ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕುತ್ತಾರು: ಪೇಪರ್ ಏಜೆಂಟ್ ಮತ್ತು ಹಾಲಿನ ವ್ಯಾಪಾರಿಯೋರ್ವರ ಕುತ್ತಿಗೆಯಿಂದ ಮೂರೂವರೆ ಪವನಿನ ಚಿನ್ನದ ಸರವನ್ನು ನಸುಕಿನ ಜಾವ ಎರಡು ಬೈಕುಗಳಲ್ಲಿ ಬಂದ ನಾಲ್ವರ ತಂಡ ಕಳವುಗೈದು ಪರಾರಿಯಾಗಿರುವ ಘಟನೆ ಶುಕ್ರವಾರ ಕುತ್ತಾರು ಜಂಕ್ಷನ್ನಿನಲ್ಲಿ ನಡೆದಿದೆ.
ಪಂಡಿತ್ ಹೌಸ್ ಬಳಿಯ ನಿವಾಸಿ ಪವಿತ್ರ ಕುಮಾರ್ ಗಟ್ಟಿ ಅವರ ಕುತ್ತಾರು ಜಂಕ್ಷನ್ನಿನಲ್ಲಿರುವ ಗಟ್ಟೀಸ್ ನಂದಿನಿ ಮಿಲ್ಕ್ ಪಾರ್ಲರ್ ಅಂಗಡಿಯಲ್ಲಿ ಇರುವ ಸಂದರ್ಭ ಕೃತ್ಯ ನಡೆದಿದೆ. ಎಂದಿನಂತೆ ನಸುಕಿನ ಜಾವ ಪವಿತ್ರ ಗಟ್ಟಿ ಅವರು ಹಾಲನ್ನು ಒಳಗಿಡುತ್ತಿದ್ದ ಸಂದರ್ಭ ಗ್ರಾಹಕರ ಸೋಗಿನಲ್ಲಿ ಬಂದ ಅಪರಿಚಿತನೋರ್ವ ಪೇಪರ್ ನೀಡುವಂತೆ ಕೇಳಿದ್ದಾನೆ. ಈ ವೇಳೆ ದೂರದಲ್ಲಿ ಇಬ್ಬರು ಬೈಕಿನಲ್ಲಿ ಕಾಯುತ್ತಾ ನಿಂತರೆ , ಇನ್ನೋರ್ವ ಅಂಗಡಿ ಬದಿಯಲ್ಲಿ ನಿಂತಿದ್ದನು. ಪೇಪರಿನ ಹಣ ಪಡೆದು ಚಿಲ್ಲರೆ ನೀಡುವ ಸಂದರ್ಭ ಇನ್ನೊಂದು ಬದಿಯಲ್ಲಿದ್ದ ವ್ಯಕ್ತಿ ಪವಿತ್ರ ಅವರ ಕುತ್ತಿಗೆಗೆ ಕೈ ಹಾಕಿ ಸರವನ್ನು ಎಳೆದು ಬಳಿಕ ಮಂಗಳೂರು ವಿಶ್ವವಿದ್ಯಾನಿಲಯ ರಸ್ತೆಯಲ್ಲಿ ಪರಾರಿಯಾಗಿದ್ದಾರೆ ಎಂದು ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿದೆ. ಕಳವಾಗಿರುವ ಚಿನ್ನದ ಸರದ ಮೌಲ್ಯ ರೂ.50,000 ಎಂದು ಅಂದಾಜಿಸಲಾಗಿದೆ.


