UN networks
ಉಳ್ಳಾಲ: ಯಕ್ಷಗಾನವೆಂಬುದು ಪಾರಂಪರಿಕ ಕಲೆ .ಯಕ್ಷಗಾನ ಪ್ರದರ್ಶನದೊಂದಿಗೆ ಯಕ್ಷಗಾನದ ಅಧ್ಯಯನ, ವಿಚಾರಸಂಕಿರಣಗಳು, ಪ್ರಾತ್ಯಕ್ಷಿಕೆ, ಅವಲೋಕನ, ಕಮ್ಮಟದಂತಹ ಕಾರ್ಯಕ್ರಮಗಳು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ನಡೆಯುತ್ತಿರುವುದು ಯಕ್ಷಗಾನ ಕಲೆ ಇಂದು ಶೈಕ್ಷಣಿಕ ವಲಯದಲ್ಲಿ ಬೆಳೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಪಿ.ಎಸ್.ಯಡಪಡಿತ್ತಾಯ ಅವರು ಹೇಳಿದರು.
ಅವರು ಮಂಗಳೂರು ವಿಶ್ವವಿದ್ಯಾನಿಲಯ ಡಾ| ಪಿ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ, ಮಂಗಳಗಂಗೋತ್ರಿ ಹಾಗೂ ಕುರಿಯ ವಿಠಲಶಾಸ್ತ್ರಿ ಸಾಂಸ್ಕøತಿಕ ಪ್ರತಿಷ್ಠಾನ, ಉಜಿರೆ ಇವರ ಸಹಯೋಗದಲ್ಲಿ ಡಾ| ಮನೋರಮಾ ಬಿ. ಎನ್ ಅವರ ಕೃತಿ ‘ಯಕ್ಷಮಾರ್ಗಮುಕುರ’ ಅವಲೋಕನ – ಪ್ರಾತ್ಯಕ್ಷಿಕೆ ಕಮ್ಮಟ ಕಾರ್ಯಕ್ರಮವನ್ನು ಮಂಗಳೂರು ವಿವಿಯ ಯಕ್ಷಗಾನ ಕಲಾಕೇಂದ್ರದಲ್ಲಿ ಉದ್ಘಾಟಿಸಿ ಮಾತನಾಡಿದರು.
ಲೇಖಕಿ, ಕಲಾ ಸಂಶೋಧಕರೂ ಆಗಿರುವ ಡಾ.ಮನೋರಮಾ ಅವರ ಯಕ್ಷಮಾರ್ಗಮುಕುರ ಕೃತಿಯು ಒಂದು ಮೌಲಿಕ ಕೃತಿಯಾಗಿದ್ದು, ಸಂಶೋಧನೆಯ ಹೊಸ ಮಜಲುಗಳನ್ನು ತೆರದಿಟ್ಟಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ವಿದ್ವಾಂಸರಾದ ಡಾ| ಎಂ. ಪ್ರಭಾಕರ ಜೋಶಿ ಅವರು ಭಾಗವಹಿಸಿ ‘ಪ್ರವೇಶ-ಸ್ವರೂಪ-ಮಹತ್ವ’ ವಿಷಯದ ಬಗ್ಗೆ ಮಾತನಾಡಿದರು,. ವಿಶ್ರಾಂತ ಪ್ರಾಧ್ಯಾಪಕರು, ಕಲಾವಿದರಾಗಿರುವ ಪ್ರೊ|. ಎಂ. ಎಲ್ ಸಾಮಗ ಅವರು ‘ಆಕರ-ಅನ್ವಯ-ವಿಧಾನ’ ಎಂಬ ವಿಷಯದಲ್ಲಿ ಹಾಗೂ ‘ಪರಿಕಲ್ಪನೆ-ಅಧ್ಯಯನ-ಕ್ಷೇತ್ರಕಾರ್ಯ’ ಎಂಬ ವಿಷಯದಲ್ಲಿ ಕಲಾ ಸಂಶೋಧಕರಾದ ಡಾ| ಮನೋರಮಾ ಬಿ.ಎನ್. ಮಾತನಾಡಿದರು.
ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಎಂ.ಪ್ರಭಾಕರ ಜೋಶಿ ಹಾಗೂ ಹಿರಿಯ ಕಲಾವಿದರಾದ ಕೆ.ಗೋವಿಂದ ಭಟ್ ಅವರನ್ನು ಕೇಂದ್ರದ ವತಿಯಿಂದ ಗೌರವಿಸಲಾಯಿತು.
ಬಳಿಕ ಕಲಾ ಸಂಶೋಧಕರು ಮತ್ತು ತಜ್ಞ ಕಲಾವಿದರಿಂದ ಪ್ರಾತ್ಯಕ್ಷಿಕೆ ಕಮ್ಮಟ ನಡೆಯಿತು. ಹಿಮ್ಮೇಳದಲ್ಲಿ ಪುತ್ತಿಗೆ ರಘುರಾಮ ಹೊಳ್ಳ, ಪದ್ಮನಾಭ ಉಪಾಧ್ಯಾಯ, ಮುರಾರಿ ಕಡಂಬಳಿತ್ತಾಯ, ಮುಮ್ಮೇಳದಲ್ಲಿ ದಿವಾಣ ಶಿವಶಂಕರ ಭಟ್, ಕುಮಾರಿ ರಂಜಿತಾ ಎಲ್ಲೂರು ಭಾಗವಹಿಸಿದ್ದರು. ವಿಶ್ರಾಂತ ಕುಲಪತಿಗಳಾದ ಪ್ರೊ| ಬಿ. ಎ ವಿವೇಕ ರೈ, ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕರಾದ ಪ್ರೊ| ಶ್ರೀಪತಿ ಕಲ್ಲೂರಾಯ ಸ್ವಾಗತಿಸಿದರು. ಉಜಿರೆ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ್ ಭಟ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಯಕ್ಷಗಾನ ಕೇಂದ್ರದ ಸಂಶೋಧನಾ ಅಧಿಕಾರಿ ಡಾ| ಸತೀಶ್ ವಂದಿಸಿದರು.


