ಉಳ್ಳಾಲ: ಆಂಬ್ಯುಲೆನ್ಸ್ ವಾಹನಕ್ಕೆ ಅಡ್ಡಿಪಡಿಸಿದ ವಾಹನದ ವೀಡಿಯೋ ವೈರಲ್ ಆಗಿದ್ದು, ಅದರಂತೆ ನಾಗುರಿ ಸಂಚಾರಿ ಠಾಣಾ ಪೊಲೀಸರು ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿ, ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕೋಟೆಕಾರು ನಿವಾಸಿ ಚರಣ್ ರಾಜ್ (28) ಬಂಧಿತ.ಜು. 19 ರ ಸಂಜೆ ಕಣಚೂರು ಆಸ್ಪತ್ರೆಯಿಂದ ಮಂಗಳೂರು ಆಸ್ಪತ್ರೆಗೆ ಎಮರ್ಜೆನ್ಸಿ ಇದ್ದ ರೋಗಿಯನ್ನು ಅಂಬುಲೆನ್ಸ್ ಮುಖಾಂತರ ಕೊಂಡೊಯ್ಯಲಾಗುತಿತ್ತು. ಈ ಸಂದರ್ಭ
ಇರ್ಟಿಗಾ KA19 MJ8924 ಕಾರಿನ ಚಾಲಕನು ಬೇಜವಾಬ್ದಾರಿಯಾಗಿ ವರ್ತಿಸಿ ಆಂಬ್ಯುಲೆನ್ಸ್ ಹಾದಿಗೆ ಅಡ್ಡವಾಗಿ ಚಲಿಸುತ್ತಾ ರೋಗಿ ಕೊಂಡೊಯ್ಯಲು ಮತ್ತು ಸಮಯಕ್ಕೆ ಸರಿಯಾಗಿ ತಲುಪಿಸಲು ಅಡ್ಡಿಪಡಿಸಿದ್ದನು. ಈ ಕುರಿತು ಆಂಬ್ಯುಲೆನ್ಸ್ ಸಿಬ್ಬಂದಿ ಕಾರಿನ ವೀಡಿಯೋ ತೆಗೆದು ವೈರಲ್ ಮಾಡಿದ್ದ. ಅದರಂತೆ ನಾಗುರಿ ಸಂಚಾರಿ ಠಾಣಾ ಪೊಲೀಸರು ಕಾರನ್ನು ಇಂದು ವಶಕ್ಕೆ ಪಡೆದು ಕೊಂಡಿದ್ದಾರೆ. ಆರೋಪಿ ಕಿವಿಯಲ್ಲಿ ಇಯರ್ ಫೋನ್ ಇಟ್ಟು ಕಾರು ಚಲಾವಣೆ ನಡೆಸುತ್ತಿದ್ದ ಎಂದು ಪೊಲೀಸ್ ತನಿಖೆ ವೇಳೆ ತಿಳಿಸಿದ್ದಾನೆ.

