ಉಳ್ಳಾಲ: ಶೌಚಾಲಯ ಸಮಸ್ಯೆಯ ವಿಚಾರದಲ್ಲಿ ಪಾವೂರು ಗ್ರಾಮದ ಹೆಣ್ಮಕ್ಕಳ ಸಮಸ್ಯೆಗೆ ಸ್ಪಂದಿಸಿ ‘ಉಳ್ಳಾಲವಾಣಿ’ ಪ್ರಕಟಿಸಿದ್ದ ವರದಿಗೆ ಕೊನೆಗೂ ಆಡಳಿತ ವರ್ಗ ಸ್ಪಂದಿಸಿದ್ದು, ಶೌಚಾಲಯ ರಹಿತ ಮನೆಗಳ ಸರ್ವೇ ನಡೆಸಿ ವರದಿ ನೀಡುವಂತೆ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆದೇಶಿಸಿದ್ದಾರೆ.
‘ಉಳ್ಳಾಲವಾಣಿ’ ಪ್ರಕಟಿಸಿದ್ದ ವರದಿಯನ್ನು ಉಲ್ಲೇಖಿಸಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆದೇಶ ಮಾಡಿದ್ದು, ಸಮಗ್ರ ಸರ್ವೇ ನಡೆಸಲು ಆದೇಶ ಪತ್ರದಲ್ಲಿ ಸೂಚಿಸಲಾಗಿದೆ. ಶೌಚಾಲಯವೇ ಇಲ್ಲದೇ ಬಯಲು ಬಹಿರ್ದೆಸೆಗೆ ಹೋಗುತ್ತಿದ್ದ ಮಹಿಳೆಯರು, ಮಕ್ಕಳಿಗೆ ಪ್ರತಿಯೊಂದು ಮನೆಗಳಲ್ಲಿ ಶೀಘ್ರದಲ್ಲೇ ಶೌಚಾಲಯ ನಿರ್ಮಿಸಿ ವರದಿ ನೀಡುವಂತೆ ಆದೇಶ ಹೊರಡಿಸಿದ್ದಾರೆ. ಗೃಹ ಶೌಚಾಲಯದ ಪ್ರಗತಿಯನ್ನು ತ್ವರಿತವಾಗಿ ಸಾಧಿಸಲು ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಸೂಚನೆ ಮತ್ತು ಕಾರ್ಯಾದೇಶ ವಿತರಣೆ ಪೂರ್ಣಗೊಂಡ ನಂತರ ವಾರಕ್ಕೊಮ್ಮೆ ಪ್ರತಿನಿತ್ಯ ಕಡ್ಡಾಯವಾಗಿ ಶೌಚಾಲಯ ನಿರ್ಮಾಣದ ಕುರಿತು ತಾಲೂಕು ಹಂತದಲ್ಲಿ ಮೇಲ್ವಿಚಾರಣೆ ನಡೆಸುವುದು ಹಾಗೂ ಆ.27 ರಿಂದ ಸೆ.3 ರ ಒಳಗೆ ಗ್ರಾ.ಪಂ ವ್ಯಾಪ್ತಿಯಲ್ಲಿ ಬಿಟ್ಟು ಹೋಗಿರುವ ಶೌಚಾಲಯ ರಹಿತ ಮನೆಗಳನ್ನು ಗುರುತಿಸಲು ಹಾಗೂ ಶೌಚಾಲಯ ನಿರ್ಮಿಸಲು ಸ್ಥಳದ ಲಭ್ಯತೆಯಿಲ್ಲದಿರುವ ಕುಟುಂಬಗಳನ್ನು ಗುರುತಿಸಲು ಮನೆ ಮನೆ ಸಮೀಕ್ಷೆ ನಡೆಸುವಂತೆ ಸೂಚಿಸಲಾಗಿದೆ.



ಇದು ‘ಉಳ್ಳಾಲವಾಣಿ’ ವರದಿ ಬಿಗ್ ಇಂಪ್ಯಾಕ್ಟ್!
