
ಉಳ್ಳಾಲ: ಅಲ್ಯಾರದ ಮನೆ (ಈಗಿನ ಅಳೇಕಲ) ಶ್ರೀ ಮಲರಾಯ ದೈವವನ್ನು ಉಯ್ಯಾಲೆಯಲ್ಲಿ ಆರಾಧಿಸುತ್ತಿದ್ದ ಸಂದರ್ಭ ಸುಮಾರು 800 ವರ್ಷಗಳ ಹಿಂದೆ ಉಳ್ಳಾಲದಲ್ಲಿ ಜೈನ ಮನೆತನದ ಚೌಟೆದಿ ರಾಣಿ ಅಬ್ಬಕ್ಕ ಅರಸುತನ ನಡೆಸುವಾಗ ತನ್ನ ಮುತ್ತೈದೆತನದ ದ್ಯೋತಕವಾದ ವಜ್ರದ ಮೂಗುತ್ತಿ ಕಳೆದುಹೋಗಿ ದು:ಖಿತಳಾಗಿದ್ದರು. ಹಿರಿಯರ ಮಾರ್ಗದರ್ಶನದಂತೆ ಮಲರಾಯ ದೈವಕ್ಕೆ ಹರಕೆ ಹೇಳಿದಾಗ ಕಳೆದುಹೋದ ಮೂಗುತ್ತಿಯು ಮರುಕಾಣಿಸಿಕೊಂಡಿತ್ತು. ಇದರಿಂದ ಹರ್ಷಚಿತ್ತಳಾದ ಚೌಟೆದಿ ರಾಣಿ ಅಬ್ಬಕ್ಕ ಶ್ರೀ ಮಲರಾಯ ದೈವಕ್ಕೆ ಕೊಟ್ಟಾರದಲ್ಲಿ ದೈವಸ್ಥಾನ ಕಟ್ಟಿರುವ ಇತಿಹಾಸವಿದೆ. ಇದೀಗ ದೈವಸ್ಥಾನಕ್ಕೆ ಭಂಡಾರಮನೆಯ ನಿರ್ಮಾಣಕ್ಕೆ ಗ್ರಾಮಸ್ಥರು ಸಿದ್ಧತೆ ನಡೆಸಿದ್ದು, ಅದರ ಪ್ರಚಾರವಾಗಿ ಇಂದು ಬಂಡಿಕೊಟ್ಯದ ಶ್ರೀ ಕ್ಷೇತ್ರ ಕೊಟ್ಟಾರ ಸ್ಥಾನ, ಶ್ರೀ ಮಲರಾಯ ದೈವಸ್ಥಾನ ನಿವೇದನಾ ಪತ್ರಿಕೆಯ ಬಿಡುಗಡೆಯನ್ನು ನಡೆಸಲಾಯಿತು.
ಭಂಡಾರ ಮನೆ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಉಳ್ಳಾಲ್ ಸುಂದರ್ ನಿವೇದನಾ ಪತ್ರಿಕೆ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿ ದೈವಸ್ಥಾನಕ್ಕೆ ಸಂಬಂಧಪಟ್ಟ ಭಂಡಾರ ಗ್ರಹವು ದೈವಸ್ಥಾನದ ಅಂಗಣದ ಒಳಗಡೆಯಿದೆ. ನಿರ್ಮಾಣ ಮಾಡುವ ಸಂದರ್ಭ ಸೂಕ್ತ ಸ್ಥಳವಿಲ್ಲದ ಕಾರಣ ದೈವಸ್ಥಾನದ ಪಕ್ಕದಲ್ಲಿಯೇ ನಿರ್ಮಿಸಲಾಗಿತ್ತು. 2024ರ ಬಂಡಿ ಉತ್ಸವದಂದು ದೈವ ತನ್ನ ಭಂಡಾರಮನೆಯನ್ನು ಸೂಕ್ತವಾದ ಸ್ಥಳದಲ್ಲಿ ಅಂಗಣದ ಹೊರಗಡೆ ನಿರ್ಮಾಣ ಮಾಡಬೇಕೆಂದು ದಐವದ ಅಪ್ಪಣೆಯಾಗಿದೆ. ಅದರಂತರ ನೂತನ ಭಂಡಾರ ಮನೆ ಮತ್ತು ಗೋಪುರ ನಿರ್ಮಾಣ ಮಾಡಲು ಕ್ಷೇತ್ರದ ತಂತ್ರಿ ನಿಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಮತ್ತು ಆಗಮಶಾಸ್ತ್ರ ವಾಸ್ತುಶಿಲ್ಪಿ ಕೃಷ್ಣರಾಜ ತಂತ್ರಿಗಳ ಮಾರ್ಗದರ್ಶನದಂತೆ ತಾಂತ್ರಿಕ ಇಂಜಿನಿಯರಿಂಗ್ ಸಂಸ್ಥೆ ನಿತಿನ್ ರಾಜ್ ಅಸೋಸಿಯೇಟ್ಸ್ ಉಳ್ಳಾಲ ಇವರು ರೂ.1.25 ಕೋಟಿ ಅಂದಾಜು ಪಟ್ಟಿ ಮತ್ತು ನೀಲನಕ್ಷೆಯನ್ನು ತಯಾರಿಸಿದ್ದಾರೆ. ದೈವದ ಅಪ್ಪಣೆಯಂತೆ 2025ರ ಬಂಡಿ ಉತ್ಸವದ ಮೊದಲು ಭಂಡಾರಮನೆಯ ನಿರ್ಮಾಣವಾಗಬೇಕಿದೆ. ಗ್ರಾಮಸ್ಥರು, ಊರಪರವೂರ ಭಕ್ತರು ದೇಣಿಗೆ ನೀಡಿ ಭಂಡಾರಮನೆಯ ನಿರ್ಮಾಣ ಕಾರ್ಯದಲ್ಲಿ ಸಹಕರಿಸಬೇಕಿದೆ ಎಂದರು.
