

ಉಳ್ಳಾಲ: ತೊಕ್ಕೊಟ್ಟು ಮುಖ್ಯರಸ್ತೆಯಿಂದ ಭಟ್ನಗರ, ಚೆಂಬುಗುಡ್ಡೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ಮೂರು ವರ್ಷಗಳ ಹಿಂದೆಯೇ ಅನುದಾನ ದೊರೆತರೂ , ಗುತ್ತಿಗೆದಾರರು ಕೆಲಸವನ್ನು ನಿಧಾನವಾಗಿ ಮಾಡಿದ್ದರಿಂದಾಗಿ ವಿಳಂಬವಾಗಿತ್ತು. ಇದೀಗ ಸುಸಜ್ಜಿತ ರಸ್ತೆಯ ನಿರ್ಮಾಣ ಸ್ಥಳೀಯ ಯುವಕರ ಮುತುವರ್ಜಿಯಿಂದ ನಡೆಯುತ್ತಿದೆ ಎಂದು ಶಾಸಕ ಯು.ಟಿ ಖಾದರ್ ಹೇಳಿದರು.
ಅವರು ತೊಕ್ಕೊಟ್ಟು- ಭಟ್ನಗರ- ಚೆಂಬುಗುಡ್ಡೆ ರಸ್ತೆ ಅಭಿವೃದ್ಧಿ ಕಾರ್ಯವನ್ನು ಭಾನುವಾರ ವೀಕ್ಷಿಸಿ ಮಾತನಾಡಿದರು.
ರಸ್ತೆ ಅವ್ಯವಸ್ಥೆ ಕುರಿತು ಸ್ಥಳೀಯ ಯುವಕರು, ಊರಿನವರು, ಗುತ್ತಿಗೆದಾರರನ್ನು ಮತ್ತು ಅಧಿಕಾರಿಗಳನ್ನು ಪ್ರಶ್ನಿಸಿದ್ದರು. ಅದರಂತೆ ಅವರಿಗೆ ಸ್ಪಷ್ಟೆ ಸೂಚನೆಯನ್ನು ನೀಡಿದ ಪರಿಣಾಮ ಕಾಮಗಾರಿ ಆರಂಭವಾಗಿದೆ. ಅದರ ಗುಣಮಟ್ಟವನ್ನು ಉಳ್ಳಾಲ ನಗರಸಭೆ ಆಡಳಿತ ನೋಡುತ್ತಿದೆ. ಹಿಂದೂ ರುದ್ರಭೂಮಿ, ಜುಮಾ ಮಸೀದಿ ಸಂಪರ್ಕಿಸುವ ಪ್ರಮುಖ ಲಿಂಕ್ ರಸ್ತೆ ಇದಾಗುವುದರಿಂದ ಬಹಳಷ್ಟು ಮಂದಿ ರಸ್ತೆಯನ್ನು ಅವಲಂಬಿತರಾಗಿದ್ದಾರೆ. ಶೀಘ್ರವೇ ಕಾಮಗಾರಿ ಪೂರ್ಣಗೊಂಡು ತೊಕ್ಕೊಟ್ಟುವಿನ ಮಾದರಿ ರಸ್ತೆಯಾಗಲಿ ಎಂದರು.
ಈ ಸಂದರ್ಭ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಈಶ್ವರ್ ಉಳ್ಳಾಲ್, ಉಳ್ಳಾಲ ನಗರಸಭೆ ಅಧ್ಯಕ್ಷೆ ಚಿತ್ರಾ ಚಂದ್ರಕಾಂತ್, ಉಪಾಧ್ಯಕ್ಷ ಐಯೂಬ್ ಮಂಚಿಲ, ಸದಸ್ಯರುಗಳಾದ ಬಾಝಿಲ್ ಡಿಸೋಜ, ಶಶಿ ಹಾಗೂ ಮುಖಂಡರುಗಳಾದ ಸುರೇಶ್ ಭಟ್ನಗರ, ಡೆನ್ನಿಸ್ ಡಿಸೋಜ, ಸ್ಥಳೀಯರಾದ ಪ್ರವೀಣ್, ರೋಷನ್, ಚಂದ್ರ , ವಸಂತ್, ಹಿತೇಶ್, ಸಂತೋಷ್ ಉಪಸ್ಥಿತರಿದ್ದರು.

