UN networks
ಉಳ್ಳಾಲ: ದೇವಸ್ಥಾನ, ಚರ್ಚ್ ,ಮಸೀದಿಗೆ ಹಾಗೂ ಶಿಕ್ಷಣ ಸಂಸ್ಥೆಗಳನ್ನು ಸಂಪರ್ಕಿಸುವ ತೊಕ್ಕೊಟ್ಟು ಒಳಪೇಟೆ ರಸ್ತೆಯಲ್ಲಿ ಕೇಂದ್ರ ಮಾರುಕಟ್ಟೆಯೂ ಇರುವುದರಿಂದ ಉಳ್ಳಾಲ ನಗರಸಭೆಯ ಕೇಂದ್ರ ಸ್ಥಳವಾಗಿದೆ. ಇಲ್ಲಿ ಮೂಲಭೂತ ಸೌಕರ್ಯಗಳ ಅಗತ್ಯದ ಹಿನ್ನೆಲೆಯಲ್ಲಿ ಅನುದಾನ ಮೀಸಲಿಡಲಾಗಿದೆ. ಈ ಮೂಲಕ ಚರಂಡಿ ಮೇಲೆ ಆರ್ ಸಿಸಿ ಹಾಸಿನಿಂದ ವಾಹನಸವಾರರು, ಜನರು ಸುಗಮವಾಗಿ ಸಂಚರಿಸಬಹುದು ಎಂದು ಶಾಸಕ ಯು.ಟಿ ಖಾದರ್ ಅಭಿಪ್ರಾಯಪಟ್ಟರು.
ಅವರು ಉಳ್ಳಾಲ ನಗರಸಭೆಯ ತೊಕ್ಕೊಟ್ಟು ಒಳಪೇಟೆ ಮೀನು ಮಾರ್ಕೆಟ್ ಕೊಳಗೇರಿಯಲ್ಲಿ ಸೆಬಾಸ್ಟಿಯನ್ ಚರ್ಚ್ ಮುಂದೆಯಿಂದ ಮೀನು ಮಾರುಕಟ್ಟೆವರೆಗೂ 2022-23ನೇ ಸಾಲಿನ ಕ್ರಿಯಾಯೋಜನೆಯಡಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಮೂಲಭೂತ ಸೌಲಭ್ಯ ಆರ್ ಸಿಸಿ ಚರಂಡಿ ಹಾಗೂ ಅಡ್ಡಮೋರಿ ಗೆ ಮಂಜೂರಾದ ರೂ.20 ಲಕ್ಷ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ತೊಕ್ಕೊಟ್ಟು ಸಂತ ಸೆಬೆಸ್ತಿಯನ್ನರ ಚರ್ಚಿನ ಧರ್ಮಗುರು ಫಾ. ಸಿಪ್ರಿಯನ್ ಪಿಂಟೋ ಮಾತನಾಡಿ, 104 ವರ್ಷ ಚರಿತ್ರೆ ಹೊಂದಿರುವ ಇಗರ್ಜಿಯ ಎದುರುಗಡೆ ಅನುದಾನ ಒದಗಿಸುತ್ತಿರುವ ಕಾರ್ಯ ಕೃತಜ್ಞತಾಪೂರ್ವ. ಪ್ರತಿ ಧಾರ್ಮಿಕ ಕ್ಷೇತ್ರಗಳಿಗೂ ಯಾತ್ರಿಕರು ಹೋಗುವ ಸಂಪರ್ಕ ರಸ್ತೆಯ ಬದಿಯಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡಿರುವ ಶಾಸಕರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು.
ಈ ವೇಳೆ ದರ್ಗಾ ಸಮಿತಿಯ ಮುಸ್ತಾಫ ಅಬ್ದುಲ್ಲ, ಕಾಪಿಕಾಡು ಉಮಾಮಹೇಶ್ವರಿ ದೇವಸ್ಥಾನದ ಅಧ್ಯಕ್ಷ ಈಶ್ವರ್ ಉಳ್ಳಾಲ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಉಪಾಧ್ಯಕ್ಷ ಸುರೇಶ್ ಭಟ್ನಗರ, ಉಳ್ಳಾಲ ನಗರಸಭೆ ಅಧ್ಯಕ್ಷೆ ಚಿತ್ರಾ ಚಂದ್ರಕಾಂತ್, ಮಾಜಿ ಅಧ್ಯಕ್ಷ ಬಾಝಿಲ್ ಡಿಸೋಜ, ಸ್ಥಾಯಿ ಸಮಿತಿ ಅಧ್ಯಕ್ಷ ವೀಣಾ ಶಾಂತಿ ಡಿಸೋಜ, ಉಳ್ಳಾಲ ನಗರಸಭೆ ಕಮೀಷನರ್ ವಿದ್ಯಾ ಕಾಳೆ, ಗುತ್ತಿಗೆದಾರ ಸಾಗರ್, ಜ್ಯೋತಿ, ಕಿಶೋರ್, ಮಹಮ್ಮದ್, ಝಿಯಾ, ರಿಚರ್ಡ್ ಮುಂತಾದವರು ಉಪಸ್ಥಿತರಿದ್ದರು.