ದೇಶ ಬಯಲುಶೌಚ ಮುಕ್ತ ಎಂದು ಪ್ರಧಾನಿಯವರು ಹೇಳಿಕೆ ನೀಡಿ ಐದು ವರ್ಷಗಳು ಕಳೆದಿದ್ದರೂ, ಉಳ್ಳಾಲ ತಾಲೂಕು ವ್ಯಾಪ್ತಿಗೆ ಬರುವ ಪಾವೂರು ಗ್ರಾಮದ ಮಂಚವುದಡಿ, ಬಾವಲಿಗುರಿ, ಉಗ್ಗನಬೈಲು, ಇನೋಳಿ ಬಿ ಸೈಟ್ ನ ಏಳು ಮನೆಗಳ ನಿವಾಸಿಗಳು ಈಗಲೂ ಬಹಿರ್ದೆಸೆಗೆ ಹೋಗಬೇಕಾಗಿದೆ. ಆರ್ಥಿಕವಾಗಿ ಹಿಂದುಳಿದ, ಹಿಂದುಳಿದ ವರ್ಗದವರೇ ಇರುವ ಏಳು ಮನೆಗಳಲ್ಲಿ ಈಗಲೂ ಶೌಚಾಲಯಗಳೇ ಇಲ್ಲ. ಏಳು ಮನೆಗಳ ಪೈಕಿ ಒಂದು ಮನೆಯಲ್ಲಿ ಒಂಟಿ ಮಹಿಳೆಯಿದ್ದು, ಉಳಿದ ಎಲ್ಲಾ ಮನೆಗಳಲ್ಲಿ ಹೆಣ್ಮಕ್ಕಳು ಸೇರಿದಂತೆ ಮಹಿಳೆಯರೇ ಜಾಸ್ತಿಯಿದ್ದಾರೆ. ಅವರೆಲ್ಲರೂ ಈಗಲೂ ಶೌಚಾಲಯ ನಿರ್ಮಿಸಲು ಆರ್ಥಿಕ ಅಡಚಣೆಯಿರುವುದರಿಂದ ಬಯಲು ಬಹಿರ್ದೆಸೆಗೆ ಹೋಗಬೇಕಾಗಿದೆ. ಇತ್ತೀಚೆಗೆ ವಿಧಾನಸಭಾ ಚುನಾವಣೆಗೆ ಮತಬೇಟೆಗೆಂದು ತೆರಳಿದ್ದ ಪಕ್ಷದ ಕಾರ್ಯಕರ್ತರನ್ನು ಅಷ್ಟೂ ಮನೆಮಂದಿ ಝಾಡಿಸಿದ್ದಾರೆ. ಆದರೆ ಈ ಪೈಕಿ ನೋವುಂಡ ಕಾರ್ಯಕರ್ತರೊಬ್ಬರು ಗ್ರಾಮ ಪಂಚಾಯಿತಿನ ಕದ ತಟ್ಟಿದ್ದಾರೆ. ಆದರೂ ಅಧಿಕಾರಿಯಿಂದ ಸ್ಪಂಧನೆ ಸಿಗದೇ ಇದ್ದಾಗ ಮೇಲಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಈ ನಡುವೆ ಸಂವಿಧಾನಾತ್ಮಕವಾಗಿ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಕಲ್ಪಿಸುವ ಒತ್ತಾಯವನ್ನು ಮೇಲಿನ ಅಧಿಕಾರಿಗಳಿಗೆ ಮಾಡಿದಾಗ ಸರಕಾರದಿಂದ ಸಾಮಾನ್ಯ ವರ್ಗದವರಿಗೆ 12,000 ಮತ್ತು ಪರಿಶಿಷ್ಟ ಜಾತಿ/ಪಂಗಡದವರಿಗೆ ರೂ. 20,000 ಅನುದಾನ ಸಿಗುವ ಭರವಸೆ ಸಿಕ್ಕಿದೆ. ಆದರೆ ಸದ್ಯ ಕಟ್ಟಡ ಕಾಮಗಾರಿಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಅಂದಾಜು ರೂ.35,000 ರಷ್ಟು ವೆಚ್ಚ ತಗಲುವ ಲೆಕ್ಕಾಚಾರ ಮಾಡಿದ್ದಾರೆ. ಆದರೆ ಕಾಮಗಾರಿ ನಡೆದ ನಂತರ ಹಂತ ಹಂತವಾಗಿ ಅನುದಾನ ಬಿಡುಗಡೆಯಾಗುವ ಕಾನೂನು ಸ್ಥಳೀಯ ಅಧಿಕಾರಿಗಳು ನೀಡಿದ್ದಾರೆ. ಇದರಿಂದ ರೋಸಿಹೋದ ಕೂಲಿಕೆಲಸ ಮಾಡಿಕೊಂಡು ಜೀವನ ಸಾಗಿಸುವ ಮನೆಮಂದಿ ಶೌಚಾಲಯದ ಉಸಾಬಾರಿಯೇ ಬೇಡ ಎಂದು ಬಹಿರ್ದೆಸೆಯನ್ನು