ಇತಿಹಾಸ : ನೇತ್ರಾವತಿ ನದಿಯ ಸಮುದ್ರ ಸಂಗಮದ ಕವಲಿನ ನಡುವೆ ಹಬ್ಬಿರುವ ಉಳ್ಳಾಲ ಗ್ರಾಮದ ಬಯಲು ಪ್ರದೇಶವೇ ಕೊಟ್ಟಾರ. ಪ್ರಕೃತಿಯ ಮಡಿಲಲ್ಲಿ ಮಲರಾಯನಿಗೆ ಶ್ರೀ ಕೊಟ್ಟಾರ ದೈವಸ್ಥಾನ ನೆಲೆಯೂರಿದೆ. ರಾಣಿ ಅಬ್ಬಕ್ಕಳ ಕಳೆದುಹೋದ ಮೂಗುತ್ತಿ ದೊರೆತ ಹಿಂದೆಯೂ ಸಿಡುಬು ರೋಗ ಕಾಣಿಸಿಕೊಂಡಾಗ ಮಲರಾಯ ದೈವಸ್ಥಾನದ ಅಂಗಣದ ಮಣ್ಣು ಔಷಧಿಯಾಗಿತ್ತು ಅನ್ನುವ ನಂಬಿಕೆ ಜನರಲ್ಲಿ ಮನೆಮಾತಾಗಿತ್ತು. ದೈವಸ್ಥಾನದ ನೈಋತ್ಯ ಭಾಗದಲ್ಲಿ ಬಂಡಿಯನ್ನು ಇರಿಸಲಾಗಿದ್ದು, ಬಂಡಿಯನ್ನು ಪ್ರತಿವರ್ಷ ನಡೆಯುವ ಬಂಡಿ ಉತ್ಸವದ ಸಂದರ್ಭ ಎಲ್ಲರೂ ಸೇರಿಕೊಂಡು ಗದ್ದೆಯಲ್ಲಿ ಎಳೆಯುತ್ತಾರೆ. ದೈವಸ್ಥಾನದಲ್ಲಿ ಬಿಸುಗೆ ಕುಂಟ ಹಾಕುವುದು ನಂತರ 10 ನೇ ದಿನಕ್ಕೆ ಧ್ವಜಾರೋಹಣ ನಡೆಸಿ ಒಂದು ದಿನದ ಕೊಟ್ಯದಾಯನ ಉತ್ಸವ ಮತ್ತು ಎರಡು ದಿನಗಳ ಬಂಡಿ ಉತ್ಸವ ನಡೆಯುವುದು ಮತ್ತು ದೈವಸ್ಥಾನದಿಂದ ಉಳ್ಳಾಲ ಗುತ್ತುವಿಗೆ ಭಂಡಾರ ಹೋಗಿ ಒಂದು ದಿನ ಪ್ರಥಮ ಹೊಸ ಮೆಚ್ಚಿ ನೇಮೋತ್ಸವ ನಡೆಯುತ್ತದೆ. ಎರಡನೆಯದಾಗಿ ಸೇನೆರೆಬೈಲಿಗೆ ಭಂಡಾರ ಹೋಗಿ ಉಳ್ಳಾಲ ದೊಡ್ಡಮನೆ ಸೇನೆರೆ ಮನೆತನ ಹಾಗೂ ಸ್ಥಳೀಯರು ಒಟ್ಟು ಸೇರಿ ಹೊಸ ಮೆಚ್ಚಿ ನೇಮೋತ್ಸವ ನಡೆಯುತ್ತದೆ. ಅಲ್ಲದೆ ದೈವಸ್ಥಾನದಲ್ಲಿ ಚೌತಿ, ನವರಾತ್ರಿ, ಬಲಿಪಾಢ್ಯ, ನಾಗರಪಂಚಮಿ, ಪತ್ತನಾಜೆ ಆಚರಣೆಗಳು ನಡೆಯುತ್ತಿರುತ್ತದೆ. ಪ್ರತಿ ಭಾನುವಾರ ಮತ್ತು ಮಂಗಳವಾರ ಪೂಜೆಯು ನಡೆಯುತ್ತದೆ.
ಈ ಸಂದರ್ಭ ಕ್ಷೇತ್ರದ ಅರ್ಚಕ ಲತೀಶ ಯಾನೆ ಮುಂಡ ಪುಜಾರಿ, ಗೌರವ ಅಧ್ಯಕ್ಷರುಗಳಾದ ಬಾಲಕೃಷ್ಣ ಶೆಟ್ಟಿ ಉಳ್ಳಾಲಗುತ್ತು, ದೇವಕಿ ಆರ್. ಉಳ್ಳಾಲ್, ಪ್ರಧಾನ ಸಂಚಾಲಕ ಶ್ರೀನಿವಾಸ ಕೊರಸಾನ, ಯು.ಕೆ.ಗೋಪಾಲ ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷ ನಿತಿನ್ ರಾಜ್ ಉಳ್ಳಾಲ್, ಮಧ್ವರಾಜ್ ತೊಕ್ಕೊಟ್ಟು ಉಪಸ್ಥಿತರಿದ್ದರು.
ಹರ್ಷವರ್ಧನ್ ಕುತ್ತಾರ್ ಸ್ವಾಗತಿಸಿದರು. ಜಗದೀಶ್ ಗೋಳಿಯಡಿ ನಿರೂಪಿಸಿದರು.

