UN networks
ಕೊಣಾಜೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪದವಿ ವಿದ್ಯಾರ್ಥಿಗಳು ಕೊಣಾಜೆಯ ಮಂಗಳ ಗಂಗೋತ್ರಿಯ ಆಡಳಿತ ಸೌಧದ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.


ಮಂಗಳೂರು ವಿಶ್ವವಿದ್ಯಾಲಯದ ನಿರ್ಲಕ್ಷ್ಯ ಧೋರಣೆಯಿಂದ ಸಾವಿರಾರು ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ. ಹತ್ತಾರು ವಿಚಾರಗಳಲ್ಲಿ ಮಂಗಳೂರು ವಿವಿ ಗೊಂದಲ ಸೃಷ್ಟಿಸಿದ್ದು, ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಹೀಗಾಗಿ ಪದವಿ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಕೊಣಾಜೆ ವಿವಿಗೆ ಆಗಮಿಸಿ ವಿವಿ ಆಡಳಿತ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ. ಮಂಗಳೂರು ವಿವಿ ಸರಿಯಾಗಿ ಫಲಿತಾಂಶ ನೀಡದೇ ವಿದ್ಯಾರ್ಥಿಗಳನ್ನು ಸತಾಯಿಸುತ್ತಿದೆ. ಪರೀಕ್ಷೆ ನಡೆದು 3 ತಿಂಗಳು ಕಳೆದರೂ ಫಲಿತಾಂಶ ಪ್ರಕಟಿಸದೇ ನಿರ್ಲಕ್ಷ್ಯ ತಾಳಿದೆ. ಅಂಕಪಟ್ಟಿ ಕೂಡ ನೀಡದೇ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಶೇ.80, 90 ಅಂಕಗಳಿಸುವ ವಿದ್ಯಾರ್ಥಿಗಳಿಗೆ ಕೆಲವು ಸೆಮಿಸ್ಟರ್ ಗಳಲ್ಲಿ 26, 28 ಅಂಕಗಳು ಲಭಿಸುತ್ತಿರುವುದು ಹಾಗೂ ವೆಬ್ಸೈಟ್ ಪ್ರತೀ ಬಾರಿಯೂ ಸರ್ವರ್ ಸಮಸ್ಯೆಯಿಂದ ಫಲಿತಾಂಶ ಸಿಗದೆ ಇರುವುದರ ಬಗ್ಗೆ ವಿದ್ಯಾರ್ಥಿಗಳು ವಿವಿ ಉಪಕುಲಪತಿಗಳ ಬಳಿ ಅಲಳು ತೋಡಿಕೊಂಡಿದ್ದಾರೆ. ಇದರ ಜೊತೆಗೆ 1 ರೂಪಾಯಿ ವೆಚ್ಚ ತಗಲುವ ಅಪ್ಲಿಕೇಶನ್ ಗೆ 120 ರೂಗಳನ್ನು ಪಡೆದು ವಂಚಿಸಲಾಗುತ್ತಿದೆ. ಪರೀಕ್ಷಾ ಶುಲ್ಕ ಹೆಚ್ಚಳ,
ಅಂಕಪಟ್ಟಿಯಲ್ಲಿ ಗೊಂದಲಗಳು ಸರಿಪಡಿಸಲು ಬಂದಾಗ ನಾನಾ ಕಾರಣ ನೀಡಿ ಸತಾಯಿಸುವುದು ಮಾಡಲಾಗುತ್ತಿದೆ. ಮರುಮೌಲ್ಯಮಾಪನ ಶುಲ್ಕ ಹೆಚ್ಚಳ, ಸಿಇಟಿ ಪಾಸ್ ಆದರೂ ಅಂತಿಮ ಸೆಮಿಸ್ಟರ್ ನಲ್ಲಿ ಕಳಪೆ ಮೌಲ್ಯಮಾಪನ ದಿಂದ ಅನುತ್ತೀರ್ಣವಾಗಿರುವ ಬಗ್ಗೆ ವಿದ್ಯಾರ್ಥಿಗಳು ವಿವಿ ಆಡಳಿತದ ವಿರುದ್ದ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಹೀಗೆ ಸುಮಾರು ಹತ್ತಾರು ಸಮಸ್ಯೆಗಳ ವಿರುದ್ದ ತಿರುಗಿಬಿದ್ದ ವಿದ್ಯಾರ್ಥಿಗಳು ವಿವಿ ಆಡಳಿತದ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ.
ಕೊನೆಗೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಂಗಳೂರು ವಿವಿ ಉಪಕುಲಪತಿ ಡಾ.ಸುಬ್ರಹ್ಮಣ್ಯ ಯಡಪಡಿತ್ತಾಯ ಮನವಿ ಸ್ವೀಕರಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಅಂತಿಮವಾಗಿ ಉಪಕುಲಪತಿಗಳ ಭರವಸೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಕೈ ಬಿಟ್ಟರು. ಪರೀಕ್ಷಾಂಗ ಕುಲಸಚಿವ ಪ್ರೊ.ಪಿ.ಎಲ್.ಧರ್ಮ ಹಾಗೂ ವಿವಿಯ ಇತರೆ ಅಧಿಕಾರಿಗಳು ಹಾಜರಿದ್ದರು.