ಮುಂದುವರಿಸಿದ್ದಾರೆ. ಸ್ಥಳೀಯರೊಬ್ಬರ ಪ್ರಕಾರ ಇಡೀ ಪ್ರದೇಶ ವಸತಿಗಳಿಂದ ತುಂಬಿದ್ದು, ಇಲ್ಲಿ ಅಷ್ಟೂ ಮನೆಮಂದಿ ಅದೂ ಎಳೆಯ ಹರೆಯದ ಹೆಣ್ಮಕ್ಕಳು ಬಹಿರ್ದೆಸೆಗೆ ಹೋಗುವ ರೀತಿಯನ್ನು ಕಾಣುವಾಗ ಬಹಳಷ್ಟು ಬೇಸರವಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದರು. ಈ ಬಗ್ಗೆ ಉಳ್ಳಾಲವಾಣಿ ಸಮಗ್ರ ವರದಿ ಪ್ರಕಟಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿತ್ತು. ಇದೀಗ ವರದಿ ಬೆನ್ನಲ್ಲೇ ಮಹತ್ವದ ಆದೇಶ ಹೊರ ಬಿದ್ದಿದೆ.

ಮಹಿಳೆಯರ ಪರ ಉಳ್ಳಾಲವಾಣಿ: ವರದಿ ಉಲ್ಲೇಖಿಸಿ ಜಿ.ಪಂ ಸಿಇಒ ಮಾಡಿದ ಆದೇಶವೇನು?
ಉಳ್ಳಾಲ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗೆ ಆದೇಶಿಸಿ ಮಾಡಿರುವ ಪತ್ರದಲ್ಲಿ ‘ಉಳ್ಳಾಲ ವಾಣಿ’ ವರದಿ ಉಲ್ಲೇಖಿಸಲಾಗಿದೆ. ಉಳ್ಳಾಲ ತಾಲೂಕಿನ ಪಾವೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶೌಚಾಲಯ ರಹಿತ ಮನೆಗಳಿರುವ ಬಗ್ಗೆ, ಪತ್ರಿಕೆಯಲ್ಲಿ ವರದಿ ಪ್ರಕಟವಾಗಿರುವ ಕುರಿತು ಎಂದು ಉಲ್ಲೇಖಿಸಿ ಉಳ್ಳಾಲವಾಣಿ ವಾರಪತ್ರಿಕೆಯಲ್ಲಿ ಪ್ರಕಟವಾದ ವರದಿ ಬಗ್ಗೆ ಬೆಳಕು ಚೆಲ್ಲಲಾಗಿದೆ. ಪಾವೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಣೆಗೊಂಡ ನಂತರ ಸುಸ್ಥಿರತೆಯನ್ನು ಕಾಯ್ದುಕೊಳ್ಳುವ ಸಲುವಾಗಿ, ಎಲ್ಲಾ ಮನೆಗಳಿಗೂ ಕ್ರಿಯಾತ್ಮಕ ವೈಯಕ್ತಿಕ ಶೌಚಾಲಯ ಬಳಕೆಯ ಬಗ್ಗೆ, ಕಾಲಕಾಲಕ್ಕೆ, ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಯು ಪರಿಶೋಧನೆಯನ್ನು ನಡೆಸಿ ಶೌಚಾಲಯ ಬಳಕೆಯ ಬಗ್ಗೆ ಸಮುದಾಯಕ್ಕೆ ಪ್ರೇರಣೆಯನ್ನು ನೀಡಬೇಕಾಗುತ್ತದೆ. ಹಾಗೂ ಶೌಚಾಲಯ ರಹಿತರಲ್ಲಿ ಅರ್ಹ ಫಲಾನುಭವಿಗಳಿಗೆ ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆಯಲ್ಲಿ ಮತ್ತು ಇತರ ಯೋಜನೆಯಡಿ, ಅಥವಾ ಸಂಬಂಧಪಟ್ಟ ಮನೆಯವರು ಸ್ವಂತ ಖರ್ಚಿನಲ್ಲಿ ಆದರೂ ಶೌಚಾಲಯವನ್ನು ಹೊಂದುವಂತೆ ಪ್ರೇರೆಪಿಸಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶೇಕಡಾ 100ರಷ್ಟು ಶೌಚಾಲಯದ ಬಳಕೆಯನ್ನು ಮಾಡಬೇಕಾಗುತ್ತದೆ. ಆದರೆ ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಪಂಚಾಯತ್ ಎಂದು ಘೋಷಣೆಯಾಗಿರುವ ಉಳ್ಳಾಲ ತಾಲೂಕಿನ ಪಾವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಂಚವುದಡಿ, ಬಾವಲಿಗುರಿ, ಉಗ್ರನಬೈಲು, ಇನೋಳಿ ಬಿ ಸೈಟ್ ನಲ್ಲಿ ಏಳು ಶೌಚಾಲಯ ರಹಿತ ಮನೆಗಳು ಇರುವ ಬಗ್ಗೆ ಉಲ್ಲೇಖದಂತೆ ಉಳ್ಳಾಲವಾಣಿ ವಾರಪತ್ರಿಕೆಯಲ್ಲಿ ವರದಿ ಪ್ರಕಟವಾಗಿರುತ್ತದೆ. ಆದುದರಿಂದ ಅಗತ್ಯ ಕ್ರಮಕ್ಕೆ ಸೂಚಿಸಲಾಗಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅರ್ಹ ಫಲಾನುಭವಿಗಳ ಪಟ್ಟಿಯನ್ನು ತಯಾರಿಸಲು ವಿಶೇಷ ಗ್ರಾಮ ಸಭೆಯನ್ನು ಕರೆಯುವುದು.ಸದರಿ ವರದಿಯನ್ವಯ Citizen Portal ನ ಮೂಲಕ ಅರ್ಜಿ ಸ್ವೀಕೃತಿಗಾಗಿ ವಿಶೇಷ ಡ್ರೈವ್ ಗಾಗಿ ಶಿಬಿರಗಳನ್ನು ನಡೆಸುವುದು. ಸ್ವೀಕೃತವಾದ ಅರ್ಜಿಗಳನ್ನು ತಾಲೂಕು ಗಳಿಂದ ಪರಿಶೀಲಿಸಿ ಪ್ರಮಾಣಿಕರಿಸಿದ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಜಿಲ್ಲಾ ಹಂತಕ್ಕೆ ಅನುಮೋದನೆಗಾಗಿ ಕಳುಹಿಸುವುದು. ಪಂಚತಂತ್ರ 20 ರಲ್ಲಿ ತಾಲೂಕು ಹಂತದಲ್ಲಿ ಅನುಮೋದನೆ ನೀಡಲು ಕೂಡಲೇ ಕ್ರಮ ಕೈಗೊಳ್ಳುವುದು ಹಾಗೂ ಗ್ರಾಮ ಹಂತದಲ್ಲಿ ಪಂಚತಂತ್ರ 20 ರಲ್ಲಿ ಪೂರ್ವಸ್ಥಳ ಪರಿಶೀಲನೆ ನಡೆಸುವುದರ ಜೊತೆಗೆ ಕಾರ್ಯಾದೇಶ ನೀಡಲು ಕ್ರಮ ಕೈಗೊಳ್ಳುವುದು. ಕಾಮಗಾರಿ ಪೂರ್ಣಗೊಂಡಿರುವ ಶೌಚಾಲಯಗಳ ಪಂಚತಂತ್ರ 20 ರಲ್ಲಿ ಅಂತಿಮ ಸ್ಥಳ
IMIS de Geo-Tagging ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವುದು. ಪಂಚತಂತ್ರ 2.0 ರಲ್ಲಿ ಅಂತಿಮ ಸ್ಥಳ ಪರಿಶೀಲನೆ ಹಾಗೂ IMIS ನಲ್ಲಿ geo-tagging ಪ್ರಕ್ರಿಯೆ ಪೂರ್ಣಗೊಳಿಸಿದ ಫಲಾನಿಭವಿಗಳಿಗೆ K-2 SPARSH ಮೂಲಕ ಪ್ರೋತ್ಸಾಹಧನ ಪಾವತಿಸಲು ಕ್ರಮವಹಿಸುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.


