UN NETWORKS
ಉಳ್ಳಾಲ : ಹೊಟ್ಟೆನೋವು ಅನ್ನುತ್ತಾ ಕಟ್ಟಡ ಕಾರ್ಮಿಕರೊಬ್ಬರು ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಬಾವಾ ಬಿಲ್ಡರ್ಸ್ ನಿರ್ಮಾಣ ಹಂತದ ಕಟ್ಟಡದಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.

ಒರಿಸ್ಸಾದ ಮಂಚಗಾಂವ್, ನವರಂಗ್ ಪುರ್ನ ಜಗನ್ನಾಥ ಹರಿಜನ ಎಂಬವರ ಪುತ್ರ ಉಮಾಶಂಕರ್ ಹರಿಜನ (29) ಮೃತರು. ಹಲವು ಸಮಯದಿಂದ ಕಟ್ಟಡ ಕೆಲಸದಲ್ಲಿ ತೊಡಗಿದ್ದ ಉಮಾಶಂಕರ್ ಶನಿವಾರ ರಾತ್ರಿ ಹೊಟ್ಟೆನೋವು ಎಂದು ಜತೆಗಿದ್ದವರಲ್ಲಿ ತಿಳಿಸಿದ್ದರು. ಭಾನುವಾರ ಬೆಳಿಗ್ಗೆ ಆಸ್ಪತ್ರೆಗೆ ಹೋಗೋಣ ಎಂದು ಸಮಾಧಾನಿಸಿದ ಬಳಿಕ ಎಲ್ಲರೂ ಮಲಗಿದ್ದರು. ಭಾನುವಾರ ಬೆಳಿಗ್ಗೆ ಮತ್ತೆ ಹೊಟ್ಟೆನೋವು ಎಂದು ಹೇಳುತ್ತಿದ್ದಂತೆ ಉಮಾಶಂಕರ್ ಸಾವನ್ನಪ್ಪಿದ್ದರು. ಸಾವಿನ ನಿಖರ ಕಾರಣ ಶವಮಹಜರು ವರದಿ ಬಳಿಕವಷ್ಟೇ ತಿಳಿದುಬರಬೇಕಿದೆ. ಮನೆಮಂದಿ ಬಂದ ಬಳಿಕ ಶವಮಹಜರು ನಡೆಯಲಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿರ್ಮಾಣ ಹಂತದ ಕೆಳ ಅಂತಸ್ತಿನಲ್ಲಿ ನೀರು ತುಂಬಿ ಸ್ಥಳೀಯ ವಸತಿ ಸಂಕೀರ್ಣದಲ್ಲಿ ವಾಸಿಸುವವರಿಗೆ ಅನಾರೋಗ್ಯ ಉಂಟಾಗಿತ್ತು. ಈ ಕುರಿತು ಉಳ್ಳಾಲ ನಗರಸಭೆಗೆ ದೂರು ಬಂದ ಹಿನ್ನೆಲೆಯಲ್ಲಿ, ಪೌರಾಯುಕ್ತರು ಹಾಗೂ ಆರೋಗ್ಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಬಾವಾ ಬಿಲ್ಡರ್ಸ್ ಮಾಲೀಕರ ವಿರುದ್ಧ ದಂಡ ವಿಧಿಸಿದ್ದರು. ಇದೀಗ ಕಾರ್ಮಿಕ ಕೂಡಾ ಇಂತಹದ್ದೇ ಅವ್ಯವಸ್ಥೆಯಿಂದ ಶಂಕಿತ ಡೆಂಗ್ಯುಗೆ ಬಲಿಯಾಗಿದ್ದಾರೆ ಅನ್ನುವ ಸಂಶಯ ಸ್ಥಳೀಯರು ವ್ಯಕ್ತಪಡಿಸಿದ್ದಾರೆ.


