UN networks
ನಾಟೆಕಲ್ : ಕೋವಿಡ್ ಸೋಂಕಿನಿಂದ ಮೂರು ತಿಂಗಳ ನಂತರವೂ ಲಕ್ಷಣಗಳು ಇದ್ದಲ್ಲಿ ಅದು ದೀರ್ಘಕಾಲಿಕ ಕೊರೊನಾ ಎಂದು ಉಲ್ಲೇಖಿಸಬಹುದು. ಕೋವಿಡ್ ನಿಂದ ಬದುಕಲು ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸಬೇಕಾಗಿದೆ. ಭಾರತೀಯರ ಹೆಚ್ಚಿನವರ ಶ್ವಾಸಕೋಶ 1.5 ಲೀ. ಸಾಮರ್ಥ್ಯದ್ದಾಗಿದ್ದು, ಕೋವಿಡ್ ಎದುರಿಸಬೇಕಾದಲ್ಲಿ 5 ಲೀ. ಸಾಮರ್ಥ್ಯದ ಅಗತ್ಯತೆ ಇದೆ. ಅದನ್ನು ವೃದ್ಧಿಸುವಲ್ಲಿ ಫಿಸಿಯೋಥೆರಪಿಗಳು ರೋಗಿಗಳ ಗಮನ ಹರಿಸಬೇಕಿದೆ ಎಂದು ಭಾರತೀಯ ಕ್ರಿಕೆಟ್ ತಂಡದ ಮಾಜಿ ಫಿಸಿಯೋಥೆರಪಿಸ್ಟ್, ದ ಇಂಡಿಯನ್ ಅಸೋಷಿಯೇಷನ್ ಆಫ್ ಫಿಸಿಯೋಥೆರಪಿಸ್ಟ್ , ಇಂಟರ್ ನ್ಯಾಷನಲ್ ಅಫೇರ್ಸ್ ಇದರ ಮುಖ್ಯಸ್ಥ ಡಾ.ಅಲಿ ಇರಾನಿ ಅಭಿಪ್ರಾಯಪಟ್ಟರು.
ಅವರು ನಾಟೆಕಲ್ ಕಣಚೂರು ಫಿಸಿಯೋಥೆರಪಿ ಕಾಲೇಜು ವತಿಯಿಂದ ವಿಶ್ವ ಫಿಸಿಯೋಥೆರಪಿ ದಿನ-2021 ಪ್ರಯುಕ್ತ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಲಾದ ಕೋವಿಡ್ -19 ನಿರ್ವಹಣೆಯಲ್ಲಿ ಫಿಸಿಯೋಥೆರಪಿಗಳ ಪಾತ್ರ ಕುರಿತ ಒಂದು ದಿನದ ಕಾರ್ಯಗಾರದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಮಂಗಳೂರಿನಲ್ಲಿ ಅಧಿಕ ಫಿಸಿಯೋಥೆರಪಿ ಕಾಲೇಜುಗಳು ಸ್ಥಾಪನೆಯಾಗಿವೆ . ಇಲ್ಲಿ ಇರುವ ಅರ್ಧದಷ್ಟು ಕಾಲೇಜುಗಳ ಡೀನ್ ರಾಜೀವ್ ಗಾಂಧೀ ವಿ.ವಿ ವಿದ್ಯಾರ್ಥಿಗಳಾಗಿದ್ದಾರೆ. ಅಮೆರಿಕಾದಲ್ಲಿರುವ ಸಾವಿರಕ್ಕೂ ಅಧಿಕ ಫಿಸಿಯೋಥೆರಪಿ ಕಾಲೇಜುಗಳಲ್ಲಿಯೂ ರಾಜೀವ್ ಗಾಂಧೀ ವಿ.ವಿ ವಿದ್ಯಾರ್ಥಿಗಳೇ ಡೀನ್ ಗಳಾಗಿರುವುದು ಭಾರತೀಯ ಫಿಸಿಯೋಥೆರಪಿಗಳಿಗೆ ಸಲ್ಲುವ ಗೌರವವಾಗಿದೆ. ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲು ಆತಂಕ, ಚಿಂತೆಯನ್ನು ದೂರಮಾಡಬೇಕಿದೆ. ಭಾರತೀಯ ಫುಟ್ಬಾಲ್ ಆಟಗಾರರಲ್ಲಿ ವಿಟೆಮಿನ್ ಡಿ-3, ವಿಟಮಿನ್ ಬಿ-12 ಇದರ ಕೊರತೆಯಿತ್ತು. ಇದು ಕೆಲ ಆಹಾರ ಪದ್ಧತಿಯಿಂದ ಕೊರತೆ ಉಂಟಾಗಿರುವುದು ಸಂಶೋಧನೆಯಿಂದ ಕಂಡುಬಂದಿದೆ. ದೇಹದಲ್ಲಿ ಮೆಗ್ನೀಷಿಯಾವನ್ನು ವೃದ್ಧಿಸಬೇಕಿದೆ. ದೇಶದ ಫಿಸಿಯೋಥೆರಪಿ ವಿಭಾಗದಲ್ಲಿ ಪಿಹೆಚ್ಡಿ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ವೈದ್ಯಕೀಯ ಕ್ಷೇತ್ರದಲ್ಲಿ ಈವರೆಗೆ ಆಗಿರುವ ಸಂಶೋಧನಾ ಪತ್ರಗಳಲ್ಲಿ ಅನೇಕ ಫಿಸಿಯೋಥೆರಪಿಗಳಿಂದ ರಚಿತವಾಗಿದೆ ಎಂದರು.
ಬೆಂಗಳೂರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಕುಲಸಚಿವ ಹಾಗೂ ಪರೀಕ್ಷಾಂಗ ಕುಲಸಚಿವ ಡಾ.ಯನ್ . ರಾಮಕೃಷ್ಣ ರೆಡ್ಡಿ ಮಾತನಾಡಿ ಕೋವಿಡ್ ಸೋಂಕಿತರು ಸಂಪೂರ್ಣ ಗುಣಮುಖರಾಗಲು ಫಿಸಿಯೋಥೆರಪಿಗಳ ಸೇವೆ ಅಗತ್ಯ. ಹೆಚ್ಚಾಗಿ ದೈಹಿಕ ಚಲನೆಗೆ ಕೋವಿಡ್ ಸೋಂಕಿತರು ತುತ್ತಾಗಿರುವ ಗಮನಾರ್ಹ. ಈ ಸಂದರ್ಭ ಫಿಸಿಯೋಥೆರಪಿಗಳ ಸೇವೆಯೇ ಮುಖ್ಯವಾಗಿರುತ್ತದೆ. ಕರ್ತವ್ಯದ ಅವಧಿಯಲ್ಲಿ ತಮ್ಮ ಸುರಕ್ಷತೆಯನ್ನು ಕಾಪಾಡುವುದು ಕೂಡಾ ಕರ್ತವ್ಯವಾಗಿರುತ್ತದೆ. ಕಾರ್ಯಗಾರದಲ್ಲಿ ಎಲ್ಲಾ ವಿಚಾರಗಳ ಚರ್ಚೆಗಳು ನಡೆದು ಹಲವು ಪ್ರಶ್ನೆಗಳಿಗೆ ಉತ್ತರ ಸಿಗಲಿ ಎಂದು ಹಾರೈಸಿದರು.
,ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಣಚೂರು ಆರೋಗ್ಯ ವಿಜ್ಞಾನ ಸಂಸ್ಥೆಯ ಅಧ್ಯಕ್ಷ ಯು.ಕೆ. ಮೋನು ವಹಿಸಿದ್ದರು.
ಈ ಸಂದರ್ಭ ಮುಖ್ಯ ಅತಿಥಿಯಾಗಿ ಬೆಂಗಳೂರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯಗಳ ಸಿಂಡಿಕೇಟ್ ಸದಸ್ಯೆ ಡಾ.ಚೈತನ್ಯಾ ಆನಂದ್, ದ ಇಂಡಿಯನ್ ಅಸೋಸಿಯೇಷನ್ ಆಫ್ ಫಿಸಿಯೋಥೆರಪಿಸ್ಟ್ ಇದರ ಉಪಾಧ್ಯಕ್ಷ ಡಾ.ಎ. ಸುರೇಶ್ ಬಾಬು ರೆಡ್ಡಿ, ರಾಜೀವ ಗಾಂಧಿ ವಿಶ್ವವಿದ್ಯಾನಿಲಯಗಳ ಸಿಂಡಿಕೇಟ್ ಸದಸ್ಯ ಡಾ. ಇಫ್ತಿಕಾರ್ ಆಲಿ ಆಡಳಿತ ನಿರ್ದೇಶಕ ಅಬ್ದುಲ್ ರಹಿಮಾನ್ ಮುಖ್ಯ ಅತಿಥಿಗಳಾಗಿದ್ದರು.
ಕಣಚೂರು ಫಿಸಿಯೋಥೆರಪಿ ಕಾಲೇಜು ಹಾಗೂ ಅಲೈಡ್ ಸೈನ್ಸಸ್ ಇದರ ಡೀನ್ ಡಾ| ಮೊಹಮ್ಮದ್ ಸುಹೈಲ್ ಸ್ವಾಗತಿಸಿದರು.











