ಉಳ್ಳಾಲ: ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಉಳ್ಳಾಲ ತಾಲೂಕಿನ ಅಂಬ್ಲಮೊಗರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರಾದ ಗಡಿನಾಡು ಕೂಳೂರು ಎಲಿಯಾಣದ ನಿವಾಸಿ ಜಗದೀಶ್ ಶೆಟ್ಟಿ ಎ. ಇವರು ಆಯ್ಕೆಯಾಗಿದ್ದಾರೆ.
1988ರ ನವೆಂಬರ್ 30ರಂದು ಶಿಕ್ಷಕ ವೃತ್ತಿಗೆ ಕಾಲಿಟ್ಟ ಜಗದೀಶ್ ಶೆಟ್ಟಿ, ಒಟ್ಟು 37 ವರ್ಷಗಳ ಸೇವಾ ಅವಧಿಯಲ್ಲಿ 13 ವರ್ಷಗಳ ಕಾಲ ಮುಖ್ಯಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದಾರೆ. ಬಂಟ್ವಾಳದ ಇರಾ ಬಾಳೆಪುಣಿ ಶಾಲೆಯಿಂದ ವೃತ್ತಿ ಆರಂಭಿಸಿದ ಅವರು, ಅಂಬ್ಲಮೊಗರು ಶಾಲೆಯಲ್ಲಿ ಪ್ರಗತಿಪರ ಶಿಕ್ಷಣ ವಾತಾವರಣ ನಿರ್ಮಿಸಲು ಶ್ರಮಿಸಿದ್ದಾರೆ. ಅವರ ನೇತೃತ್ವದಲ್ಲಿ ಶಾಲೆಯ ಅಭಿವೃದ್ಧಿ ಕಾರ್ಯಗಳು ವಿಶಿಷ್ಟ ರೂಪ ಪಡೆದಿವೆ. ಸ್ಥಳೀಯ ದಾನಿಗಳು ಹಾಗೂ ಸಾರ್ವಜನಿಕರ ಸಹಕಾರದಲ್ಲಿ ಪ್ರೌಢಶಾಲೆ ಸ್ಥಾಪನೆ ಮತ್ತು 1.28 ಕೋಟಿ ರೂ. ವೆಚ್ಚದ ಕಟ್ಟಡ ನಿರ್ಮಾಣ, ಶಾಲಾ ದಾಖಲಾತಿಯನ್ನು 106ರಿಂದ 217ಕ್ಕೆ ಏರಿಕೆ, ಉಚಿತ ಬಸ್ ವ್ಯವಸ್ಥೆ, ಎಲ್ಕೆಜಿ–ಯುಕೇಜಿ ತರಗತಿಗಳ ಸ್ಥಾಪನೆ, ದ್ವಿಭಾಷಾ (ಕನ್ನಡ–ಆಂಗ್ಲ) ಮಾಧ್ಯಮ ತರಗತಿಗಳು, ಸ್ಮಾರ್ಟ್ ಟಿವಿ ಹಾಗೂ ಕಂಪ್ಯೂಟರ್ ಮೂಲಕ ಬೋಧನೆ, ನಾವೀನ್ಯಪೂರ್ಣ ಪೀಠೋಪಕರಣಗಳ ಪೂರೈಕೆ, ಶಾಶ್ವತ ದತ್ತಿನಿಧಿ ಸ್ಥಾಪಿಸಿ ಪ್ರತಿಭಾ ಪುರಸ್ಕಾರ, ಕಂಪ್ಯೂಟರ್ ಕೊಠಡಿ ನಿರ್ಮಾಣ, ಶೌಚಾಲಯಗಳ ನವೀಕರಣ ಮುಂತಾದ ಯೋಜನೆಗಳನ್ನು ಅವರು ಸರಕಾರಿ ಶಾಲೆಯಲ್ಲಿ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಶಾಲಾ ಶತಮಾನೋತ್ಸವದ ಅಂಗವಾಗಿ ಒಂದು ಕೋಟಿ ರೂ. ವೆಚ್ಚದ ಸ್ಮಾರಕ ಭವನ ಹಾಗೂ ಬಯಲು ರಂಗಮಂದಿರ ನಿರ್ಮಾಣ ಹಂತದಲ್ಲಿದ್ದು, ಶಾಲೆಯ ಅಭಿವೃದ್ಧಿ ಕಾರ್ಯಗಳ ಭಾಗವಾಗಿ ದಾನಿಗಳ ನೆರವಿನಿಂದ ಕ್ಷೇತ್ರಶಿಕ್ಷಣಾಧಿಕಾರಿಗಳ ಇಲಾಖೆಗೆ ಬೊಲೆರೋ ಕಾರನ್ನು ಕೊಡುಗೆಯಾಗಿ ನೀಡುವಲ್ಲಿ ಜಗದೀಶ್ ಮಾಸ್ಟರ್ ಪ್ರಯತ್ನ ಮುಂಚೂಣಿಯಲ್ಲಿತ್ತು.



