ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಮುನ್ನೂರು: ಅಲ್ಲಿ ಎಲ್ಲರೂ ಮನೆಗಳನ್ನು ತೊರೆಯುತ್ತಿದ್ದಾರೆ. ಮುಂದೊಂದು ದಿನ ಅಲ್ಲಿ ಯಾರೂ ಇರುವುದಿಲ್ಲ. ಆ ವೇಳೆ ಅದು ನಿರ್ವಸತಿ ದ್ವೀಪ ನಿರ್ಮಾಣ ಆಗುವುದರಲ್ಲಿ ಸಂಶಯವಿಲ್ಲ. ಇದು ಮುನ್ನೂರು ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕುತ್ತಾರುಗುತ್ತು , ತೇವುಲ, ಬಟ್ಟೆದಡಿ ಪ್ರದೇಶಗಳು ಸುತ್ತುವರಿದ ಪಾಂಡ್ಯಾರ್ ಮತ್ತು ನಡೋಡಿ ಪ್ರದೇಶದ ಕತೆ.
ಸುಮಾರು ಐದು ಎಕರೆ ವಿಸ್ತೀರ್ಣದಲ್ಲಿರುವ ಪಾಂಡ್ಯ ಮತ್ತು ನಡೋಡಿ ಪ್ರದೇಶದಲ್ಲಿ 10ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳ ಮನೆಗಳಿದ್ದವು. ಆದರೆ ಮಳೆಗಾಲದಲ್ಲಿ ಅವರ ಸ್ಥಿತಿ ಶೋಚನೀಯವಾಗಿರುವುದರಿಂದ ಐದು ಕುಟುಂಬಗಳು ಈಗಾಗಲೇ ಊರು ಬಿಟ್ಟು ಬೇರೆಡೆಗೆ ಸ್ಥಳಾಂತರಗೊಂಡಿದೆ. ಪಾಂಡ್ಯಾರ್ ಮತ್ತು ನಡೋಡಿ ಪ್ರದೇಶಗಳ ಸುತ್ತಲೂ ತಗ್ಗು ಪ್ರದೇಶಗಳಿದ್ದು, ಹೆಚ್ಚಿನ ಗದ್ದೆಗಳು ಮಳೆಗಾಲದಲ್ಲಿ ನೀರಿನಿಂದ ಆವೃತ್ತವಾಗುತ್ತಿದೆ. ಬೇಸಿಗೆ ಕಾಲದಲ್ಲಿ ಗದ್ದೆಯ ಬದಿಗಳೆ ಇವರಿಗೆ ಸಂಪರ್ಕ ರಸ್ತೆಯಾದರೆ ಮಳೆಗಾಲದಲ್ಲಿ ನೀರು ತುಂಬಿದ ಗದ್ದೆಗಳೇ ಇವರಿಗೆ ಸಂಪರ್ಕ ರಸ್ತೆ. ಈಗಾಗಲೇ ಪಾಂಡ್ಯಾರ್ನ ಒಂದು ಕುಟುಂಬ ಸ್ವಂತ ಮನೆ ಬಿಟ್ಟು ಉಳ್ಳಾಲಕ್ಕೆ ವಲಸೆ ಹೋಗಿದ್ದು, ನಡೋಡಿಯಲ್ಲಿ ನಾಲ್ಕು ಕುಟುಂಬಗಳು ಊರು ಬಿಟ್ಟಿದ್ದಾರೆ. ಖಾಲಿ ಬಿದ್ದಿರುವ ಮನೆಗಳು ಕುಸಿಯುವ ಭೀತಿಯಲ್ಲಿದೆ.
ಹೆಣ್ಮಕ್ಕಳಿಗೆ ಮದುವೆ ಭಾಗ್ಯವಿಲ್ಲ:
ಈ ಪ್ರದೇಶದಲ್ಲಿರುವ ಐದು ಮನೆಗಳಲ್ಲಿ ಮದುವೆ ವಯಸ್ಸಿನ ಹಲವು ಹೆಣ್ಮಕ್ಕಳಿದ್ದಾರೆ. ಆರ್ಥಿಕವಾಗಿ ಸಬಲರಲ್ಲದ ಕುಟುಂಬ ಬೇರೆಡೆ ಸ್ಥಳಾಂತರವಾಗಲು ಅಶಕ್ತರಾಗಿದ್ದಾರೆ. ಇವರ ಮನೆಗಳಿಗೆ ಸರಿಯಾದ ದಾರಿಯಿಲ್ಲ, ಮಳೆಗಾಲದಲ್ಲಂತೂ ಹೋಗುವುದೇ ಅಸಾಧ್ಯ ಎಂದು ಇಲ್ಲಿನ ಯುವತಿಯರನ್ನು ಮದುವೆಯಾಗಲು ಯುವಕರ್ಯಾರೂ ಮುಂದಾಗುತ್ತಿಲ್ಲ. ಇದೇ ಕಾರಣದಿಂದ ಮನೆ ಬಿಟ್ಟು ಹೋದ ಕುಟುಂಬಗಳೂ ಇವೆ.
