UN networks
ಉಳ್ಳಾಲ: ಲೈಂಗಿಕ ಕಿರುಕುಳ ನೀಡಿ ಕುಂಪಲ ನಿವಾಸಿ ಬಾಲಕಿ ಆತ್ಮಹತ್ಯೆಗೆ ಕಾರಣವಾದ ಪೊಲೀಸ್ ಕಾನ್ಸ್ ಸ್ಟೇಬಲ್ ಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪೋಕ್ಸೋ )ವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಪ್ರಕರಣದ ತನಿಖೆಯನ್ನು ಈಗ ಉರ್ವ ಪೊಲೀಸ್ ಠಾಣಾ ನಿರೀಕ್ಷಕಿ ಆಗಿರುವ ಭಾರತಿ ಅವರು ನಡೆಸಿ ವರದಿ ಸಲ್ಲಿಸಿದ್ದರು.




ದ.ಕ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿದ್ದ ಬಜಪೆ ಸಿದ್ದಾರ್ಥನಗರ ನಿವಾಸಿ ಪ್ರವೀಣ್ ಸಾಲ್ಯಾನ್(35) ಶಿಕ್ಷೆಗೊಳಗಾದ ಆರೋಪಿ. ಕೃಷ್ಣನಗರ ನಿವಾಸಿ ನಿವೃತ್ತ ಶಿಕ್ಷಕಿ ಸಾಕುಪುತ್ರಿ ಜ್ಯೋತಿ(17)ಆತ್ಮಹತ್ಯೆ ನಡೆಸಿದ್ದ ಬಾಲಕಿ. 2015 ಫೆ.16 ರಂದು ಬಾಲಕಿ ಜ್ಯೋತಿ ತಾಯಿ ಯೋಗ ತರಬೇತಿಗೆಂದು ತೆರಳಿದ್ದ ಸಂದರ್ಭ ಮನೆಯ ಕೋಣೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಮೃತದೇಹ ಬಳಿ ಸಿಕ್ಕ ಡೆತ್ ನೋಟಿನಲ್ಲಿ ‘ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರವೀಣ್ ಸಾಲ್ಯಾನ್ ಎಂಬಾತ ಪ್ರೀತಿಯ ನಾಟಕವಾಡಿ ಮೋಸ ಮಾಡಿ ತನ್ನಿಂದ ರೂ. 1 ಲಕ್ಷ ಹಣ ಹಾಗೂ ಚಿನ್ನ ಕೊಡುವಂತೆ ಬ್ಲ್ಯಾಕ್ ಮೇಲ್ ನಡೆಸುತ್ತಿದ್ದನು. ಇದರಿಂದ ನೊಂದು ಆತ್ಮಹತ್ಯೆ ನಡೆಸುತ್ತಿರುವುದಾಗಿ ಡೆತ್ ನೋಟಲ್ಲಿ ಬಾಲಕಿ ಉಲ್ಲೇಖಿಸಿದ್ದರು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿಯನ್ನು ಪೊಲೀಸ್ ಇಲಾಖೆ ಅಮಾನತುಗೊಳಿಸಿತ್ತು.
ಪ್ರಕರಣದ ತನಿಖೆಯನ್ನು ಉಳ್ಳಾಲ ಠಾಣೆಯಲ್ಲಿ ಆಗಿನ ಎಸ್.ಐ ಆಗಿದ್ದ ಭಾರತಿ ವಹಿಸಿದ್ದರು. ಅವರು ನೀಡಿರುವ ತನಿಖಾ ವರದಿಯ ಆಧಾರದಂತೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ (ಎಫ್ ಟಿ ಎಸ್ ಸಿ -1 ಪೋಕ್ಸೊ) ಮಂಜುಳಾ ಶೆಟ್ಟಿ ಸಮಗ್ರ ವಿಚಾರಣೆ ನಡೆಸಿ ಆರೋಪಿಗೆ ಐಪಿಸಿ 305 ರಡಿ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ಹಾಗೂ ಸೆಕ್ಷನ್ 12 ರಡಿ ( ಪೋಕ್ಸೊ) 3. ವರ್ಷ ಕಠಿಣ ಸಜೆ ಹಾಗೂ 1 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಸಹನಾದೇವಿ ವಾದ ಮಂಡಿಸಿದ್ದರು.