35 ವರ್ಷಗಳಿಂದ ಸ್ಕೌಟ್ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರು, ಅಸಿಸ್ಟೆಂಟ್ ಲೀಡರ್ ಟ್ರೈನರ್ ಹುದ್ದೆಯಲ್ಲಿ ರಾಜ್ಯದ ಅನೇಕ ಶಿಕ್ಷಕರಿಗೆ ತರಬೇತಿ ನೀಡಿದ್ದಾರೆ. ದೆಹಲಿ, ಒರಿಸ್ಸಾ, ಕೇರಳ, ಮಧ್ಯಪ್ರದೇಶ, ನೇಪಾಳ, ವಾರಾಣಾಸಿ, ಅಂಡಮಾನ್ ಮುಂತಾದ ರಾಜ್ಯ ಹಾಗೂ ರಾಷ್ಟ್ರಮಟ್ಟದ ಶಿಬಿರಗಳಲ್ಲಿ ಭಾಗವಹಿಸಿ ಅಪಾರ ಅನುಭವ ಗಳಿಸಿದ್ದಾರೆ. ರಾಜ್ಯಮಟ್ಟದ ಸಮುದಾಯ ಅಭಿವೃದ್ಧಿ ಶಿಬಿರ, ಕಬ್ ಬುಲ್ ಬುಲ್ ಉತ್ಸವ, ಜಿಲ್ಲಾ–ತಾಲೂಕು ಮಟ್ಟದ ಸ್ಕೌಟ್ ಗೈಡ್ ಮೇಳಗಳನ್ನು ಯಶಸ್ವಿಯಾಗಿ ಆಯೋಜಿಸುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದಾರೆ.
ಅವರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ವಿಭಾಗೀಯ ಸಂಘಟನಾ ಕಾರ್ಯದರ್ಶಿ, ಜಿಲ್ಲಾ ಉಪಾಧ್ಯಕ್ಷ ಹಾಗೂ ತಾಲೂಕು ಅಧ್ಯಕ್ಷರಾಗಿ ಕಳೆದ 14 ವರ್ಷಗಳಿಂದ ಶಿಕ್ಷಕರ ಹಿತಾಸಕ್ತಿಗೆ ಕೆಲಸ ಮಾಡಿದ್ದಾರೆ. ಜಿಲ್ಲಾ ರೆಡ್ ಕ್ರಾಸ್ ಸೊಸೈಟಿ ಸದಸ್ಯ, ಸಾಕ್ಷರತಾ ಮುಂದುವರಿಕೆ ಕಲಿಕಾ ಕೇಂದ್ರ ಕಾರ್ಯದರ್ಶಿ, ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ಕೋಶಾಧಿಕಾರಿ, ಮೀಂಜ ಬಂಟರ ಸಂಘದ ಅಧ್ಯಕ್ಷ ಹುದ್ದೆಗಳಲ್ಲಿ ಸಮಾಜಸೇವೆ ಮಾಡಿದ್ದಾರೆ. ತಮ್ಮ ಅವಧಿಯಲ್ಲಿ ಮಿನಿ ಸಭಾಭವನ ಹಾಗೂ ವಾಣಿಜ್ಯ ಕಟ್ಟಡ ನಿರ್ಮಿಸಿ, ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಅವರಿಂದ ಒಂದು ಎಕರೆ ಜಾಗ ದಾನ ಪಡೆಯುವ ಮೂಲಕ ಸಮುದಾಯದ ಅಭಿವೃದ್ಧಿಗೂ ಶ್ರಮಿಸಿದ್ದಾರೆ.