ಮಳೆ ಬಂದರೆ ಮಕ್ಕಳಿಗೆ ಶಾಲೆ ಇಲ್ಲ :
ಈ ಪ್ರದೇಶದಲ್ಲಿರುವ ಮಕ್ಕಳಿಗೆ ಮಳೆ ಬಂದರೆ ಶಾಲೆಗೆ ರಜೆ ಮಾಡುವ ಸ್ಥಿತಿ. ಸಾಧಾರಣ ಮಳೆಯಾದರೆ ಹೆತ್ತವರು ಮಕ್ಕಳನ್ನು ಹೆಗಲ ಮೇಲೆ ಕುಳ್ಳಿರಿಸಿ ಕರೆದುಕೊಂಡು ಹೋದರೆ, ತೀವ್ರ ಮಳೆ ಬಂದರೆ ಮಕ್ಕಳಿಗೂ ಶಾಲೆಗೆ ರಜೆ, ಎಸಕ್ಕೆ ಹೋಗುವವರು ಮನೆಯಲ್ಲಿಯೇ ಇರುವ ಸ್ಥಿತಿ. ಮಳೆಗಾಲದಲ್ಲಿ ಅನಾರೋಗ್ಯವಾದರೆ ಸೂಕ್ತ ಚಿಕಿತ್ಸೆಗೆ ಕರೆದುಕೊಂಡು ಹೋಗಲು ವ್ಯವಸ್ಥೆ ಇಲ್ಲ ಎನ್ನುತ್ತಾರೆ ಸ್ಥಳೀಯರಾದ ಮಹಮ್ಮದ್.
ಹಾವು ಕಚ್ಚಿದಾಗ ಕೇಳುವವರಿರಲಿಲ್ಲ :
ವರ್ಷದ ಹಿಂದೆ ಪಾಂಡ್ಯಾರಿನಲ್ಲಿದ್ದ ಮನೆಯೊಂದರ ಬಾಲಕನಿಗೆ ನೆರೆ ನೀರಿನಲ್ಲಿ ಬಂದ ಹಾವೊಂದು ಕಚ್ಚಿತ್ತು. ಆದರೆ ರಾತ್ರಿ ಸಮಯವಾಗಿದ್ದರಿಂದಾಗಿ ಬಾಲಕನನ್ನು ಔಷಧಿಗೆ ಕೊಂಡೊಯ್ಯುವ ವ್ಯವಸ್ಥೆಯಿರಲಿಲ್ಲ. ಮನೆಯ ಸುತ್ತಲೂ ನೀರು ತುಂಬಿದ್ದರಿಂದಾಗಿ ಮನೆಯವರು ಅಸಹಾಯಕಾರಿದ್ದರು. ಬಳಿಕ ಬೊಬ್ಬೆ ಹಾಕಲು ಆರಂಭಿಸಿದ ಮನೆಯವರ ದನಿ ಕೇಳಿ ಸುಮಾರು 4. ಕಿ.ಮೀ ದೂರದಲ್ಲಿದ್ದ ಸ್ಥಳೀಯರು ದೋಣಿ ಮೂಲಕ ಬಂದು ಬಾಲಕನನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕರಿಸಿದ್ದರು. ಸ್ವಲ್ಪ ಹೊತ್ತಾದರೂ ಬಾಲಕನ ಜೀವಕ್ಕೆ ಅಪಾಯವಿತ್ತು. ಎಂದು ಮನೆಯವರು ತಿಳಿಸಿದ್ದಾರೆ.
ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ :
ಪಾಂಡ್ಯಾರ್ ಮತ್ತು ನಡೋಡಿ ಪ್ರದೇಶದ ಸುತ್ತಮುತ್ತಲಿನ ಪ್ರದೇಶ ಖಾಸಗಿಯಾಗಿರುವುದರಿಂದ ರಸ್ತೆ ನಿರ್ಮಾಣಕ್ಕೆ ತಡೆಯಾಗುತ್ತಿದೆ. ಇನ್ನೊಂದೆಡೆ ಈ ಪ್ರದೇಶ ಜನಪ್ರತಿನಿಧಿಗಳಿಂದ ಅವಗಣನೆಯಾಗಿದೆ ಎನ್ನುವುದು ಸ್ಥಳೀಯರ ವಾದ. ಕಳೆದ 15 ವರ್ಷಗಳಿಂದ ಸ್ಥಳೀಯ ಶಾಸಕರಿಗೆ, ಜಿಲ್ಲಾ ಮಟ್ಟ, ಗ್ರಾಮ ಪಂಚಾಯತ್ ಮಟ್ಟದ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಯಾರೂ ಕೂಡಾ ಗಮನ ಹರಿಸುತ್ತಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿ ಅಶ್ರಫ್.




















