ಪಾವೂರು:
ಮಲಾರ್ ನಿವಾಸಿ ಮೋನು ಹತ್ಯೆ ಪ್ರಕರಣದ ಐವರು ಆರೋಪಿಗಳನ್ನು ಪೊಲೀಸರು ವಶಡಿಸಿಕೊಂಡಿದ್ದಾರೆ.
ಮಲಾರ್ ನಿವಾಸಿ ಅಜರ್(27), ಅಲ್ತಾಫ್ (24) , ,ಸಜಿಪ ನಿವಾಸಿ ಅಮೀರ್(26) , ಅರ್ಫಾಝ್ (25) ವಶಕ್ಕೆ ಪಡೆದುಕೊಂಡಿರುವ ಆರೋಪಿಗಳು.

ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಹಂಝ ಪತ್ತೆಗಾಗಿ ಪೊಲೀಸರು ಈಗಾಗಲೇ ಹುಡುಕಾಟ ನಡೆಸುತ್ತಿದ್ದಾರೆ.
ಪಾವೂರು ಗ್ರಾಮ ಪಂಚಾಯತ್ ನ ಮಲಾರು ನಿವಾಸಿ ಪಲ್ಲಿಯಾಕ ಯಾನೆ ಮೋನು (70) ಎಂಬವರನ್ನು ಹತ್ಯೆ ನಡೆಸಲಾಗಿತ್ತು. ಅ.29 ರಂದು ಮೋನು ನಾಪತ್ತೆಯಾಗಿದ್ದರು. ಅಂದು ಸಂಬಂಧಿ ಯುವಕನೋರ್ವ ಪಡೆದುಕೊಂಡ ಬಡ್ಡಿಸಾಲದ ಹಣವನ್ನು ಮರುಪಾವತಿಸುವುದಾಗಿ ನಂಬಿಸಿ ರಿಕ್ಷಾದಲ್ಲಿ ಕರೆದೊಯ್ದಿದ್ದನು. ಬೋಳಿಯಾರು ಮೂಲಕ ಮೋನು ಅವರನ್ನು ಕರೆದೊಯ್ದ ಚಾಲಕ, ಅಲ್ಲಿಂದ ಇತರ ನಾಲ್ಕು ಮಂದಿಯ ತಂಡವನ್ನು ಕುಳ್ಳಿರಿಸಿ ನಿರ್ಜನ ಪ್ರದೇಶವಾಗಿರುವ ಇರಾಪದವಿನ ಕಲ್ಲಿನಕೋರೆ ಬಳಿ ಕರೆದೊಯ್ದಿದ್ದಾರೆ. ಅಲ್ಲಿ ಎಲ್ಲರೂ ಸೇರಿ ಮೋನು ಅವರಲ್ಲಿದ್ದ ಬೈರಾಸಿನಿಂದ ಕುತ್ತಿಗೆಯನ್ನು ಬಿಗಿದು ಹತ್ಯೆ ನಡೆಸಿದ್ದರು. ಅಂದು ಅಲ್ಲೇ ಕಲ್ಲಿನ ಕೋರೆಯ ಹಳ್ಳದಲ್ಲಿ ಮೃತದೇಹವನ್ನು ಬಿಟ್ಟು ಬಂದಿದ್ದ ತಂಡ ಮರುದಿನ ಶುಕ್ರವಾರ ಅ.30 ರಂದು ಹಾರೆ, ಪಿಕ್ಕಾಸು ಕೊಂಡೊಯ್ದು ಗುಂಡಿ ಅಗೆದು ಮೋನು ಅವರನ್ನು ಹೂತಿಟ್ಟಿದ್ದಾರೆ.
ಮೋನು ನಾಪತ್ತೆ ಕುರಿತು ಮನೆಮಂದಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿಚಾರಣೆ ನಡೆಸಿದ ಪೊಲೀಸರು ಮೋನು ನಾಪತ್ತೆಯಾದ ದಿನ ಸಿಸಿಟಿವಿ ದಾಖಲೆಗಳನ್ನು ಸಂಗ್ರಹಿಸಿದ್ದರು. ಅದರಲ್ಲಿ ರಿಕ್ಷಾ ಹೋಗಿರುವುದನ್ನು ಗಮನಿಸಿ, ರಿಕ್ಷಾ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದರು. ಅಲ್ಲದೇ ತನಿಖೆಯ ದಿಕ್ಕು ತಪ್ಪಿಸುವ ಉದ್ದೇಶದಿಂದ ಮೊಬೈಲ್ ಅನ್ನು ಕಡಬ ಪ್ರದೇಶದಲ್ಲಿ ಎಸೆದು ಬಂದಿದ್ದರು. ಆರೋಪಿಗಳು ಗಾಂಜಾ ವ್ಯಸನಿಗಳಾಗಿದ್ದು, ಹಣದ ವೈಷಮ್ಯಕ್ಕೆ ಸಂಬಂಧಿಸಿ ಕೃತ್ಯ ನಡೆದಿರುವ ಸಾಧ್ಯತೆಗಳಿವೆ ಎಂಬುವುದು ಮೇಲ್ನೋಟಕ್ಕೆ ತಿಳಿದು ಬಂದಿದ್ದರು ವಶಪಡಿಸಿಕೊಂಡಿರುವ ಆರೋಪಿಗಳ ವಿಚಾರಣೆಯ ಇನ್ನಷ್ಟು ಸತ್ಯಾಂಶ ಹೊರಬರಲಿದೆ..


