ಉಳ್ಳಾಲ,ಅ,27: ಕೋಟೆಕಾರು ಪ.ಪಂ. ವ್ಯಾಪ್ತಿಯ ದೇರಳ ಕಟ್ಟೆ ಪನೀರ್ ನಿವಾಸಿ ಜೆ.ಎಮ್.ಇಸ್ಮಾಯಿಲ್ (68) ರವರು 15 ವರ್ಷ ಗಳ ಹಿಂದೆ ಮನೆ ಬಿಟ್ಟು ಹೋದವರು ವಾಪಸ್ ಮನೆಗೆ ಬಾರದೆ ನಾಪತ್ತೆ ಆಗಿದ್ದು, ಈ ಬಗ್ಗೆ ಅವರ ಪುತ್ರ ಶಫೀಕುದ್ದೀನ್ ನೀಡಿದ ದೂರಿನಂತೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಅವರು ಮನೆ ಬಿಟ್ಟು ಹೋದರೆ 6 ತಿಂಗಳಿಗೊಮ್ಮೆ ಅಥವಾ 1 ವರ್ಷಕ್ಕೊಮ್ಮೆ ಹಿಂದಿರುಗಿ ಮನೆಗೆ ಬರುತ್ತಿದ್ದರು .ಆದರೆ ಅವರು 2010 ಫೆಬ್ರುವರಿ 08 ರಂದು ಮನೆ ಬಿಟ್ಟು ಹೋದವರು ವಾಪಸ್ ಮನೆಗೆ ಬಾರದೆ ಕಳೆದ 15 ವರ್ಷದಿಂದ ನಾಪತ್ತೆ ಆಗಿದ್ದಾರೆ. ಅವರನ್ನು ನಾವು ಮತ್ತು ಸಂಬಂದಿಕರು ಸೇರಿಕೊಂಡು ಕೇರಳ, ತಮಿಳುನಾಡು, ಆಂಧ್ರ ಸಹಿತ ವಿವಿಧ ಕಡೆಗಳಲ್ಲಿ ಸಂಚರಿಸಿ ಪತ್ತೆಗೆ ಪ್ರಯತ್ನಿ ಸಿದರೂ ಅವರು ಪತ್ತೆಯಾಗಿರುವುದಿಲ್ಲ. ತನ್ನ ತಂದೆಯನ್ನು ಪತ್ತೆ ಮಾಡಿಕೊಡಬೇಕು ಎಂದು ಅವರ ಪುತ್ರ ಶಫೀಕುದ್ದೀನ್ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.



