UN NEWS NETWORKS
ಉಳ್ಳಾಲ: ಕೃಷಿಯನ್ನು ಉತ್ತೇಜನ ಮಾಡುವ ನಿಟ್ಟಿನಲ್ಲಿ ಭತ್ತದ ಕೃಷಿಗೆ ಪ್ರೋತ್ಸಾಹ ನೀಡುವ ಕೋಟೆಕಾರು ಸೇವಾ ಸಹಕಾರಿ ಬ್ಯಾಂಕ್ನ ಕೆಲಸ ಪುಣ್ಯದ ಕಾರ್ಯ. ಪ್ರಾಥಮಿಕ ಕೃಷಿಪತ್ತಿನ ಸಂಘದ ಕಾರ್ಯ ಉಭಯ ಜಿಲ್ಲೆಗಳಲ್ಲಿ ಪ್ರಥಮವಾಗಿದೆ ಎಂದು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಹಾಗೂ ಚಲನಚಿತ್ರ ನಟ ಗೋಪಿನಾಥ್ ಭಟ್ ಅಭಿಪ್ರಾಯಪಟ್ಟರು.




ಅವರು ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ನಿಯಮಿತ ಆಶ್ರಯದಲ್ಲಿ ಭಾನುವಾರ ಕೋಟೆಕಾರಿನ ಬ್ಯಾಂಕ್ ಸಭಾಂಗಣದಲ್ಲಿ ಭತ್ತ ಕೃಷಿಗೆ ಪ್ರೋತ್ಸಾಹ ಧನ ವಿತರಣೆ, ಪ್ರತಿಭಾ ಪುರಸ್ಕಾರ ಹಾಗೂ ನವೋದಯ ಸಂಘದ ಸದಸ್ಯರಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ದರು.
ಅನ್ನದಾತ ಕೃಷಿಕನಿಗೆ ಎಷ್ಟು ಸೌಲಭ್ಯ ಕೊಟ್ಟರೂ ಕಡಿಮೆಯೇ. ಜಗತ್ತಿನಲ್ಲಿ ಶೇ.46 ಯುವಪೀಳಿಗೆ ಇರುವ ದೇಶ ಭಾರತ, ಮುಂದಿನ ಭವ್ಯ ಭಾರತಕ್ಕೆ ಇದು ಭದ್ರ ಬುನಾದಿಯಾಗಲಿದೆ. ಮಹಿಳಾ ಸಬಲೀಕರಣ ಹಿನ್ನೆಲೆಯಲ್ಲಿ ಆರಂಭಗೊಂಡ ನವೋದಯ ಸಂಘದ ಸದಸ್ಯರನ್ನು ಪ್ರೋತ್ಸಾಹಿಸುವ ಜೊತೆಗೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಕಾರ್ಯ ಉತ್ತಮವಾದುದು ಎಂದರು.
