವಿಭಾಗ, ಯೆನಪೋಯ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆಯ ಇದರ ಆಡಳಿತ ವರ್ಗ, ವೈದ್ಯರು ಹಾಗೂ ಸಿಬ್ಬಂದಿ ವರ್ಗದವರಿಗೂ, ಈ ಶಿಬಿರದಲ್ಲಿ ಉಚಿತ ಕನ್ನಡಕ ವಿತರಿಸುತ್ತಿರುವ ಲಯನ್ಸ್ ಕ್ಲಬ್ ಮಂಗಳೂರು ಆದಿತ್ಯ ಇದರ ಸರ್ವ ಪದಾಧಿಕಾರಿಗಳಿಗೂ, ರಕ್ತದಾನ ಶಿಬಿರ ಹಾಗೂ ಆರೋಗ್ಯ ಶಿಬಿರವನ್ನು ಆಯೋಜಿಸಲು ಸಂಪೂರ್ಣ ಸಹಕಾರ ನೀಡಿರುವ ಹಿಂದೂ ಯುವ ಸೇನೆ ಸೂರ್ಯನಾರಾಯಣ ಶಾಖೆ, ಮರೋಳಿ, ಗ್ರಾಮ ಸಮಿತಿ ಮರೋಳಿ, ಶ್ರೀ ರಾಮ ಭಜನಾ ಮಂದಿರ, ಮರೋಳಿ ಇದರ ಎಲ್ಲಾ ಪದಾಧಿಕಾರಿಗಳಿಗೂ ಕೃತಜ್ಞತೆಯನ್ನು ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್, ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಕೇಶವ ಮರೋಳಿ, ವಿಶ್ವಕರ್ಮ ಸಹಕಾರ ಬ್ಯಾಂಕ್ನ ಅಧ್ಯಕ್ಷರಾದ ಶ್ರೀ ಹರೀಶ್ ಆಚಾರ್ಯ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾದ ನೇಮಿರಾಜ್ ಪಿ, ನಿರ್ದೇಶಕರಾದ ಗೋಪಾಲ್ ಎಮ್, ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಶ್ರೀಮತಿ ಸೌಮ್ಯ ವಿಜಯ್, ಲಯನ್ಸ್ ಕ್ಲಬ್ ಆದಿತ್ಯ ಮಂಗಳೂರು, ಇದರ ಅಧ್ಯಕ್ಷರಾದ ಲಯನ್ ಶ್ರೀ ನರಸಿಂಹ ಪೈ, ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನ ಜೀರ್ಣೊದ್ದಾರ ಸಮಿತಿಯ ಮಾಜಿ ಅಧ್ಯಕ್ಷರಾದ ಬಾಲಕೃಷ್ಣ ಕೊಟ್ಟಾರಿ, ಹಿಂದೂ ಯುವಸೇನೆ ಕೇಂದ್ರಿಯ ಮಂಡಳಿಯ ಅಧ್ಯಕ್ಷರಾದ ಯಶೋಧರ ಚೌಟ, ಹಿಂದೂ ಯುವ ಸೇನೆ ಸೂರ್ಯನಾರಾಯಣ ಶಾಖೆ, ಮರೋಳಿಯ ಅಧ್ಯಕ್ಷರಾದ ಲಿಖಿನ್ ಶೆಟ್ಟಿ, ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷರಾದ ರುಕ್ಮಯ ದೇವಾಡಿಗ ಮರೋಳಿ, ಹಿಂದೂ ಯುವ ಸೇನೆಯ ಜಿಲ್ಲಾ ಕಾರ್ಯದರ್ಶಿಯಾದ ರವಿಚಂದ್ರ, ವಿಶ್ವ ಹಿಂದೂ ಪರಿಷತ್ನ ಪ್ರಖಂಡ ಕಾರ್ಯದರ್ಶಿಯಾದ ಶರತ್ ಕೆಂಬಾರ್, ಪ್ರಮೋದ್ ನರ್ಸರಿ ಮಾಲಕರಾದ ಪ್ರಮೋದ್ ಎಮ್, ಸಮುದಾಯ ದಂತ ಆರೋಗ್ಯ ವಿಭಾಗ, ಯೆನಪೋಯ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆಯ ದಂತ ವೈದ್ಯರಾದ ಡಾ| ಶೀತಲ್, ಹಾಗೂ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುಮಾರು 250ಕ್ಕೂ ಹೆಚ್ಚು ಶಿಬಿರಾರ್ಥಿಗಳಿಗೆ ಆರೋಗ್ಯ ತಪಾಸಣೆ, ಉಚಿತ ಕನ್ನಡಕ ವಿತರಣೆ, ದಂತ ತಪಾಸಣೆ, ರಕ್ತದಾನ ಶಿಬಿರ ಹಾಗೂ ನೇತ್ರ ತಪಾಸಣೆಯನ್ನು ನಡೆಸಲಾಯಿತು.
ಈ ಕಾರ್ಯಕ್ರಮವನ್ನು ವಾಸುದೇವ ಮರೋಳಿ ರವರು ಸ್ವಾಗತಿಸಿ, ಶ್ರೀಮತಿ ಮಾಲತಿ ಅರುಣ್ ಶೆಟ್ಟಿ ರವರು ಧನ್ಯವಾದವಿತ್ತರು. ಕಾರ್ಯಕ್ರಮವನ್ನು ಶ್ರೀ ಭಾಸ್ಕರ ಮರೋಳಿ ರವರು ನಿರೂಪಿಸಿದರು.