ಅವರು ಭತ್ತ, ಅಡಿಕೆ, ತೆಂಗು, ಬಾಳೆ, ರಬ್ಬರ್ ಬೆಳೆಗಳ ಜೊತೆಗೆ ರಂಬುಟನ್, ಬಟರ್ ಫ್ರೂಟ್, ಮ್ಯಾಂಗಸ್ಟಿನ್ ಮುಂತಾದ ಹಣ್ಣುಗಳ ಕೃಷಿ ಮಾಡುವ ಪ್ರಗತಿಪರ ಕೃಷಿಕರಾಗಿದ್ದಾರೆ. ಮಂಜೇಶ್ವರ ಕುಳೂರು ಎಲಿಯಾಣದ ಕೃಷಿಕ ಕುಟುಂಬದಲ್ಲಿ ಜನಿಸಿದ ಅವರು, ಪತ್ನಿ ತಲಪಾಡಿ ಸರ್ಕಾರಿ ಶಾಲಾ ಶಿಕ್ಷಕಿ. ಇಬ್ಬರು ಮಕ್ಕಳು ಸಿವಿಲ್ ಇಂಜಿನಿಯರ್ ಆಗಿ ಸ್ವಂತ ಉದ್ಯೋಗದಲ್ಲಿದ್ದಾರೆ. ಮಗಳ ವಿವಾಹವೂ ಪ್ರತಿಷ್ಠಿತ ಬಂಟ ಮನೆತನಕ್ಕೆ ಆಗಿದೆ.
ಜಗದೀಶ್ ಶೆಟ್ಟಿ ತಮ್ಮ ಸೇವಾ ಅವಧಿಯಲ್ಲಿ ಉತ್ತಮ ಶಿಸ್ತು ಶಾಲಾ ಪ್ರಶಸ್ತಿ, ಉತ್ತಮ ನೈರ್ಮಲ್ಯ ಶಾಲಾ ಪ್ರಶಸ್ತಿ, ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಕೇರಳ ರಾಜ್ಯ ತುಳು ಅಕಾಡೆಮಿ ಪ್ರಶಸ್ತಿ, ಸ್ಕೌಟಿಂಗ್ ದೀರ್ಘಸೇವಾ ಪ್ರಶಸ್ತಿ, ಉತ್ತಮ ಜೇಸಿ ಶಿಕ್ಷಕ ಪ್ರಶಸ್ತಿ, ರೋಟರಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಕರಾವಳಿ ಸಾಂಸ್ಕೃತಿಕ ಪರಿಷತ್ ಪ್ರಶಸ್ತಿ ಹಾಗೂ ಶಾಲಾ ಶತಮಾನೋತ್ಸವ ಗೌರವ ಸನ್ಮಾನಗಳನ್ನು ಪಡೆದಿದ್ದಾರೆ.
ಶಿಕ್ಷಕ ವೃತ್ತಿ, ವಿದ್ಯಾರ್ಥಿ ಸೇವೆ, ಸಮಾಜಮುಖಿ ಚಟುವಟಿಕೆ ಹಾಗೂ ಸಂಘಟನಾ ಸಾಮರ್ಥ್ಯದಿಂದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿರುವುದು ಅಂಬ್ಲಮೊಗರು ಶಾಲೆ ಹಾಗೂ ಉಳ್ಳಾಲ ತಾಲೂಕಿನ ಹೆಮ್ಮೆ ಹೆಚ್ಚಿಸಿದೆ.