ರಾಷ್ಟ್ರಪ್ರಶಸ್ತಿ ವಿಜೇತ ತೆಂಗು ಬೆಳೆಗಾರ ಚಂದ್ರಶೇಖರ್ ಗಟ್ಟಿ ಮಾತನಾಡಿ, ಕೃಷಿಗೆ ಹಣಕಾಸಿನ ಸಹಾಯಕ್ಕೆ ಅಲೆದಾಡಿಸುವ ಬ್ಯಾಂಕ್ ಗಳೇ ಅಧಿಕವಾಗಿರುವ ಸಂದರ್ಭದಲ್ಲಿ ಕೋಟೆಕಾರು ಬ್ಯಾಂಕ್ ಅವೆಲ್ಲಗಿಂತ ವಿಭಿನ್ನವಾಗಿ ಕಾರ್ಯಾಚರಿಸಿ ಕೃಷಿಕರ ಏಳಿಗೆಯತ್ತ ಮುನ್ನುಗ್ಗುತ್ತಿದೆ. ಮಳೆ ಮುಗಿದ ತಕ್ಷಣ ಮಣ್ಣು ಹುಳಿಯಾಗಿರುತ್ತದೆ. ಅದಕ್ಕಾಗಿ ಸುಣ್ಣ ಹಾಕಿ ಮಣ್ಣಿನ ಫಲವತ್ತತೆಯನ್ನು ವೃದ್ಧಿಸಿ ಕೃಷಿ ಮಾಡಬೇಕಿದೆ. ಮುಂದಿನ ದಿನಗಳಲ್ಲಿ ಸುಣ್ಣವನ್ನು ಬ್ಯಾಂಕ್ ಸಬ್ಸಿಡಿ ದರದಲ್ಲಿ ನೀಡಿದಾಗ ರೈತರಿಗೆ ಸಹಕಾರಿಯಾಗುವುದು. ವೈಜ್ಞಾನಿಕ ಹೇಳಿಕೆಗಳಲ್ಲಿ ಬದಲಾವಣೆಗಳಿರಬಹದು ಆದರೆ ಹಿರಿಯರು ಅನುಸರಿಸಿದಂತಹ ನಾಟಿ ಜಾನುವಾರು,ತೆಂಗಿನ ಎಣ್ಣೆ ಬಳಕೆ ಆರೋಗ್ಯಕ್ಕೆ ಪೂರಕವಾಗಿರುವುದು ಇದೀಗ ವಿಜ್ಞಾನವೂ ಒಪ್ಪಿಕೊಂಡಿದೆ . ಜಿಲ್ಲೆಯಾದ್ಯಂತ ರಂಜಕಗಳ ಬಳಕೆ ಹೆಚ್ಚಾದ ಹಿನ್ನೆಲೆಯಲ್ಲಿ ತೆಂಗಿನ ಗರಿಗಳು ಕಿರಿದಾಗುತ್ತಿದೆ, ರೋಗಗಳು ಹೆಚ್ಚಾಗುತ್ತಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಅಧ್ಯಕ್ಷ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು ವಹಿಸಿದ್ದರು.
ಬ್ಯಾಂಕ್ ಉಪಾಧ್ಯಕ್ಷ ಕೆ.ಬಿ.ಅಬುಸಾಲಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರ್ಷವರ್ಧನ್ ಉಳ್ಳಾಲ್, ನಿರ್ದೇಶಕರುಗಳಾದ ಗಂಗಾಧರ ಯು., ಕೆ.ಕೃಷ್ಣಪ್ಪ ಸಾಲಿಯಾನ್, ಉದಯ ಕುಮಾರ್ ಶೆಟ್ಟಿ, ಅರುಣ್ ಕುಮಾರ್ ಯು., ರಾಘವ .ಆರ್.ಉಚ್ಚಿಲ್, ರಾಘವ ಸಿ. ಉಚ್ಚಿಲ್, ಪದ್ಮಾವತಿ ಎಸ್. ಶೆಟ್ಟಿ, ಸುರೇಖಾ ಚಂದ್ರಹಾಸ್, ನಾರಯಣ, ಬಾಬು ನಾಯ್ಕ, ಕಿರಣ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭ ಗೋಪಿನಾಥ್ ಭಟ್, ಎಸ್ ಎಸ್ ಎಲ್ ಸಿಯಲ್ಲಿ ಅಧಿಕ ಅಂಕ ಗಳಿಸಿದ ವಿಶೇಷ ಚೇತನ ಹಾಗೂ ಎಸ್ ಎಸ್ ಎಲ್ ಸಿ ತೇರ್ಗಡೆಯದ ಅಂಗನವಾಡಿ ಸಹಾಯಕಿ ಅವರನ್ನು ಸನ್ಮಾನಿಸಲಾಯಿತು. ಬ್ಯಾಂಕ್ ವ್ಯಾಪ್ತಿಯಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಹಾಗೂ ನವೋದಯ ಗುಂಪಿನ ಸದಸ್ಯರಿಗೆ ಸೀರೆ ವಿತರಣೆ ನಡೆಸಲಾಯಿತು.


