UN NETWORKS
ಅಸೈಗೋಳಿ : ಸಾಮಾಜಿಕ, ಧ್ಯಾನಕ್ಕೆ ಸಂಬಂಧಿಸಿದ ಚರಿತ್ರೆ ಶ್ರೀ ಕೃಷ್ಣನ ಜೀವನದಲ್ಲಿದೆ. ವ್ಯಕ್ತಿತ್ವ, ವಿಶಾಲ ಹೃದಯ ಶ್ರೀ ಕೃಷ್ಣನಲ್ಲಿದ್ದ ಕಾರಣ ಹೆಸರು ಇಂದು ವಿಶ್ವ ವ್ಯಾಪಿಯಾಗಿ ಬೆಳೆಯುವಂತಾಗಿದೆ. ಇಂತಹ ವ್ಯಕ್ತಿತ್ವ ಪ್ರತಿಯೊಬ್ಬರಲ್ಲೂ ಬರಬೇಕು ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.


ಅಸೈಗೋಳಿ ಯುವಕ ಮಂಡಲ ಹಾಗೂ ಸಾರ್ವಜನಿಕ ಮೊಸರುಕುಡಿಕೆ ಉತ್ಸವ ಸಮಿತಿಯ ಜಂಟಿ ಆಶ್ರಯದಲ್ಲಿ ಶನಿವಾರ ಅಸೈಗೋಳಿ ಮೈದಾನದಲ್ಲಿ ನಡೆದ 31ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರುಕುಡಿಕೆ ಉತ್ಸವದ ಸಭಾ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಸಭಾ ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ಮಾತನಾಡಿ, ಭಾರತೀಯರು ಕುಟುಂಬ ಪದ್ದತಿಯಲ್ಲಿ ನಂಬಿಕೆ ಇಟ್ಟಿದ್ದು ಹೆತ್ತವರು ವಯೋವೃದ್ಧರಾದಾಗ ಆಶ್ರಮಕ್ಕೆ ಸೇರಿಸುವ ಮಕ್ಕಳು ಭಾರತದಲ್ಲಿ ಹುಟ್ಟಬಾರದು. ನಮ್ಮ ವಿದ್ಯೆಯ ಕೊಡುಗೆ ಹೆತ್ತವರಿಗೂ, ಸಮುದಾಯಕ್ಕೂ ಸಿಗಬೇಕು. ಅಸೈಗೋಳಿಯಲ್ಲಿ ನಡೆಯುವ ಉತ್ಸವದಲ್ಲಿ ಎಲ್ಲಾ ಧರ್ಮೀಯರು ಭಾಗವಹಿಸುವುದರಿಂದ ಇಲ್ಲಿ ಮಾನವೀಯತೆ ಕಾಣಲು ಸಾಧ್ಯ ಎಂದು ಹೇಳಿದರು.
ಕುರ್ನಾಡು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಶಾಂತ ಕಾಜವ ಮಾತನಾಡಿ, ಇವತ್ತು ಮನುಷ್ಯ ವೇದಿಕೆಯಲ್ಲಿ ಜೊತೆಯಾದರೂ ಮನುಷ್ಯತ್ವ ಎನ್ನುವುದು ದೂರವಾಗಿದೆ. ಹಿಂದೆ ಗ್ರಾಮೀಣ ಭಾಗದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ನೆರೆಯವರಿಗೆ ಅಕ್ಕಿ, ತೆಂಗಿನಕಾಯಿ ನೀಡಲಾಗುತ್ತಿತ್ತು, ಇಂದು ಕೊಡುವವರೂ, ಪಡೆಯುವವರೂ ಇಲ್ಲದ ಸ್ಥಿತಿ ಬಂದಿದೆ ಎಂದರು. ಕಾರ್ಯಕ್ರಮದಲ್ಲಿ ಬಿಎಸ್ ಎನ್ ಎಲ್ ಉದ್ಯೋಗಿ ದಿಲೀಪ್ ಕುಮಾರ್ ಅವರಿಗೆ ಗ್ರಾಮ ಗೌರವ, ಲನಿವೃತ್ತ ಮುಖ್ಯ ಶಿಕ್ಷಕ ರವೀಂದ್ರ ರೈ ಕಲ್ಲಿಮಾರ್ ಹಾಗೂ ಅಂತರಾಷ್ಟ್ರೀಯ ಕರಾಟೆ ಪಟು ತೇಜಸ್ ಅಸೈಗೋಳಿ ಇವರನ್ನು ಅಭಿನಂದಿಸಲಾಯಿತು.
ಉತ್ಸವ ಸಮಿತಿ ಅಧ್ಯಕ್ಷ ಉದ್ಯಮಿ ತೇವುನಾಡುಗುತ್ತು ಮಂಜುನಾಥ ಆಳ್ವ ಅಧ್ಯಕ್ಷತೆ ವಹಿಸಿದ್ದರು.
ಮಂಗಳ ಸೇವಾ ಟ್ರಸ್ಟ್ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಉದ್ಯಮಿ ದೇವಣ್ಣ ಶೆಟ್ಟಿ, ಕೊಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನಝರ್ ಷಾ ಪಟ್ಟೋರಿ, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್, ಬಾಳೆಪುಣಿ ಗ್ರಾಮ ಪಂಚಾಯಿತಿ ಸದಸ್ಯ ನಾಸೀರ್ ನಡುಪದವು, ಸಮಾಜ ಸೇವಕ ಜಾನ್ ಮಾರ್ಷಲ್ ಸಲ್ದಾನ, ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ ಅಧ್ಯಕ್ಷ ಶ್ರೀನಿವಾಸ್ ಶೆಟ್ಟಿ ಪುಲ್ಲು, ಬಂಟರ ಸಂಘದ ಅಧ್ಯಕ್ಷ ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು, ಆಲ್ವಿನ್ ಡಿಸೋಜ, ಅಸೈಗೋಳಿ ಯುವಕ ಮಂಡಲದ ಗೌರವಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಪುಲ್ಲು ಮುಖ್ಯ ಅತಿಥಿಗಳಾಗಿದ್ದರು.
ಉತ್ಸವ ಸಮಿತಿಯ ಗೌರವ ಸಲಹೆಗಾರ ಆನಂದ ಕೆ.ಅಸೈಗೋಳಿ ಸ್ವಾಗತಿಸಿದರು. ಅಸೈಗೋಳಿ ಯುವಕ ಮಂಡಲದ ಗೌರವಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಪುಲ್ಲು ವಂದಿಸಿದರು. ಪ್ರಧಾನ ಕಾರ್ಯದರ್ಶಿ ತ್ಯಾಗಂ ಹರೇಕಳ ಕಾರ್ಯಕ್ರಮ ನಿರೂಪಿಸಿದರು.
`ಮನೆಯಲ್ಲಿ ಮಾತ್ರ ಶಕ್ತಿ ಇದ್ದರೆ ಸಾಲದು, ಈ ಶಕ್ತಿ ಸಮಾಜಕ್ಕೂ ಪಸರಿಸಿ, ಹಬ್ಬಕ್ಕೂ ಗೌರವ ಬರಬೇಕು ಎನ್ನುವ ನಿಟ್ಟಿನಲ್ಲಿ ಮೊಸರುಕುಡಿಕೆ ಸಾರ್ವಜನಿಕವಾಗಿ ಆಚರಿಸುವಂತಾಗಿದೆ’
ಪ್ರೊ.ಪಿ.ಎಸ್.ಯಡಪಡಿತ್ತಾಯ, ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ


